ಒಕ್ಕಲಿಗರನ್ನು 2 ಎ ವರ್ಗಕ್ಕೆ ಸೇರಿಸಲು ಒತ್ತಾಯ.
1 min readಚಿತ್ರದುರ್ಗ ಫೆ. ೨೭
ಒಕ್ಕಲಿಗರನ್ನು ೨ಎ ವರ್ಗಕ್ಕೆ ಸೇರಿಸಬೇಕು ಮತ್ತು ಒಕ್ಕಲಿಗರ ಅಭಿವೃದ್ದಿ ಪ್ರಾಧಿಕಾರ ರಚನೆಗೆ ಒತ್ತಾಯಿಸಿ ಮಾರ್ಚ್ ೧೩ರಂದು ಬೆಂಗಳೂರಿನಲ್ಲಿ ಒಕ್ಕಲಿಗರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟದ ಜಿಲ್ಲಾಧ್ಯಕ್ಷ ಕೆ.ಟಿ.ರುದ್ರಮುನಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಕ್ಕಲಿಗರು ಎಂದರೆ ಉಳುಮೆ ಮಾಡುವರು. ಆದರೆ ಒಕ್ಕಲಿಗರನ್ನು ಜಾತಿ ಎಂದು ಕರೆಯಲಾಗುತ್ತಿದೆ. ಈಗಾಗಲೇ ಒಕ್ಕಲಿಗರನ್ನು ೨ಎ ವರ್ಗಕ್ಕೆ ಸೇರಿಸಲಾಗಿದೆ. ಕುಂಚಿಟಿಗ ಒಕ್ಕಲಿಗ ಸೇರಿದಂತೆ ೧೧೫ ಉಪಜಾತಿಗಳಿದ್ದು ಇವುಗಳನ್ನು ೨ಎ ವರ್ಗಕ್ಕೆ ಸೇರಿಸಿಲ್ಲ. ಇದರಿಂದಾಗಿ ಶಿಕ್ಷಣ, ಉದ್ಯೋಗದಲ್ಲಿ ಬಾರಿ ಅನ್ಯಾಯವಾಗುತ್ತಿದೆ. ಇದಕ್ಕಾಗಿ ಒಕ್ಕಲಿಗ ಸಮುದಾಯದ ಎಲ್ಲಾ ಉಪಜಾತಿಗಳನ್ನು ೨ಎ ವರ್ಗಕ್ಕೆ ಸೇರಿಸಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ ಎಂದರು.
೩ಎ ವರ್ಗದಿಂದ ೨ಎ ವರ್ಗಕ್ಕೆ ಸೇರಿಸಬೇಕು. ಒಕ್ಕಲಿಗರ ಅಭಿವೃದ್ದಿ ಪ್ರಾಧಿಕಾರ ರಚನೆ ಮಾಡಿ ಒಂದು ಸಾವಿರ ಅನುದಾನ ಮೀಸಲಿಡಬೇಕು. ಕೇಂದ್ರ ಸರ್ಕಾರ ಒಕ್ಕಲಿಗ ಎಂಬ ಉಪಜಾತಿಗೆ ಈಗಾಗಲೇ ಒಬಿಸಿ ಮೀಸಲಾತಿ ಸೌಲಭ್ಯ ನೀಡಿದೆ. ಅದೇ ಸಮುದಾಯದ ಕುಂಚಿಟಿಗ ಸೇರಿದಂತೆ ೧೧೫ ಉಪಜಾತಿಗಳನ್ನು ೨ಎ ವರ್ಗಕ್ಕೆ ಸೇರಿಸಬೇಕೆಂದು ಸಮಾವೇಶದ ಬಳಿಕ ಸರ್ಕಾರದ ಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಈಗಾಗಲೇ ರಾಜ್ಯದಲ್ಲಿ ಒಕ್ಕಲಿಗರ ಒಕ್ಕೂಟ ರಚನೆ ಮಾಡಲಾಗಿದ್ದು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಜಿಲ್ಲೆಯಲ್ಲಿಯೂ ಮಾಡಲಾಗಿದೆ. ಅಧ್ಯಕ್ಕರಾಗಿ ತಾವಿದ್ದು ಉಳಿದ ಪದಾದಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದರು.
ಪಾದಯಾತ್ರೆ ಅಥವಾ ಪ್ರತಿಭಟನೆ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುವುದಿಲ್ಲ. ಸರ್ಕಾರಕ್ಕೆ ಬೆದರಿಕೆ ಹಾಕುವುದಿಲ್ಲ. ನಮ್ಮ ಹೋರಾಟ ಶಾಂತಿಯುತ. ೧೩ ರಂದು ಬೆಂಗಳೂರಿನ ನೆಲಮಂಗಲ ತಾಲ್ಲೂಕಿನ ನಾಗನೂರು ಗ್ರಾಮದ ಬಿ.ಜಿ.ಎಸ್.ವರ್ಲ್ಡ್ ಸ್ಕೂಲ್ ಆವರಣದಲ್ಲಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಾರಥ್ಯದಲ್ಲಿ ಸಮಾವೇಶ ನಡೆಯಲಿದೆ. ಲಕ್ಷ ಲಕ್ಷ ಜನರು ಭಾಗವಹಿಸಲಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಒಕ್ಕಲಿಗ ಸಮುದಾಯದ ಶಾಸಕರು, ಸಂಸದರು, ಸಚಿವರುಗಳು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಪ್ರಮುಖರು ಭಾಗಿಯಾಗ ಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಗೌರವಾಧ್ಯಕ್ಷ ಜಿ.ಎಸ್.ಪರಮೇಶ್ವರಪ್ಪ, ಕಾರ್ಯದರ್ಶಿ ಹೇಮಂತ್ಕುಮಾರ್, ವಕ್ತಾರ ಚೇತನ್ ಬಾಬು, ಉಪಾಧ್ಯಕ್ಷ ಓ.ಎಲ್.ಜ್ಞಾನೇಶ್, ಖಜಾಂಚಿ ಉಮೇಶ್, ಕಾರ್ಯಾಧ್ಯಕ್ಷ ಎಸ್.ಎಂ.ಕಾಮೇಗೌರ, ತಾ.ಪಂ.ಮಾಜಿ ಅಧ್ಯಕ್ಷ ಪರಮೇಶ್ವರಪ್ಪ ಹಾಗೂ ಇತರರು ಉಪಸ್ಥಿತರಿದ್ದರು.