ಮಾನವ ಹಕ್ಕುಗಳು ಮತ್ತು ಭಾರತೀಯ ಸಂವಿಧಾನ: ಆಯೇಷಾ ಟಿ. ಸುಲ್ತಾನ್
1 min read
“ಮಾನವ ಹಕ್ಕುಗಳು ಮತ್ತು ಭಾರತೀಯ ಸಂವಿಧಾನ”
ಪ್ರತಿ ವರ್ಷ ಡಿಸೇಂಬರ್ 10 ರಂದು ವಿಶ್ವದಾದ್ಯಂತ ಮಾನವ ಹಕ್ಕುಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಸಮಾಜದ ಪ್ರತಿಯೊಬ್ಬ ವ್ಯಕ್ತಿಗೆ ಹುಟ್ಟಿನಿಂದ ಬಂದಿರುವ ಹಕ್ಕುಗಳೆ ಮಾನವ ಹಕ್ಕುಗಳು.ವಿಶ್ವ ಸಂಸ್ಥೆಯು ಡಿಸೇಂಬರ್ 10.1948 ರಂದು ಮಾನವ ಹಕ್ಕುಗಳನ್ನು ಅಧಿಕೃತವಾಗಿ ಘೋಷಣೆ ಮಾಡಿತು. ಈ ಮೂಲಕ ವಿಶ್ವದ ಪ್ರತಿಯೊಬ್ಬ ವ್ಯಕ್ತಿಗಳಿಗೆ- ಸಮಾನತೆ,ಸ್ವಾತಂತ್ರ್ಯ, ಜೀವಿಸುವ, ಉದ್ಯೋಗದ, ಮತ್ತು ಧಾರ್ಮಿಕ ಹಕ್ಕುಗಳನ್ನು ಖಾತ್ರಿಗೊಳಿಸುವುದು ಮತ್ತು ಉಲ್ಲಂಘನೆ ಯಾಗದಂತೆ ತಡೆಯುವುದು ವಿಶ್ವ ಮಾನವ ಹಕ್ಕುಗಳ ಘೋಷಣೆಯ ಮುಖ್ಯ ಉದ್ದೇಶ. ವಿಶ್ವ ಮಾನವ ಹಕ್ಕುಗಳ ಘೋಷಣೆ ಯ ಹಿನ್ನಲೆಯಲ್ಲಿ ನಮ್ಮ ಭಾರತದ ಸಂವಿಧಾನವು ದೇಶದ ಪ್ರಜೆಗಳಿಗೆ ಮೂಲಭೂತ ಹಕ್ಕುಗಳನ್ನು ನೀಡಿ ಪ್ರತಿಯೊಬ್ಬ ಪ್ರಜೆಗಳ ಸರ್ವತೋಮುಖ ಅಭಿವೃದ್ಧಿಗೆ ಅವಕಾಶ ಕಲ್ಪಿಸಿದೆ.
ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ರವರು ನಮ್ಮ ಸಂವಿಧಾನ ರಚಿಸುವ ಸಂಧರ್ಭದಲ್ಲಿ ಮೂಲಭೂತ ಹಕ್ಕುಗಳಿಗೆ ತುಂಬಾ ಪ್ರಾಮುಖ್ಯತೆ ನೀಡಿದರು. ನಮ್ಮ ಸಂವಿಧಾನದ ಭಾಗ 3 ರ 12 ರಿಂದ 32 ರ ವರೆಗಿನ ವಿಧಿಗಳ ಅಡಿಯಲ್ಲಿ ನೀಡಲಾಗಿರುವ 6 ವಿಧದ ಮೂಲಭೂತ ಹಕ್ಕುಗಳಾದ- ಸಮಾನತೆ ಹಕ್ಕು,ಸ್ವಾತಂತ್ರ್ಯ ಹಕ್ಕು,ಶೋಷಣೆ ಯ ವಿರುದ್ಧದ ಹಕ್ಕು, ಧಾರ್ಮಿಕ ಸ್ವಾತಂತ್ರ್ಯದ ಹಕ್ಕು,ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಹಕ್ಕು, ಸಂವಿಧಾನಾತ್ಮಕ ಪರಿಹಾರದ ಹಕ್ಕುಗಳು ದೇಶದ ಪ್ರತಿಯೊಬ್ಬ ಪ್ರಜೆಗಳ ಹಕ್ಕುಗಳು ಉಲ್ಲಂಘನೆ ಯಾಗದಂತೆ ತಡೆದು ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿವೆ.ಈ ಹಿನ್ನಲೆಯಲ್ಲಿ ವಿಶ್ವ ಮಾನವ ಹಕ್ಕುಗಳನ್ನು ಭಾರತದ ಸಂವಿಧಾನ ದಲ್ಲಿ ಮೂಲಭೂತ ಹಕ್ಕುಗಳ ಪಟ್ಟಿಯಲ್ಲಿ ಅಳವಡಿಸಿಕೊಳ್ಳಲಾಗಿದೆ.
ವಿಶ್ವ ಮಾನವ ಹಕ್ಕುಗಳು ವಿಶ್ವ ದಾದ್ಯಂತ ಎಲ್ಲಾ ವ್ಯಕ್ತಿಗಳಿಗೆ ಶೋಷಣೆ ಮತ್ತು ದಬ್ಬಾಳಿಕೆ ಆಗದಂತೆ ತಡೆದು ರಕ್ಷಣೆ ನೀಡಿದರೆ,ಭಾರತದ ಸಂವಿಧಾನ ತನ್ನ ಪ್ರಜೆಗಳಿಗೆ ಮೂಲಭೂತ ಹಕ್ಕುಗಳನ್ನು ನೀಡುವ ಮೂಲಕ ದೇಶದ ಸರ್ಕಾರ ತನ್ನ ಎಲ್ಲಾ ಪ್ರಜೆಗಳನ್ನು ಯಾವುದೇ ತಾರತಮ್ಯ ಮಾಡದೇ ಸಮಾನವಾಗಿ ಕಾಣುವುದು, ಸಪ್ತ ಸ್ವಾತಂತ್ರ್ಯ ಗಳನ್ನು ನೀಡುವ ಮೂಲಕ ವ್ಯಕ್ತಿಯ ಜೀವನಕ್ಕೆ ಅಗತ್ಯವಾದ ಸೌಲಭ್ಯಗಳನ್ನು ಒದಗಿಸುವುದು, ಹಾಗೂ ಪ್ರತಿಯೊಬ್ಬ ಪ್ರಜೆಗಳ ಧಾರ್ಮಿಕ ಮತ್ತು ಶೈಕ್ಷಣಿಕ ಹಕ್ಕುಗಳು ಉಲ್ಲಂಘನೆ ಯಾಗದಂತೆ ತಡೆಯಲು ಸಂವಿಧಾನ ದ 32 ನೇ ವಿಧಿಯ ಅಡಿಯಲ್ಲಿ 5 ವಿಧದ ರಿಟ್ ಗಳನ್ನು ನೀಡುವ ಮೂಲಕ ಹಕ್ಕುಗಳು ಉಲ್ಲಂಘನೆ ಯಾದರೆ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಗಳಲ್ಲಿ ಪರಿಹಾರ ಹಕ್ಕುಗಳನ್ನು ಭಾರತದ ಸಂವಿಧಾನ ತನ್ನ ಎಲ್ಲಾ ಪ್ರಜೆಗಳಿಗೆ ನೀಡಿದೆ.
ವಿಶ್ವ ಮಾನವ ಹಕ್ಕುