ಮುಂದಿನ ಸ್ಥಳೀಯ ಚುನಾವಣೆಗೆ ಪಕ್ಷವನ್ನು ಸಂಘಟಿಸಿ:ಸತೀಶ್ ಜಾರಕಿಹೊಳಿ
1 min readಶೀಘ್ರದಲ್ಲಿಯೇ ನಡೆಯುವ ರಾಜ್ಯದ ಎಲ್ಲಾ ಗ್ರಾಪಂ, ತಾಪಂ ಹಾಗೂ ಜಿಪಂ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ತಂದುಕೊಡುವ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರುಗಳು ಈಗಿನಿಂದಲೇ ಶ್ರಮಿಸುವಂತೆ ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಕರೆ ನೀಡಿದರು.
ಹುಬ್ಬಳ್ಳಿ-ಧಾರವಾಡದ ನಡುವೆ ನವಿಲೂರು ಗ್ರಾಮದಲ್ಲಿ ನಡೆದ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದ ಸತೀಶ್ ಜಾರಕಿಹೊಳಿ ಬ್ಲಾಕ್, ಬೂತ್ ಮತ್ತು ವಾರ್ಡ್ ಮಟ್ಟದಲ್ಲಿ ಕಾರ್ಯಕರ್ತರು ಪ್ರತಿ ಮನೆ ಮನೆಗೆ ಹೋಗಿ ಕಾಂಗ್ರೆಸ್ ಪಕ್ಷ ಬಡವರಿಗಾಗಿ ನೀಡಿರುವ ಅನೇಕ ಯೋಜನೆಗಳನ್ನು ತಿಳಿಸಿ ಕೋಮುವಾದಿ ಬಿಜೆಪಿ ವಿರುದ್ದ ಜನ ಎಚ್ಚರಿಕೆಯಿಂದಿರುವಂತೆ ಮನವರಿಕೆ ಮಾಡುವ ಜವಾಬ್ದಾರಿ ನಿಮ್ಮಗಳ ಮೇಲಿದೆ ಎಂದು ಹೇಳಿದರು.
ಧರ್ಮದ ಹೆಸರಿನಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ.ಜಾತಿ ಜಾತಿಗಳ ನಡುವೆ ಕಿತ್ತಾಟವಿಟ್ಟು ಓಟ್ ಬ್ಯಾಂಕ್ ರಾಜಕಾರಣ ಮಾಡಿಕೊಳ್ಳಲು ಬಿಡಬಾರದು. ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಅನ್ನಭಾಗ್ಯ ಯೋಜನೆಯಡಿ ಬಡವರಿಗೆ ಉಚಿತ ಅಕ್ಕಿ ನೀಡಿದರು. ಅದೇ ರೀತಿ ಅನೇಕ ಮಹಾತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೆ ತಂದಿರುವುದನ್ನು ಪ್ರತಿಯೊಬ್ಬರಿಗೂ ತಲುಪಿಸುವ ಹೊಣೆಗಾರಿಕೆ ನಿಮ್ಮದು ಎಂದು ಕಾರ್ಯಕರ್ತರಿಗೆ ತಿಳಿಸಿದರು.
ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಮತ್ತು ಕೆ.ಪಿ.ಸಿ.ಸಿ.ಕೋಆರ್ಡಿನೇಟರ್ ವಿದ್ಯಾನಗರ ಹುಬ್ಬಳ್ಳಿ ವಿಭಾಗ ಚಿತ್ರದುರ್ಗದ ಮುನಿರಾ ಎ.ಮಕಾಂದಾರ್, ಧಾರವಾಡ ಗ್ರಾಮೀಣ ಕ್ಷೇತ್ರದ ಕೋಆರ್ಡಿನೇಟರ್ ಚಿತ್ರದುರ್ಗದ ಟಿ.ಅನಿಲ್ಕುಮಾರ್ ಚಿಕ್ಕಂದವಾಡಿ ಇವರುಗಳು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಚಿತ್ರದುರ್ಗ ಜಿಲ್ಲೆಯ ಆರು ಕ್ಷೇತ್ರಗಳ ಪೈಕಿ ಐದರಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕಾಗಿರುವುದರಿಂದ ಮುಖಂಡರುಗಳು ಚಿತ್ರದುರ್ಗ ಜಿಲ್ಲೆಯ ಸಂಘಟನೆ ಕಡೆ ವಿಶೇಷ ಗಮನ ನೀಡುವಂತೆ ಸತೀಶ್ಜಾರಕಿ ಹೊಳಿರವರಲ್ಲಿ ಮನವಿ ಮಾಡಿದರು.
ಮಾಜಿ ಸಚಿವರುಗಳಾದ ವೀರಕುಮಾರ್ ಪಾಟೀಲ್, ಎ.ಎಂ.ಹಿಂಡಸಗೇರಿ, ಮಾಜಿ ಎಂ.ಎಲ್.ಸಿ.ನಾಗರಾಜ್ಛಬ್ಬಿ, ರಾಜ್ಯದ ವಿವಿಧ ಜಿಲ್ಲೆಗಳ ಬ್ಲಾಕ್ ಅಧ್ಯಕ್ಷರು, ಮಹಿಳಾ ಸದಸ್ಯರುಗಳು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದರು.