ಜವನಗೊಂಡನಹಳ್ಳಿ ರೈತ ಸಂಪರ್ಕ ಕೇಂದ್ರ ಉದ್ಘಾಟಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ್ ಕೃಷಿ ಜತೆಗೆ ಉಪಕಸಬು ಅಳವಡಿಸಿಕೊಳ್ಳಲು ಸಲಹೆ
1 min readಜವನಗೊಂಡನಹಳ್ಳಿ ರೈತ ಸಂಪರ್ಕ ಕೇಂದ್ರ ಉದ್ಘಾಟಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ್
ಕೃಷಿ ಜತೆಗೆ ಉಪಕಸಬು ಅಳವಡಿಸಿಕೊಳ್ಳಲು ಸಲಹೆ
ಚಿತ್ರದುರ್ಗ,ಆಗಸ್ಟ್17:
ಕೃಷಿಯಲ್ಲಿ ಲಾಭದಾಯಕವಾಗಿರಲು ಸಮಗ್ರ ಕೃಷಿಯೊಂದಿಗೆ ಉಪಕಸಬುಗಳನ್ನು ಅಳವಡಿಸಿಕೊಳ್ಳಬೇಕು ಎಂದು ರಾಜ್ಯ ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ರೈತರಿಗೆ ಸಲಹೆ ನೀಡಿದರು.
ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿಯಲ್ಲಿ ಮಂಗಳವಾರ ನೂತನವಾಗಿ ನಿರ್ಮಿಸಲಾದ ರೈತ ಸಂಪರ್ಕ ಕೇಂದ್ರ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿಯಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ಇದರಿಂದ ಅತಿವೃಷ್ಠಿ, ಅನಾವೃಷ್ಠಿ ಸರ್ವೇ ಸಾಮಾನ್ಯವಾಗಿದ್ದು, ಈ ಸಂದರ್ಭದಲ್ಲಿ ಆಗುವ ನಷ್ಟ ಕಡಿಮೆ ಮಾಡಿಕೊಳ್ಳಬಹುದಾಗಿದೆ. ಕೆಲವೊಮ್ಮೆ ಉತ್ತಮವಾದ ಬೆಳೆ ಬಂದಿರುತ್ತದೆ. ಆದರೆ ದರ ಕುಸಿತವಾಗುತ್ತದೆ. ಉತ್ತಮ ದರ ಇರುತ್ತದೆ ಆದರೆ ಉತ್ತಮ ಫಸಲು ಇರುವುದಿಲ್ಲ. ಹಾಗಾಗಿ ಸಮಗ್ರ ಕೃಷಿ ಪದ್ಧತಿಗೆ ರೈತರು ಒತ್ತು ನೀಡಬೇಕು ಎಂದರು.
ಕೃಷಿ ಚಟುವಟಿಕೆಯೊಂದಿಗೆ ಉಪಕಸಬುಗಳಾದ ಮೀನುಸಾಕಾಣಿಕೆ, ಹೈನುಗಾರಿಕೆ ಕೈಗೊಂಡಲ್ಲಿ ರೈತರು ಉತ್ತಮವಾದ ಆದಾಯಗಳಿಸಬಹುದು. ರೈತರಿಗೆ ಕೃಷಿ ಇಲಾಖೆಯಿಂದ ಹನಿನೀರಾವರಿ, ತುಂತುರು ನೀರಾವರಿಗೆ ಮೊದಲಿನಂತೆ ಶೇ.90ರಷ್ಟು ಸಹಾಯಧನ ನೀಡಲಾಗುತ್ತಿದೆ. ಕೃಷಿ ಯಾಂತ್ರೀಕರಣಕ್ಕೂ ಪ್ರೋತ್ಸಾಹಿಸಲಾಗುತ್ತಿದೆ. ಈಗಾಗಲೇ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ಘೋಷಣೆ ಮಾಡಲಾಗಿದ್ದು, ವೃತ್ತಿ ಶಿಕ್ಷಣದವರೆಗೂ ವಿದ್ಯಾರ್ಥಿ ವೇತನ ನೀಡಲಾಗುತ್ತಿದ್ದು, ಇದರ ಸದ್ಭಳಕೆ ಮಾಡಿಕೊಂಡು ರೈತರ ಮಕ್ಕಳು ಶಿಕ್ಷಣ ಪಡೆಯಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ ಎಂದರು.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಎರಡನೇ ತ್ರೈಮಾಸಿಕದಲ್ಲಿ ಚಿತ್ರದುರ್ಗ ಜಿಲ್ಲೆಯ 1.76ಲಕ್ಷ ರೈತರಿಗೆ ಸೌಲಭ್ಯ ಒದಗಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯೂರು ಶಾಸಕರಾದ ಪೂರ್ಣಿಮಾ ಕೆ.ಶ್ರೀನಿವಾಸ್, ಮುಖಂಡರಾದ ಡಿ.ಟಿ.ಶ್ರೀನಿವಾಸ್, ಜವನಗೊಂಡನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಬಾನ ಪರ್ವಿನ್, ಹಿರಿಯೂರು ತಾಲ್ಲೂಕು ಕೃಷಿಕ ಸಮಾಜ ಅಧ್ಯಕ್ಷ ಸಿ.ಹೆಚ್.ಕಾಂತರಾಜು, ಉಪಾಧ್ಯಕ್ಷ ಪಿ.ವಿ.ರಾಜಣ್ಣ, ಉಪವಿಭಾಗಾಧಿಕಾರಿ ಚಂದ್ರಯ್ಯ, ಜಂಟಿ ಕೃಷಿ ನಿರ್ದೇಶಕ ಡಾ.ರಮೇಶ್ ಕುಮಾರ್, ಉಪ ಕೃಷಿ ನಿರ್ದೇಶಕ ಡಾ.ಬಿ.ಎನ್.ಪ್ರಭಾಕರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು