April 20, 2024

Chitradurga hoysala

Kannada news portal

ವೃತ್ತಿ ನಿರತರಿಗೊಂದು ಶುಭಾಶಯಗಳು…….

1 min read
ಎಚ್. ಕೆ. ವಿವೇಕಾನಂದ*

ವೃತ್ತಿ ನಿರತರಿಗೊಂದು ಶುಭಾಶಯಗಳು…….

ವೈದ್ಯರ ದಿನ,
ಪತ್ರಕರ್ತರ ದಿನ,
ಲೆಕ್ಕಪರಿಶೋಧಕರ ದಿನ
ಅಂಚೆ ಕಾರ್ಮಿಕರ ದಿನ…..

ಎಲ್ಲವೂ ಜುಲೈ 1 ಎಂದು ಕ್ಯಾಲೆಂಡರ್ ತೋರಿಸುತ್ತಿದೆ. ಇನ್ನಷ್ಟು ವಿಶೇಷ ವೃತ್ತಿಗಳ ದಿನವೂ ಇರಬಹುದು……..

ಇರಲಿ, ಸಮಾಜದ ವಿವಿಧ ವೃತ್ತಿಗಳು ಮತ್ತು ಅದರಲ್ಲಿ

ತೊಡಗಿಸಿಕೊಂಡಿರುವವರಿಗೆ ಒಂದು ಗೌರವ ಮತ್ತು ಕೃತಜ್ಞತೆ ಅರ್ಪಿಸುವ ದೃಷ್ಟಿಯಿಂದ ಈ ವಿಭಾಗದಲ್ಲಿ ನಡೆದ ಮಹತ್ವದ ಘಟನೆಯ ದಿನವನ್ನು ನೆಪವಾಗಿ ಇಟ್ಟುಕೊಂಡು ಆಚರಿಸಲಾಗುತ್ತದೆ.

ಶತಮಾನಗಳಿಂದ ಶತಮಾನಕ್ಕೆ, ದಶಕಗಳಿಂದ ದಶಕಕ್ಕೆ, ವರ್ಷಗಳಿಂದ ವರ್ಷಕ್ಕೆ ವೃತ್ತಿಗಳು ಏರಿಕೆಯಾಗುತ್ತಿದ್ದರೆ ಅದೇ ಸಮಯದಲ್ಲಿ ವೃತ್ತಿಯ ನೈತಿಕ ಮೌಲ್ಯಗಳು ಕುಸಿಯುತ್ತಾ ಸಾಗುತ್ತಿದೆ. ಇದನ್ನು ವಿವಿಧ ರೀತಿಯಲ್ಲಿ ಅರ್ಥೈಸಬಹುದು. ಅಭಿವೃದ್ಧಿ, ಆಧುನಿಕತೆ ಎಂದೂ ಕರೆಯಬಹುದು ಅಥವಾ ವಿನಾಶದ ಅಂಚಿನತ್ತ ಎಂದೂ ಭಾವಿಸಬಹುದು.

ಬಹುಮುಖ್ಯವಾಗಿ ಜನಸಂಖ್ಯೆಯ ಸ್ಪೋಟ, ಅದರಿಂದಾಗಿ ಸಂಪನ್ಮೂಲಗಳ ಕೊರತೆ, ಆ ಕಾರಣದಿಂದಾಗಿ ವಾಣಿಜ್ಯೀಕರಣ, ಅದಕ್ಕಾಗಿಯೇ ಏರ್ಪಟ್ಟ ಸ್ಪರ್ಧೆ, ಅದನ್ನು ಗೆಲ್ಲಲು ತಂತ್ರ ಕುತಂತ್ರ ಕೊನೆಗೆ Success at any cost ಸಿದ್ದಾಂತಕ್ಕೆ ಶರಣು….

ಆರೋಗ್ಯ ಎಂಬುದು ಮನುಷ್ಯನ ಮೂಲಭೂತ ಅವಶ್ಯಕತೆ. ಅದರಲ್ಲಿ ಏರುಪೇರಾದರೆ ಆತ ನೆಮ್ಮದಿಯಿಂದ ಇರಲಾರ. ಅದರಿಂದಾಗಿಯೇ ವೈದ್ಯರನ್ನು ದೇವರ ಸಮಾನರು ಎಂದು ಕರೆಯಲಾಗುತ್ತದೆ. ವೈದ್ಯಕೀಯ ಕ್ಷೇತ್ರ ಅತ್ಯಂತ ಕಠಿಣ ಶೈಕ್ಷಣಿಕ ಅಧ್ಯಯನ ವಿಭಾಗ ಎಂದೂ ಪರಿಗಣಿಸಲ್ಪಟ್ಟಿದೆ. ಆದ್ದರಿಂದ ಬಹಳ ಬುದ್ದಿವಂತರು ಮಾತ್ರ ಅದನ್ನು ಓದಲು ಸಾಧ್ಯ. ಅಂದರೆ ಅಂಕಗಳ ಲೆಕ್ಕದಲ್ಲಿ ಅತಿಹೆಚ್ಚು ಪಡೆದವರ ಮೊದಲ ಆಯ್ಕೆ ಡಾಕ್ಟರ್ ಎಂದು ಹೇಳಲಾಗುತ್ತಿತ್ತು. (ಈಗ ಸ್ವಲ್ಪ ಬದಲಾವಣೆ ಆಗಿದೆ.)

