*ವೃಕ್ಷ ಮಾತೆಗೆ ಅಂತರಾಷ್ಟ್ರೀಯ ಪ್ರಶಸ್ತಿ* (ಶತಾಯುಷಿ ಸಾಲುಮರದ ತಿಮ್ಮಕ್ಕಗೆ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿಯನ್ನು ರಾಜ್ಯಪಾಲರಿಂದ ಪ್ರಧಾನ )
1 min readವೃಕ್ಷ ಮಾತೆಗೆ ಅಂತರಾಷ್ಟ್ರೀಯ ಪ್ರಶಸ್ತಿ (ಶತಾಯುಷಿ ಸಾಲುಮರದ ತಿಮ್ಮಕ್ಕಗೆ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿಯನ್ನು ರಾಜ್ಯಪಾಲರಿಂದ ಪ್ರಧಾನ )
ಬೆಂಗಳೂರು : ನಿಶ್ವಾರ್ಥ ಪರಿಸರ ಸೇವೆ ಮೂಲಕ ಬದುಕನ್ನೇ ಪರಿಸರಕ್ಕಾಗಿ ಮುಡಿಪಿಟ್ಟ ವೃಕ್ಷಮಾತೆ ಸಾಲುಮರದ ತಿಮ್ಮಕ್ಕರಿಗೆ ಅಂತರಾಷ್ಟ್ರೀಯ ಸಂಸ್ಥೆ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ನೀಡಿ ಗೌರವಿಸಿದೆ. ಎರಡು ದಿನಗಳ ಹಿಂದೆ ಬೆಂಗಳೂರಿನ ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಪ್ರಶಸ್ತಿ ಫಲಕ ನೀಡಿ ಗೌರವಿಸಿದ್ದಾರೆ.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸರ್ಕಾರ ನೀಡುವ ಪ್ರತಿಷ್ಠಿತ ಪದ್ಮಶ್ರೀ, ನ್ಯಾಷನಲ್ ಸಿಟಿಜನ್ ಅವಾರ್ಡ್, ಇಂದಿರಾ ಪ್ರಿಯದರ್ಶಿನಿ ಪರಿಸರ ಪ್ರಶಸ್ತಿ, ಗುಲ್ಬರ್ಗದ ಕೇಂದ್ರಿಯ ವಿವಿಯಿಂದ ಗೌರವ ಡಾಕ್ಟರೇಟ್ ಪಡೆದಿರುವ 111 ವರ್ಷದ ಶತಾಯುಷಿ ಸಾಲುಮರದ ತಿಮ್ಮಕ್ಕರಿಗೆ ಇದೀಗ ಅಂತಾಷ್ಟ್ರೀಯ ಮಟ್ಟದ ಸಂಸ್ಥೆಯೊಂದು ಅವರ ಸಾಧನೆ ಮೆಚ್ಚಿ ಪ್ರಶಸ್ತಿ ನೀಡಿ ಗೌರವಿಸಿದೆ. ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೋಕಿನ ಕಕ್ಕೆನಹಳ್ಳಿ ಗ್ರಾಮದಲ್ಲಿ ಜನಿಸಿ, ಅಲ್ಲೇ ಬದುಕು ಕಟ್ಟಿಕೊಂಡು ಮರಗಳನ್ನೇ ತನ್ನ ಮಕ್ಕಳೆಂದು ಸಾಕಿ ಸಲಹುತ್ತಾ, ಪರಿಸರಕ್ಕಾಗಿ ತಮ್ಮ ಇಡೀ ಬದುಕನ್ನೇ ಮುಡಿಪಿಟ್ಟ ತಿಮ್ಮಕ್ಕ ಮತ್ತೆ ಎಂದೂ ಹಿಂದೆ ತಿರುಗಿ ನೋಡಿಲ್ಲ. ಓದು ಬರಹ ಗೊತ್ತಿಲ್ಲದಿದ್ದರೂ, ಮನುಕುಲ ಉಳಿಯಬೇಕಾದರೆ ಪರಿಸರ ಉಳಿಯಬೇಕು. ಪರಿಸರ ಉಳಿಯಲು ಗಿಡಮರ ಬೇಕು ಎನ್ನುವ ಜ್ಞಾನ ಸಂಪಾದಿಸಿಕೊಂಡಿದ್ದ ವೃಕ್ಷಮಾತೆ ವರ್ಷದಿಂದ ವರ್ಷಕ್ಕೆ ಗಿಡ ಮರ ಬೆಳೆಸುತ್ತಾ ಎಲೆಮರೆಕಾಯಾಗಿ ತಮ್ಮಷ್ಟಕ್ಕೆ ಕಾಯಕ ಮಾಡುವುದಕ್ಕೆ ಶುರುಮಾಡಿದ್ದರು.
ಮಹಿಳೆಯೊಬ್ಬರ ನಿಶ್ವಾರ್ಥ ಸೇವೆ ಜಗತ್ತಿನೆಲ್ಲೆಡೆ ಪಸರಿಸಿದಾಗ ಪ್ರಶಸ್ತಿಗಳು, ಬಿರುದು-ಬಾವಲಿಗಳು ಅವರನ್ನು ಹುಡುಕಿ ಬಂದವು. ಅವರ ಅನನ್ಯ ಸೇವೆಯನ್ನು ಗುರುತಿಸಿ, ರಾಜ್ಯ, ಕೇಂದ್ರ ಸರ್ಕಾರಗಳು ಪ್ರತಿಷ್ಠಿತ ಪ್ರಶಸ್ತಿಗಳನ್ನು ನೀಡಿ ಗೌರವಿಸಿದವು. ಗೌರವ ಡಾಕ್ಟರೇಟ್ ಕೂಡ ಈ ಹಿರಿಯ ಜೀವದ ಮುಕುಟಕ್ಕೆ ಸೇರಿಕೊಂಡಿತ್ತು. ಆದ್ರೆ ಪ್ರಶಸ್ತಿ ಬಂದಿದೆ ಎಂದೂ ಹಿಗ್ಗದೆ ತಮ್ಮಷ್ಟಕ್ಕೆ ಹಳ್ಳಿಯಲ್ಲಿ ತಮ್ಮ ಕಾಯಕ ಮಾಡುತ್ತಾ ಸಾಗುತ್ತಿರುವ ಈ ಸಾಧಕಿಗೆ ಇದೀಗ ಅಂತರಾಷ್ಟ್ರೀಯ ಪ್ರಶಸ್ತಿ ಬಂದಿರುವುದು ಕರುನಾಡಿಗೆ ಹೆಮ್ಮೆಯ ವಿಷಯವಾಗಿರುವುದಂತು ಸತ್ಯ.