ದೇಶದ ಜನರಿಗೆ ಪ್ರಧಾನಿ ಮೋದಿ ಮಂಕುಬೂದಿ ಎಂ.ಹನೀಫ್
1 min readಚಿತ್ರದುರ್ಗ: ಅಚ್ಚೆ ದಿನ್ ಆಯೇಗಾ ಅಚ್ಚೆ ದಿನ್ ಆಯೇಗಾ ಎಂದು ಹೇಳಿಕೊಂಡು ದೇಶದ ಜನರಿಗೆ ಮಂಕುಬೂದಿ ಎರಚುತ್ತಿರುವ ಪ್ರಧಾನಿ ನರೇಂದ್ರಮೋದಿ ಎಲ್ಲಾ ವರ್ಗದವರು ಬಳಸುವ ಅಡುಗೆ ಅನಿಲ ಬೆಲೆಯನ್ನು 25 ರೂ.ಹೆಚ್ಚಿಸಿ ಜನಸಾಮಾನ್ಯರ ಬದುಕನ್ನು ಅತಂತ್ರಗೊಳಿಸುತ್ತಿದ್ದಾರೆಂದು ಕರ್ನಾಟಕ ರಾಜ್ಯ ಮುಸ್ಲಿಂ ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಎಂ.ಹನೀಫ್ ಟೀಕಿಸಿದ್ದಾರೆ.ಗುರುವಾರದಿಂದ ಅಡುಗೆ ಅನಿಲದ ಬೆಲೆ ಹೆಚ್ಚಳವಾಗಿದ್ದು, ಕಳೆದ ಆರು ತಿಂಗಳಿನಿಂದ ಇದುವರೆವಿಗೂ 140 ರೂ.ಗಳನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ. ಇದಲ್ಲದೆ ಪೆಟ್ರೋಲ್, ಡೀಸೆಲ್, ವಿದ್ಯುತ್ ದರವನ್ನು ಏರಿಸಿ ಕೊರೋನಾ ಸಂಕಷ್ಟದಲ್ಲಿ ದುಡಿಮೆಯಿಲ್ಲದೆ ಪರಿತಪಿಸುತ್ತಿರುವ ಬಡವರು, ಕಾರ್ಮಿಕರು, ಶ್ರಮಿಕರು, ಮನೆ ಕೆಲಸದವರು ದಿನನಿತ್ಯವೂ ದುಡಿದು ತಿನ್ನುವವರಿಗೆ ಗಾಯದ ಮೇಲೆ ಬರೆ ಎಳೆದಿದೆ.ಲೋಕಸಭಾ ಚುನಾವಣಾ ಪೂರ್ವದಲ್ಲಿ ವಿದೇಶದಲ್ಲಿರುವ ನಮ್ಮ ದೇಶದ ಕಪ್ಪು ಹಣ ತಂದು ಪ್ರತಿಯೊಬ್ಬರ ಬ್ಯಾಂಕ್ ಖಾತೆಗಳಿಗೆ ಹದಿನೈದು ಲಕ್ಷ ರೂ.ಗಳನ್ನು ಜಮ ಮಾಡುವುದಲ್ಲದೆ ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವುದಾಗಿ ಯುವ ಜನತೆಯನ್ನು ನಂಬಿಸಿ ವಚನ ಭ್ರಷ್ಟರಾಗಿರುವ ದೇಶದ ಪ್ರಧಾನಿ ಮೋದಿ ಎರಡನೆ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದರೂ ಬೆಲೆ ಏರಿಕೆಯೇ ಅವರ ಸಾಧನೆಯಾಗಿದೆ ಎಂದು ವ್ಯಂಗ್ಯವಾಡಿದರು.ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ತಕ್ಷಣವೇ ಹಿಂದಕ್ಕೆ ಪಡೆದು ಜನಸಾಮಾನ್ಯರ ಕೈಗೆಟುಕುವ ರೀತಿಯಲ್ಲಿ ಬೆಲೆ ನಿಗಧಿಪಡಿಸಲಿ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯ ಮುಸ್ಲಿಂ ಹಿತರಕ್ಷಣಾ ವೇದಿಕೆಯಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದೆಂದು ಎಂ.ಹನೀಫ್ ಎಚ್ಚರಿಸಿದ್ದಾರೆ.