March 29, 2024

Chitradurga hoysala

Kannada news portal

ಟ್ವಿಟರ್ ಮೂಲಕ 24 ಕೋಟಿ ಜನ ರಾಹುಲ್‌ಗಾಂಧಿ ಹುಟ್ಟುಹಬ್ಬಕ್ಕೆ ಶುಭ ಕೋರಿರುವುದು ಪ್ರಪಂಚದಲ್ಲೆ ಹೆಚ್ಚು-ರಾಜ್ಯಾಧ್ಯಕ್ಷ ಜಿ.ಎಸ್.ಮಂಜುನಾಥ್ …

1 min read

ಟ್ವಿಟರ್ ಮೂಲಕ 24 ಕೋಟಿ ಜನ ರಾಹುಲ್‌ಗಾಂಧಿ ಹುಟ್ಟುಹಬ್ಬಕ್ಕೆ ಶುಭ ಕೋರಿರುವುದು ಪ್ರಪಂಚದಲ್ಲೆ ಹೆಚ್ಚು-ರಾಜ್ಯಾಧ್ಯಕ್ಷ ಜಿ.ಎಸ್.ಮಂಜುನಾಥ್ …

ಚಿತ್ರದುರ್ಗ:

ರಾಹುಲ್‌ ಗಾಂಧಿಯಂತ ಧೀಮಂತ ನಾಯಕ ಕಾಂಗ್ರೆಸ್ ಪಕ್ಷಕ್ಕೆ ಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಸಂಘಟಿತ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಜಿ.ಎಸ್.ಮಂಜುನಾಥ್ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ರಾಹುಲ್‌ಗಾಂಧಿರವರ ಹುಟ್ಟುಹಬ್ಬದ ಅಂಗವಾಗಿ ಕೇಕ್ ಕತ್ತರಿಸಿ ಮಾತನಾಡಿದ ಜಿ.ಎಸ್.ಮಂಜುನಾಥ್ ಟ್ವಿಟರ್ ಮೂಲಕ ೨೪ ಕೋಟಿ ಜನ ರಾಹುಲ್‌ಗಾಂಧಿ ಹುಟ್ಟುಹಬ್ಬಕ್ಕೆ ಶುಭ ಕೋರಿರುವುದು ಪ್ರಪಂಚದಲ್ಲೆ ಹೆಚ್ಚು. ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ.ಯವರು ರಾಹುಲ್‌ಗಾಂಧಿಯನ್ನು ಅವಹೇಳನವಾಗಿ ಟೀಕಿಸುತ್ತಿದ್ದಾರೆ. ಗಾಂಧಿ ಕುಟುಂಬ ದೇಶಕ್ಕೆ ಅಘಾದವಾದ ಕೊಡುಗೆ ನೀಡಿದೆ ಎನ್ನುವುದನ್ನು ಮೊದಲು ಕೋಮುವಾದಿ ಬಿಜೆಪಿ.ಯವರು ಅರ್ಥಮಾಡಿಕೊಳ್ಳಲಿ ಎಂದು ವಿರೋಧಿಗಳಿಗೆ ತಿರುಗೇಟು ನೀಡಿದರು.
ಕೋವಿಡ್ ಎರಡನೆ ಅಲೆ ವ್ಯಾಪಕವಾಗಿ ಹರಡುತ್ತಿರುವುದರಿಂದ ರಾಜ್ಯದಲ್ಲಿ ಲಾಕ್‌ಡೌನ್ ಘೋಷಿಸಿರುವುದು ೪೯ ದಿನಕ್ಕೆ ಕಾಲಿಟ್ಟಿದೆ. ಕಳೆದ ವರ್ಷವೇ ರಾಹುಲ್‌ಗಾಂಧಿ ಅಂತರಾಷ್ಟ್ರೀಯ ವಿಮಾನ ಹಾರಾಟವನ್ನು ಬಂದ್ ಮಾಡಿ. ಅಮೇರಿಕಾ ಅಧ್ಯಕ್ಷ ಟ್ರಂಪ್ ಭಾರತ ಭೇಟಿಗೆ ಬರುವುದು ಬೇಡ ಎಂದು ಪಾರ್ಲಿಮೆಂಟ್‌ನಲ್ಲಿ ಹೇಳಿದಾಗ ಪ್ರಧಾನಿ ಮೋದಿ ಇನ್ನಿತರರು ಹಾಸ್ಯ ಮಾಡಿದರು. ಈಗ ರಾಹುಲ್‌ರವರು ಹೇಳಿದ್ದೆ ನಿಜವಾಗಿದೆ. ಒಂದು ಕೋಟಿ ನಲವತ್ತು ಲಕ್ಷ ಲಸಿಕೆ ಭಾರತಕ್ಕೆ ತಲುಪಿದೆ ಕೇವಲ ಶೇ.ಐದರಷ್ಟು ಲಸಿಕೆ ನೀಡಲಾಗಿದೆ. ಇನ್ನು ಉಳಿದವರಿಗೆ ನೀಡುವುದು ಯಾವಾಗ ಎಂದು ಬಿಜೆಪಿ.ಯನ್ನು ಪ್ರಶ್ನಿಸಿದರು.
