March 24, 2025

Chitradurga hoysala

Kannada news portal

ಸಮಾಜದ ಕೆಲ ಶಕ್ತಿಗಳು ಒಕ್ಕೂಟ ವ್ಯವಸ್ಥೆಯ ಸಿದ್ದಾಂತಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವುದು ದೇಶಕ್ಕೆ ಮಾರಕ: ಎನ್ ವೈಜಿ

1 min read

ಸಮಾಜದ ಕೆಲ ಶಕ್ತಿಗಳು ಒಕ್ಕೂಟ ವ್ಯವಸ್ಥೆಯ ಸಿದ್ದಾಂತಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವುದು ದೇಶಕ್ಕೆ ಮಾರಕ: ಎನ್ ವೈ ಜಿ

ಚಿತ್ರದುರ್ಗ ಹೊಯ್ಸಳ ನ್ಯೂಸ್‌/  ಸಂಪಾದಕರು, ಸಿ.ಎನ್.ಕುಮಾರ್,

ವರದಿಗಾರ, ಕುಮಾರ್ ಸ್ವಾಮಿ.

ಮೊಳಕಾಲ್ಮೂರು:

ದೇಶ ಗಣರಾಜ್ಯಗೊಂಡು 76 ವರ್ಷಗಳು ಕಳೆದರೂ ಕೂಡ ಕೆಲ ಜಾತಿ, ಜನಾಂಗದ ಹಿತಾಸಕ್ತಿಗಳು ಕೆಲವು ಸಾಂದರ್ಭಿಕ ಸಮಸ್ಯೆಯ ಹಿನ್ನೆಲೆಯನ್ನಿಟ್ಟುಕೊಂಡು ಒಕ್ಕೂಟ ವ್ಯವಸ್ಥೆಯ ಸಿದ್ಧಾಂತಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದು ದೇಶಕ್ಕೆ ಮಾರಕವಾಗಿ ಪರಿಣಮಿಸಿದೆ ಎಂದು  ಮೊಳಕಾಲ್ಮೂರು ಶಾಸಕ ಎನ್.ವೈ. ಗೋಪಾಲಕೃಷ್ಣ ಬೇಸರ ವ್ಯಕ್ತಪಡಿಸಿದರು.

ತಾಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಪಟ್ಟಣದ ಜೂನಿಯರ್ ಕಾಲೇಜು ಆವರಣದಲ್ಲಿ ಜರುಗಿದ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.

ದೇಶ ಸ್ವತಂತ್ರಗೊಂಡ ಸಂದರ್ಭದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದ ರಚಿಸುವ ಮೂಲಕ ಸರ್ವರಿಗೂ ಮೂಲಭೂತ ಹಕ್ಕುಗಳು,ಕರ್ತವ್ಯ ಮತ್ತು ಸಮಾನತೆಯನ್ನ ಕಲ್ಪಿಸಿಕೊಟ್ಟು ಪ್ರಜಾಪ್ರಭುತ್ವ ರಾಷ್ಟ್ರ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿದ್ದಾರೆ.ಆದರೆ ದೇಶದ ಇತಿಹಾಸದ ಕೆಲ ಸಾಂದರ್ಭಿಕ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಕೆಲ ಜಾತಿ ಜನಾಂಗದವರು ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಮುಂದಾಗಿರುವುದು ಸಂವಿಧಾನದ ಜಾತ್ಯತೀತ ತತ್ವಕ್ಕೆ ವಿರುದ್ಧವಾಗಿದ್ದು ಇದರಿಂದಾಗಿ ದೇಶಕ್ಕೆ ಮಾರಕವಾಗುತ್ತದೆ ಹೊರತು ಯಾವುದೇ ಅನುಕೂಲಕರವಾಗುವುದಿಲ್ಲ ಎಂದರು.
ಸಂವಿಧಾನ ಆಶಯಗಳ ಈಡೇರಿಕೆಯ ನಿಟ್ಟಿನಲ್ಲಿ ನಮ್ಮ ಸರ್ಕಾರ ಆಡಳಿತ ನಡೆಸುತ್ತಿದ್ದು ಸಂವಿಧಾನ ಉಳಿಸಿ ರಕ್ಷಿಸಲು ಸದಾ ವಿನೂತನ ಜನಾಂದೋಲನ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ ಮಹಾತ್ಮ ಗಾಂಧಿಯವರು ಬೆಳಗಾವಿಗೆ ಭೇಟಿ ನೀಡಿದ ಐತಿಹಾಸಿಕ ಕ್ಷಣವನ್ನ ನೆನಪು ಮಾಡಿಕೊಳ್ಳಲು ಸರ್ಕಾರದ ವತಿಯಿಂದ ಮೊನ್ನೆಯಷ್ಟೇ ಬೆಳಗಾವಿಯಲ್ಲಿ ಜೈ ಬಾಪು ಜೈ ಅಂಬೇಡ್ಕರ್ ಜೈ ಸಂವಿಧಾನ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದೆ.
ಗಣರಾಜ್ಯ ವ್ಯವಸ್ಥೆಯಲ್ಲಿ ಬದುಕುವ ಪ್ರತಿಯೊಬ್ಬರು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿದು ಜಾತ್ಯಾತೀತ,ಸದೃಢ ರಾಷ್ಟ್ರ ನಿರ್ಮಾಣಕ್ಕೆ ಕೈ ಜೋಡಿಸಬೇಕೆಂದು ತಿಳಿಸಿದರು.