” ವೈದ್ಯಕೀಯ ಕ್ಷೇತ್ರ ಎಷ್ಟು ಮುಂದುವರಿದಿದೆ ಎಂದರೆ, ಈಗ ವಿಶ್ವದಲ್ಲಿ ಕೆಲವೇ ಆರೋಗ್ಯವಂತರು ಮಾತ್ರ ಕಾಣ ಸಿಗುತ್ತಾರೆ ” ಎಂಬ ಹಾಸ್ಯ ಮತ್ತು ವ್ಯಂಗ್ಯದ ಮಾತು ಪ್ರಚಲಿತದಲ್ಲಿದೆ. ಕಾರಣ ಈ ಕ್ಷೇತ್ರ ವಾಣಿಜ್ಯೀಕರಣಗೊಂಡಿರುವುದರಿಂದ ಕಾರ್ಪೊರೇಟ್ ಮಾಫಿಯಾಗಳು ಇದನ್ನು ಆಳುತ್ತಿದ್ದಾರೆ. ಇದೊಂದು ದಂಧೆ, ಅನವಶ್ಯಕ ಚಟುವಟಿಕೆಗಳೇ ಹೆಚ್ಚು ಕಾಣುತ್ತಿವೆ ಎಂಬ ಆರೋಪ ಬಲವಾಗಿ ಕೇಳಿಬರುತ್ತಿದೆ. ಅದರ ಪರಿಣಾಮ ಡಾಕ್ಟರುಗಳಿಗೆ ಕೆಟ್ಟ ಹೆಸರು ಬರುತ್ತಿದೆ.

ಹಾಗೆಯೇ, ಬುದ್ದಿವಂತರ ಮತ್ತೊಂದು ಕ್ಷೇತ್ರ ಪತ್ರಿಕೋದ್ಯಮ. ಸಮಾಜದ ಸ್ವಾಸ್ಥ್ಯ ಕಾಪಾಡುವ ಗುರುತರ ಜವಾಬ್ದಾರಿಯನ್ನು ಹೊತ್ತಿದೆ. ವೈದ್ಯಕೀಯ ಕ್ಷೇತ್ರದಂತೆ ಇದೂ ಸಹ ಕಾರ್ಪೊರೇಟ್ ಮಾಫಿಯಾಗಳ ಕೈಗೆ ಸಿಲುಕಿ ಕಲುಷಿತಗೊಂಡಿರುವುದು ದಿನನಿತ್ಯದ ಅನುಭವಕ್ಕೆ ಬರುತ್ತಿದೆ. ಇತ್ತೀಚೆಗೆ ಇವರ ಅತಿರೇಕದ, ವಿವೇಚನಾ ರಹಿತ ನಡವಳಿಕೆಯಿಂದ ಜನರ ಆಕ್ರೋಶ ಮತ್ತು ಅಪಹಾಸ್ಯಕ್ಕೆ ಗುರಿಯಾಗುತ್ತಿದ್ದಾರೆ.

ಇನ್ನು ಸಾಮಾನ್ಯರಿಗೆ ಅಷ್ಟೇನು ಮಹತ್ವವಿಲ್ಲದ ಆದರೆ ಇತ್ತೀಚಿನ ಡಿಜಿಟಲ್ ಇಂಡಿಯಾ ಕಾರಣದಿಂದಾಗಿ ಒಂದಷ್ಟು ಮಹತ್ವ ಪಡೆದ ಕ್ಷೇತ್ರ ಲೆಕ್ಕಪರಿಶೋಧಕರದು. ಇಲ್ಲಿ ಅಂಕಿಅಂಶಗಳ ಆಟವೇ ಮುಖ್ಯವಾದ್ದರಿಂದ ಇದು ಸಮಾಜದ ಮಾನಸಿಕತೆಯ ಪ್ರತಿಬಿಂಬ. ಸಧ್ಯ ತುಂಬಾ ಪ್ರಾಮಾಣಿಕತೆ ಇಲ್ಲಿ ನಿರೀಕ್ಷಿಸಲಾಗದು. ಬ್ಯಾಲೆನ್ಸ್ ಶೀಟ್ ರೀತಿ ವ್ಯವಹಾರಗಳು ಸಹ ಬ್ಯಾಲೆನ್ಸ್ ಆಗಿಯೇ ಇರುತ್ತದೆ.