ರಾಹುಲ್‌ಗಾಂಧಿ ನಮ್ಮ ನಾಯಕ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತಿದೆ. ಅವರ ವಿಚಾರಧಾರೆಗಳನ್ನು ಇಂದಿನ ಯುವ ಪೀಳಿಗೆ ತಿಳಿದುಕೊಂಡು ಅವರ ಮಾರ್ಗದರ್ಶನದಲ್ಲಿ ನಡೆಯಬೇಕಿದೆ ಎಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಮಾತನಾಡಿ ಗಾಂಧಿ ಕುಟುಂಬ ದೇಶಕ್ಕಾಗಿ ತ್ಯಾಗ ಮಾಡಿದೆ. ಇಂದಿರಾಗಾಂಧಿ ಹತ್ಯೆಯಾದ ನಂತರ ಅವರ ಮಗ ರಾಜೀವ್‌ಗಾಂಧಿ ದೇಶದ ಪ್ರಧಾನಿಯಾಗಿ ಕಷ್ಟ ಕಾಲದಲ್ಲಿ ಭಾರತವನ್ನು ಮುನ್ನಡೆಸಿಕೊಂಡು ಹೋಗಿ ನಂತರ ಅವರು ಹತ್ಯೆಯಾದರು. ಗಾಂಧಿ ಕುಟುಂಬದ ರಾಹುಲ್ ಈಗ ಐದನೆ ತಲೆಮಾರಿನವರು. ಸೋನಿಯಾಗಾಂಧಿ ಇಟಿಲಿಯಿಂದ ಬಂದು ನಮ್ಮ ದೇಶದ ಸಂಸ್ಕೃತಿಯನ್ನು ಅಳವಡಿಸಿಕೊಂಡಿದ್ದಾರೆ. ನಿಂದನೆ, ಟೀಕೆಗಳನ್ನು ರಾಹುಲ್‌ಗಾಂಧಿ ನಗು ನಗುತ್ತಲೆ ಸ್ವೀಕರಿಸುತ್ತಾರೆ. ಸ್ವಾತಂತ್ರ್ಯ, ದೇಶಕ್ಕಾಗಿ ಹೋರಾಡಿದ ಗಾಂಧಿ ವಂಶವನ್ನು ಟೀಕಿಸುವ ನೈತಿಕತೆ ಬಿಜೆಪಿ.ಗಿಲ್ಲ ಎಂದು ಕುಟುಕಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಡಿ.ಎನ್.ಮೈಲಾರಪ್ಪ, ಕೆ.ಪಿ.ಸಂಪತ್‌ಕುಮಾರ್, ಎ.ಸಾಧಿಕ್‌ವುಲ್ಲಾ, ನಗರಸಭೆ ಮಾಜಿ ಅಧ್ಯಕ್ಷ ಎಂ.ಹನೀಫ್, ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎನ್.ಡಿ.ಕುಮಾರ್, ಶಿಕ್ಷಕ ಮತ್ತು ಪದವೀಧರ ವಿಭಾಗದ ಜಿಲ್ಲಾಧ್ಯಕ್ಷ ಮುದಸಿರ್ ನವಾಜ್, ಮಹಮದ್‌ಸಾಬ್ ಜಿ.ಆರ್.ಹಳ್ಳಿ, ಮೋಕ್ಷರುದ್ರಸ್ವಾಮಿ, ಅಸಂಘಟಿತ ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಮೋಹನ್‌ಪೂಜಾರಿ ಈ ಸಂದರ್ಭದಲ್ಲಿ ಹಾಜರಿದ್ದರು.

About The Author

Leave a Reply

Your email address will not be published. Required fields are marked *