ತಹಸಿಲ್ದಾರ್ ಟಿ.ಜಗದೀಶ್ ಮಾತನಾಡಿ 76ನೇ ಗಣರಾಜ್ಯೋತ್ಸವದ ಸಂದೇಶ ನೀಡಿದರು.
ಪಟ್ಟಣದ ವಿವಿಧ ಶಾಲೆಯ ಮಕ್ಕಳು ಪಥ ಸಂಚನದಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಿದರು.
ರಾಷ್ಟ್ರಭಕ್ತಿಯನ್ನು ಸಾರುವ ಗೀತೆಗಳಿಗೆ ವಿವಿಧ ಶಾಲಾ ಮಕ್ಕಳು ನಡೆಸಿಕೊಟ್ಟ ಆಕರ್ಷಕ ಸಾಂಸ್ಕೃತಿಕ ನೃತ್ಯ ಪ್ರದರ್ಶನ ನೋಡುಗರ ಗಮನ ಸೆಳೆಯಿತು. ಪಿಎಸ್ಐ ಪಾಂಡುರಂಗಪ್ಪ ನೇತೃತ್ವದ ತಂಡ ಶಾಸಕರಿಗೆ ಗೌರವ ವಂದನೆ ಸಲ್ಲಿಸಿತು.ಇದೇ ವೇಳೆ ಕೃಷಿ ಇಲಾಖೆ ರೈತ ಫಲಾನುಭವಿಗಳಿಗೆ ಸಹಾಯಧನದ ಅಡಿಯಲ್ಲಿ ವಿವಿಧ ಯಂತ್ರೋಪಕರಣಗಳನ್ನು ವಿತರಿಸಲಾಯಿತು. ಗಾಯತ್ರಿ ಶಾಲೆ ಶಿಕ್ಷಕ ಓಬಣ್ಣ ಕಾರ್ಯಕ್ರಮ ನಿರೂಪಿಸಿದರು.

ವೇದಿಕೆಯಲ್ಲಿ ಇ,ಓ.ಹನುಮಂತಪ್ಪ ಸಿಪಿಐ ವಸಂತ ವಿ. ಅಸೋದೆ,ಬಿಇಓ ನಿರ್ಮಲಾ ದೇವಿ,ಪಶು ಇಲಾಖೆ ಎಡಿ ಡಾ.ರಂಗಪ್ಪ,ಅಪರಾಧ ವಿಭಾಗ ಪಿಎಸ್ಐ ಈರೇಶ್,ಪ.ಪಂ ಅಧಕ್ಷೆ ಲೀಲಾವತಿ ಸಿದ್ದಣ್ಣ,ಸದಸ್ಯರಾದ ಖಾದರ್, ಅಬುಲ್ಲಾ,ಪ್ರಾಂಶುಪಾಲ, ಗೋವಿಂದಪ್ಪ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲೀಂ ಉಲ್ಲಾ, ಮುಖಂಡರಾದ ಜಿ.ಪ್ರಕಾಶ್,
ಎಂ.ಓ.ಮಂಜುನಾಥ ಸ್ವಾಮಿ ನಾಯಕ, ಗೋವಿಂದಪ್ಪ, ಜಿಯಾಉಲ್ಲಾ,ಸೇರಿದಂತೆ ಹಲವರಿದ್ದರು.

About The Author

Leave a Reply

Your email address will not be published. Required fields are marked *