ಆಧುನಿಕ ತಂತ್ರಜ್ಞಾನದ ಭರದಲ್ಲಿ ಹಿನ್ನೆಲೆಗೆ ಸರಿಯುತ್ತಿರುವ ವಿಭಾಗ ಅಂಚೆ ಕಾರ್ಮಿಕರದು. ಕೆಲ ಕಾಲದ ಹಿಂದೆ ಸುದ್ದಿಯ ಮೂಲದ ಬಹುಮುಖ್ಯ ಪಾತ್ರದಾರಿಯಾಗಿದ್ದ ಅಂಚೆಯೊಂದಿಗೆ ನಮ್ಮೆಲ್ಲರದು ಭಾವನಾತ್ಮಕ ಸಂಬಂಧ. ವೈಯಕ್ತಿಕ, ಉದ್ಯೋಗದ ಮತ್ತು ಕೌಟುಂಬಿಕ ಯೋಗಕ್ಷೇಮಗಳ, ದುಃಖ ದುಮ್ಮಾನಗಳ ಅಕ್ಷರ ರೂಪದ ಅಂಚೆ ಇಂದು ಬಹುತೇಕ ಇಂಟರ್ ನೆಟ್ ರೂಪವಾಗಿ ಬದಲಾಗಿದೆ.

ಈಗ ಇದೆಲ್ಲಾ ಇತಿಹಾಸ,
2021 ರ ವರ್ತಮಾನ ಈ ಸಮಾಜ ಮತ್ತೆ ಯು ಟರ್ನ್ ತೆಗೆದುಕೊಂಡು ಸಾಗುವ ಮುನ್ಸೂಚನೆ ದೊರೆಯುತ್ತಿದೆ. ಮಾನವೀಯ ಮೌಲ್ಯಗಳ ವಿರುದ್ಧ ವೇಗವಾಗಿ ಸಾಗುತ್ತಿದ್ದ ವೃತ್ತಿಗಳು ದಿಢೀರ್ ಸ್ತಬ್ಧವಾಗಿದೆ. ಜನರಿಗೆ ದಿಕ್ಕು ತೋಚದಂತಾಗಿದೆ.

ಹೊಟ್ಟೆ ಪಾಡಿನ ವೃತ್ತಿಗಳು ಕ್ರಮೇಣ ಕೊಳ್ಳುಬಾಕ ಸಂಸ್ಕೃತಿಯ ಫಲವಾಗಿ ಭ್ರಷ್ಟಗೊಂಡು ಮುನ್ನಡೆಯುತ್ತಿದ್ದಾಗ ಕೊರೋನಾ ಮಹಾಮಾರಿ ನಿಧಾನವಾಗಿ ಮತ್ತೆ ಮನುಷ್ಯನ ವೃತ್ತಿಗಳ ನೈಜ ಪ್ರಾಮುಖ್ಯತೆಯನ್ನು ನೆನಪಿಸುತ್ತಿದೆ.

ದೇಹದ ಅನಾರೋಗ್ಯಕ್ಕೆ ಔಷಧಿ ನೀಡುವ ವೈದ್ಯ, ಸಮಾಜದ ಆರೋಗ್ಯಕ್ಕೆ ಕಾವಲುಗಾರನಾಗಬೇಕಾದ ಪತ್ರಕರ್ತ, ವ್ಯಾವಹಾರಿಕ ಕ್ರಮಬದ್ದತೆಯನ್ನು ಪಾಲಿಸಲು ಸಹಕರಿಸಬೇಕಾದ ಲೆಕ್ಕಪರಿಶೋಧಕ, ನಮ್ಮ ನಡುವಿನ ಸಂಪರ್ಕ ಸೇತುವೆಯಾದ ಅಂಚೆಯಣ್ಣ ಸೇರಿ ಎಲ್ಲರೂ ಮಹತ್ವದ ವೃತ್ತಿಗಳಿಗೆ ಸೇರಿದವರೆ, ಸಮಾಜದಲ್ಲಿ ಪ್ರತಿ ವೃತ್ತಿಯೂ ತನ್ನ ಪಾಲಿನ ಕರ್ತವ್ಯ ನಿರ್ವಹಿಸಿದರೆ ಮಾತ್ರ ಅದು ಮುಂದುವರಿಯಲು ಸಾಧ್ಯ.

