*ತಂಗಿಯ ಶವದ ಜೊತೆಗೆ ಮಸಣ ಸೇರಿದ ಸೋದರ*
1 min read*ತಂಗಿಯ ಶವದ ಜೊತೆಗೆ ಮಸಣ ಸೇರಿದ ಸೋದರ*
ಚಿತ್ರದುರ್ಗ :
ಸಾವು ಅನ್ನೋದು ಯಾವಾಗ, ಯಾರಿಗೆ, ಹೇಗೆ ಬರುತ್ತೆ ಅನ್ನೋದು ಗೊತ್ತೆ ಆಗಲ್ಲ. ಹುಟ್ಟನ್ನ ಬೇಕಾದ್ರೆ ಹೇಳಬಹುದು ಆದ್ರೆ ಸಾವು. ಅದೆಷ್ಟೋ ಬಾರಿ ತಾಯಿ ಸತ್ತ ವಿಚಾರ ಕೇಳಿ ಮಗ ಸತ್ತಿದ್ದಾನೆ. ಮಗ ಸತ್ತ ವಿಚಾರ ತಿಳಿದು ತಾಯಿ ಪ್ರಾಣ ನಿಂತು ಹೋಗಿದೆ. ಗಂಡ-ಹೆಂಡತಿ ಒಟ್ಟಿಗೆ ಸತ್ತಿರುವ ಘಟನೆಗಳನ್ನು ಕೇಳಿದ್ದೀವಿ. ಆದ್ರೆ ಇದೀಗ ತಂಗಿಯ ಸಾವಿನ ಜೊತೆಗೆ ಅಣ್ಣನು ಸಾವಿನ ಕದ ತಟ್ಟಿದ್ದಾನೆ.
ಈ ಘಟನೆ ನಡೆದಿರೋದು ಹಿರಿಯೂರು ಬಳಿ. ರಾಮು ಮುದಿಗೌಡ (56) ಮೃತರು. ಈತನ ತಂಗಿ ರೇಣುಕಾ ಕಳೆದ ಮೂರು ದಿನಗಳ ಹಿಂದೆ ಅಪಘಾತದಲ್ಲಿ ಗಾಯಗೊಂಡಿದ್ದರು. ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಆಂಬುಲೆನ್ಸ್ನಲ್ಲಿ ಸಹೋದರಿಯ ಶವ ತೆಗೆದುಕೊಂಡು ಹಿರೇಕೇರೂರಿಗೆ ಹೊರಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ತಂಗಿ ರೇಣುಕಾ ಶವವನ್ನ ಆಂಬುಲೆನ್ಸ್ ನಲ್ಲಿ ತೆಗೆದುಕೊಂಡು, ಅದರ ಹಿಂದೆ ಕಾರಿನಲ್ಲಿ ಮುದಿಗೌಡ ಹೋಗ್ತಾ ಇದ್ರು. ಈ ವೇಳೆ ಅಪಘಾತವಾಗಿದ್ದು, ಮುದಿಗೌಡನಿಗೂ ತೀವ್ರಗಾಯವಾಗಿದೆ. ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ರಾಮು ಮುದಿಗೌಡ ಹಿರೇಕೆರೂರು ತಾಲೂಕ ವಿಜಯ ಕರ್ನಾಟಕ ದಿನಪತ್ರಿಕೆಯ ವರದಿಗಾರರಾಗಿದ್ದರು. ಅವರು ಪ್ರಸ್ತುತ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ಹಿರೇಕೆರೂರ ತಾಲೂಕು ಕಸಾಪ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.
*ಕಂಬನಿ ಮಿಡಿದ ಚಿತ್ರದುರ್ಗ ಪತ್ರಕರ್ತರ ಸಂಘ* ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಇಂದು ಬೆಳಿಗ್ಗೆ 11:15 ಗಂಟೆಗೆ ರಾಮು ಮುದಿಗೌಡ ರವರ ಪಾರ್ಥಿವ ಶರೀರಕ್ಕೆ ಹೂವಿನ ಹಾರ ಹಾಕಿ ಒಂದು ನಿಮಿಷಗಳ ಕಾಲ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಕುಮಾರಸ್ವಾಮಿ ಪ್ರಧಾನ ಕಾರ್ಯದರ್ಶಿ ದಿನೇಶ್ ಗೌಡಗೆರೆ, ಸಂಘದ ಕಾರ್ಯ ಕಾರಿ ಸಮಿತಿ ಸದಸ್ಯರುಗಳಾದ ಚಂದ್ರವಳ್ಳಿ ಪತ್ರಿಕೆ ಸಂಪಾದಕ ಹರಿಯಬ್ಬೆಹೆಂಜಾರಪ್ಪ.ಉದಯವಾಣಿ ಜಿಲ್ಲಾ ವರದಿಗಾರ ನಾಕೀಕೆರೆ ತಿಪ್ಪೇಸ್ವಾಮಿ, ಜನಾಶಯ ಫ್ರಭಾ ಪತ್ರಿಕೆ ಸಂಪಾದಕ ಗೌನಹಳ್ಳಿ ಗೋವಿಂದಪ್ಪ, ವಿಜಯ ಕರ್ನಾಟಕ ಹಿರಿಯ ವರದಿಗಾರರಾದ ಎಂ.ಎನ್. ಅಹೋಬಲಪತಿ ಕ್ಯಾಮರಾಮೆನ್ ಶಿವರಾಜ್ ಇದ್ದರು.