ದೇವಾಲಯ ಕಟ್ಟಿ ಪ್ರವೇಶಸುವುದಕ್ಕಿಂತ, ದೇವಾಲಯ ಪ್ರವೇಶಿಸುವ ನೂರಾರು ದೇಹಗಳು ಪರಿವರ್ತನೆಗೊಳ್ಳಬೇಕು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ
1 min readದೇವಾಲಯ ಕಟ್ಟಿ ಪ್ರವೇಶಸುವುದಕ್ಕಿಂತ, ದೇವಾಲಯ ಪ್ರವೇಶಿಸುವ ನೂರಾರು ದೇಹಗಳು ಪರಿವರ್ತನೆಗೊಳ್ಳಬೇಕು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ
ದೇವಾಲಯ ಕಟ್ಟಿ ಪ್ರವೇಶಸುವುದಕ್ಕಿಂತ, ದೇವಾಲಯ ಪ್ರವೇಶಿಸುವ ನೂರಾರು ದೇಹಗಳು ದೇವಾಲಯವಾಗಿ ಪರಿವರ್ತನೆಗೊಳ್ಳಬೇಕು ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ತಿಳಿಸಿದರು.
ಮಠದಹಟ್ಟಿ ಪಂಚಾಯಿತಿ ವ್ಯಾಪ್ತಿಯ ಅಗಸರಹಳ್ಳಿ ಆಂಜನೇಯ ಸ್ವಾಮಿ ದೇವಾಲಯ ವಾರ್ಷಿಕೋತ್ಸವ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಜ್ಯೋತಿ ಮುಟ್ಟಿದ ಬತ್ತಿಯೆಲ್ಲ ಜ್ಯೋತಿಯಂತಪ್ಪುವಯ್ಯ ಎಂಬಂತೆ ತ್ರೇತಾಯುಗದಲ್ಲಿ ಆಂಜನೇಯ ಭಕ್ತನು ಭಗವಂತನ ಸ್ಥಾನವನ್ನು ಪಡೆಯಬಹುದು ಎಂಬುದಕ್ಕೆ ಸೂಕ್ತ ನಿದರ್ಶನ. ಆದರೆ ಆಂಜನೇಯನ ಭಕ್ತರು ನೈಜ ಭಕ್ತರಾಗದಿದ್ದಲ್ಲಿ ದೇವಾಲಯ ಕಟ್ಟುವುದು ನಿರಾರ್ಥಕ. ಭಕ್ತಿಪಥದಲ್ಲಿ ಭಕ್ತ ಭಗವಂತನಾದ ಆದರ್ಶ ರೂಪ ತ್ರೇತಾಯುಗದ ಆಂಜನೇಯ. ರಾಮನ ಗುಡಿಯಿಲ್ಲದ ಊರಿರಬಹುದು ಆಂಜನೇಯನ ಗುಡಿಯಿಲ್ಲದ ಊರೇ ಇಲ್ಲ. ಜಾತಿ-ಮತ-ಪಂಥಗಳನ್ನು ಮೀರಿ ಜನ ಆಂಜನೇಯನನ್ನು ಆರಾಧಿಸುತ್ತಾರೆ ಎಂದು ಹೇಳಿದರು.
ಆಂಜನೇಯ ಭಕ್ತನೆಂದರೆ ಭಕ್ತ, ವೀರವಿರಕ್ತ, ಪರಮಜ್ನನಿ, ಅಮ್ಮನ ಅಕ್ಕರೆಯ ಕಂದ, ಕರುನಾಡ ಕುವರ. ಜೀವನದ ಎಲ್ಲ ಮಹಾ ಮೌಲ್ಯಗಳ ಗಣಿ ಇವನು ಎಳೆತನದಲ್ಲಿ ತುಂಟಾಟವಾಡಿದ. ಅನಂತರ ಆಕಾಶದೆತ್ತರಕ್ಕೆ ಬೆಳೆದ ವ್ಯಕ್ತಿತ್ವ, ಲೋಕದ ಶೋಕವನ್ನು ನಾಶಮಾಡಿದವನು. ಹನುಮಂತ ಸಪ್ತ ಚಿರಂಜೀವಿಗಳಲ್ಲಿ ಒಬ್ಬ, ಮಹಾ ಬ್ರಹ್ಮಚಾರಿ, ಅದ್ವಿತೀಯ ಪಂಡಿತ, ವ್ಯಾಕರಣಿ, ಮಹಾ ಮೇಧಾವಿ, ಸಂಗೀತ ತಿಳಿದವ, ವಾಸ್ಕೋವಿದ, ಕುಶಲಮತಿ, ಕವಿಕುಲಯೋಗಿ, ನೀತಿಕೋವಿದ, ಇಚ್ಛಾರೂಪಿ, ಎಂಥ ಕೆಲಸವನ್ನೂ ಮಾಡಬಲ್ಲ ಪರಾಕ್ರಮಿ. ಇಂಥ ಸಾಮರ್ಥ್ಯಗಳೆಲ್ಲ ಇದ್ದುದರಿಂದಲೇ ರಾಮನ ಪರಮಭಕ್ತನಾದ. ಇಂದಿಗೂ ಚಿರಂಜೀವಿಯೆಂದೇ ಪ್ರಸಿದ್ಧನಾಗಿರುವ ಆಂಜನೇಯ. ಲೋಕದಲ್ಲಿ ಶುದ್ಧವಾದ ಜೀವನ ಎಂದರೆ ಹೀಗಿರಬೇಕು ಎನ್ನುವುದಕ್ಕೆ ಅವನು ನಿದರ್ಶನ. ಇಂಥ ಗುಣಗಳಿರುವುದರಿಂದಲೇ ನಮ್ಮ ಸಮಾಜ ಅವನನ್ನು ಪೂಜಿಸಿ ಕೊಂಡಾಡುತ್ತಿದೆ. ಎಲ್ಲ ದೇವರುಗಳಿಗಿಂತ ಮೇಲೆ ಸ್ಥಾನ ನೀಡಿದೆಯೆಂದು ತಿಳಿಸಿದರು.
ದೇವಾಲಯ ಪ್ರವೇಶಿಸುವ ದೇಹಗಳು ದುರ್ಗುಣ, ದುಶ್ಛಟ, ದುರ್ಬುದ್ದಿ ತ್ಯಜಿಸಿ ಸದ್ಗುಣ, ಸದ್ಬುದ್ಧಿ, ಸದಾಚಾರ ಮೈಗೂಡಿಸಿಕೊಳ್ಳಲಿ. ತನು,ಮನ,ಭಾವ ಶುದ್ದೀಕರಣವೇ ಅಂತರಂಗ ಬಹಿರಂಗ ಶುದ್ದಿಕರಣ. ಮಾಂಸ ಪಿಂಡವು ಮಂತ್ರ ಪಿಂಡವಾಗಬೇಕು ದೇಹ ದೇವಾಲಯ, ಮಾನವ ಮಹಾದೇವನಾಗಬೇಕೆಂದು ಹೇಳಿದರು.
ಸಮಾರಂಭದಲ್ಲಿ ಗ್ರಾ.ಪಂ.ಉಪಾಧ್ಯಕ್ಷರಾದ ನಿಂಗಪ್ಪ, ರಾಮಾಂನೇಯ, ಪೆಂಟರ್ ತಿಪ್ಪೇಸ್ವಾಮಿ, ಮಂಜುನಾಥ, ಗಣೇಶ್, ಅನ್ಸರ್, ಮಾರುತಿ, ತಿರುಮಲ್ಲೇಶ್, ವಾಸು, ಮಹಾಂತೇಶ ದೇವಾಲಯ ಸಮಿತಿ ಸದಸ್ಯರು ಹಾಗೂ ಇನ್ನಿತರರು ಉಪಸ್ಥಿತಿಯಿದ್ದರು.