ಕೊರೋನಾ ನಂತರದ ಸಮಾಜ ಈ ವೃತ್ತಿಗಳಲ್ಲಿ ಪ್ರಾಮಾಣಿಕತೆಯನ್ನು, ಮಾನವೀಯ ಮೌಲ್ಯಗಳನ್ನು, ಜನಪರ ಸೇವೆಗಳನ್ನು ಮತ್ತೆ ಪುನರುಜ್ಜೀವನ ಗೊಳಿಸಿಕೊಳ್ಳಲು ಒಂದು ನೆಪವಾಗಲಿ,
ಆ ಮುಖಾಂತರ ಸಮಾಜದ ಶಾಂತಿ ಮತ್ತು ನೆಮ್ಮದಿಯ ಜೀವನ ಮಟ್ಟ ಸುಧಾರಿಸಲಿ ಎಂದು ಆಶಿಸುತ್ತಾ……
**********************************************

ನಿನ್ನೆ 30/6/2021 ಬುಧವಾರ 242 ನೆಯ ದಿನ ನಮ್ಮ ಜ್ಞಾನ ಭಿಕ್ಷಾ ಪಾದಯಾತ್ರೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನಿಂದ ಸುಮಾರು 28 ಕಿಲೋಮೀಟರ್ ದೂರದ ಮದುರೆ ಗ್ರಾಮ ಸಮೀಪದ ಭಗೀರಥ ಮಠ ತಲುಪಿತು.

ಹೊಳಲ್ಕೆರೆ ಗೆಳೆಯರ ಮನೆಯ ‌ಆತಿಥ್ಯ ಸ್ವೀಕರಿಸಿ ಜೊತೆಯಾದ ಮತ್ತೊಬ್ಬ ಗೆಳೆಯರೊಂದಿಗೆ ಚರ್ಚಿಸುತ್ತಾ ಮದುರೆ ತಲುಪಿದೆನು.

ಸಂಜೆ ಸ್ವಾಮೀಜಿಗೊಂದಿಗೆ ಒಂದಷ್ಟು ಮಾತುಕತೆ ನಡೆಸಲಾಯಿತು.

ಇಂದು 1/7/2021 ಗುರುವಾರ 243 ನೆಯ ದಿನ ನಮ್ಮ ಕಾಲ್ನಡಿಗೆ ಚಿತ್ರದುರ್ಗ ಜಿಲ್ಲೆಯ ಮದುರೆ ಗ್ರಾಮದಿಂದ ಸುಮಾರು 8 ಕಿಲೋಮೀಟರ್ ದೂರದ ಹೊಸ ದುರ್ಗ ತಾಲ್ಲೂಕಿನತ್ತಾ..,..

ನಾಳೆ 2/7/2021 ಶುಕ್ರವಾರ
244 ನೆಯ ದಿನ ನಮ್ಮ ನಡಿಗೆ
ಸಾಣೇಹಳ್ಳಿ ಗ್ರಾಮದತ್ತಾ………

ಮುಂದೆ ಅಜ್ಜಂಪುರ ಮಾರ್ಗವಾಗಿ 18 ನೆಯ ಜಿಲ್ಲೆಯಾಗಿ ಚಿಕ್ಕಮಗಳೂರು ಪ್ರವೇಶ……

ಮಳೆಗಾಲದ ಸವಾಲನ್ನು ಜುಲೈ ತಿಂಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸ್ವೀಕರಿಸುತ್ತಾ…..

ಚಿಕ್ಕಮಗಳೂರು ಜಿಲ್ಲೆಯ ಮಾರ್ಗಸೂಚಿ….
*********************************”*************

ಅಜ್ಜಂಪುರ

ತರಿಕೆರೆ

ಬೀರೂರು

ಕಡೂರು

ಚಿಕ್ಕಮಗಳೂರು ನಗರ

ಮೂಡಿಗೆರೆ

ನರಸಿಂಹರಾಜಪುರ

ಕೊಪ್ಪ

ಶ್ರಿಂಗೇರಿ

ಬಾಳೆಹೊನ್ನೂರು

ಕುದುರೆಮುಖ …………………..

ಕಾರ್ಕಳ ಮೂಲಕ 19 ಜಿಲ್ಲೆಯಾಗಿ ಉಡುಪಿ ಜಿಲ್ಲೆಯ ಪ್ರವೇಶ……..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಹೆಚ್.ಕೆ.
9844013068

About The Author

Leave a Reply

Your email address will not be published. Required fields are marked *