ಹಸಿಕಸ ಹಾಗೂ ಒಣಕಸದ ಬುಟ್ಟಿಗಳನ್ನು ವಿತರಿಸಿದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ….
1 min readಹಸಿಕಸ ಹಾಗೂ ಒಣಕಸದ ಬುಟ್ಟಿಗಳನ್ನು ವಿತರಿಸಿದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ….
ಚಿತ್ರದುರ್ಗ:
ಸಾರ್ವಜನಿಕರು ತಮ್ಮ ಮನೆಯ ಕಸವನ್ನು ರಸ್ತೆಗೆ ಎಸೆಯುವ ಬದಲು ಮನೆ ಬಾಗಿಲಿಗೆ ಬರುವ ನಗರಸಭೆ ವಾಹನಗಳಿಗೆ ಹಾಕಿ ಸ್ವಚ್ಚತೆಯನ್ನು ಕಾಪಾಡುವಂತೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮನವಿ ಮಾಡಿದರು.
ಸ್ವಚ್ಚ ಭಾರತ್ ಅಭಿಯಾನ ಯೋಜನೆಯಡಿ ನಗರಸಭೆಯಿಂದ ತ್ಯಾಗರಾಜ ಬೀದಿಯಲ್ಲಿ ಐದನೇ ವಾರ್ಡ್ ಜನತೆಗೆ ಭಾನುವಾರ ಹಸಿಕಸ ಹಾಗೂ ಒಣಕಸದ ಬುಟ್ಟಿಗಳನ್ನು ವಿತರಿಸಿ ಮಾತನಾಡಿದ ಶಾಸಕರು ಕಸದ ಬುಟ್ಟಿಯನ್ನು ನಗರಸಭೆಯವರು ಮನೆ ಮನೆಗೆ ತಲುಪಿಸಲಿದ್ದಾರೆ. ಅದಕ್ಕಾಗಿ ನಿಮ್ಮ ನಿಮ್ಮ ಮನೆಗಳಲ್ಲಿನ ಕಸವನ್ನು ಬುಟ್ಟಿಯಲ್ಲಿ ಹಾಕಿ ಬೆಳಿಗ್ಗೆ ಮನೆ ಬಾಗಿಲಿಗೆ ಬರುವ ವಾಹನಗಳಲ್ಲಿ ಹಾಕಿ ಸ್ವಚ್ಚತೆಯನ್ನು ಕಾಪಾಡಿದರೆ ಕೊರೋನಾದಂತ ಕಾಯಿಲೆ ಬರುವುದಿಲ್ಲ ಎಂದು ಎಚ್ಚರಿಸಿದರು.
೨೦೧೪ ರಲ್ಲಿ ಮೊದಲನೇ ಬಾರಿಗೆ ನರೇಂದ್ರಮೋದಿ ದೇಶದ ಪ್ರಧಾನಿಯಾದಾಗ ಸ್ವಚ್ಚಭಾರತ್ ಅಭಿಯಾನದಡಿ ದೇಶಾದ್ಯಂತ ಶೌಚಾಲಯ ನಿರ್ಮಾಣ ಕುರಿತು ಚರ್ಚಿಸಿದಾಗ ವಿರೋಧ ಪಕ್ಷದವರು ಗೇಲಿ ಮಾಡಿದ್ದುಂಟು. ಈಗ ದೇಶದಲ್ಲಿ ಮೂವತ್ತು ನಲವತ್ತು ಕೋಟಿ ಶೌಚಾಲಯ ನಿರ್ಮಾಣವಾಗಿ ಬಯಲಿಗೆ ಶೌಚಕ್ಕೆ ಹೋಗುವುದನ್ನು ತಡೆದಂತಾಗಿದೆ. ಚಿತ್ರದುರ್ಗ ನಗರದ ಜನಸಂಖ್ಯೆಗನುಗುಣವಾಗಿ ೩೦೦ ರಿಂದ ೪೦೦ ಪೌರ ಕಾರ್ಮಿಕರಿರಬೇಕಿತ್ತು. ಅಷ್ಟು ಕಾರ್ಮಿಕರನ್ನು ನೇಮಿಸಿಕೊಂಡಿಲ್ಲದ ಪರಿಣಾಮ ಸ್ವಚ್ಚತೆಯನ್ನು ಕಾಪಾಡುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ಎಲ್ಲದಕ್ಕೂ ಬರೀ ನಗರಸಭೆ ಸರ್ಕಾರವನ್ನು ದೂಷಿಸುವುದು ಸರಿಲ್ಲ ಎಂದು ಹೇಳಿದರು.
ಪಂಚಾಯಿತಿಗಳಲ್ಲೂ ಕಸದ ಬುಟ್ಟಿಗಳನ್ನು ನೀಡುತ್ತಿರುವುದರಿಂದ ಹಳ್ಳಿಗಾಡಿನ ಜನತೆಯಲ್ಲಿಯೂ ಸ್ವಚ್ಚತೆ ಬಗ್ಗೆ ಪ್ರಜ್ಞೆ ಮೂಡಿದೆ. ಹಳೆ ಮನೆಗಳನ್ನು ಕೆಡವಿದಾಗ ಸಿಗುವ ಡೆಬ್ರಿಸ್ಗಳನ್ನು ಹೊಳಲ್ಕೆರೆ ರಸ್ತೆ ಹಾಗೂ ಹಳೆ ಬೆಂಗಳೂರು ರಸ್ತೆಯಲ್ಲಿ ಎಸೆಯಲಾಗುತ್ತಿದೆ. ಇದು ಸರಿಯಲ್ಲ. ಶಿಕ್ಷಣ, ಆರೋಗ್ಯ ಎಲ್ಲರ ಜವಾಬ್ದಾರಿ. ಸ್ವಚ್ಚ ಭಾರತ್ ಅಭಿಯಾನದಡಿ ಕೇಂದ್ರ ಕೋಟ್ಯಾಂತರ ರೂ.ಗಳನ್ನು ನೀಡುತ್ತಿದೆ. ಕಾರ್ಪೊರೇಷನ್ಗಳಲ್ಲಿ ನಾಲ್ಕೈದು ಸಾವಿರ ಕೋಟಿ ರೂ.ಗಳನ್ನು ಬಜೆಟ್ನಲ್ಲಿ ಪಾಸ್ ಮಾಡಲಾಗುತ್ತಿದೆ. ತ್ಯಾಗರಾಜ ಬೀದಿಯಲ್ಲಿರುವ ಸೊಪ್ಪು ತರಕಾರಿ ಮಾರುಕಟ್ಟೆಯನ್ನು ವ್ಯವಸ್ಥಿತವಾಗಿ ನಿರ್ಮಿಸಲು ಮುಂದಿನ ತಿಂಗಳು ಟೆಂಡರ್ ಕರೆಯಲಾಗುವುದೆಂದು ಶಾಸಕರು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ವೆಂಕಟೇಶ್, ಉಪಾಧ್ಯಕ್ಷೆ ಶ್ವೇತಾ ವೀರೇಶ್, ನಗರಸಭೆ ಸದಸ್ಯರುಗಳಾದ ಹರೀಶ್, ಶ್ರೀನಿವಾಸ್, ಸುರೇಶ್, ಜಯಣ್ಣ, ಮಾಜಿ ಸದಸ್ಯರುಗಳಾದ ಮಹೇಶ್, ವೆಂಕಟೇಶ್, ಹೊಳಲ್ಕೆರೆ ರಸ್ತೆಯ ಪರಮೇಶ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ವಿರೇಶ್ ಇನ್ನು ಮುಂತಾದವರು ವೇದಿಕೆಯಲ್ಲಿದ್ದರು.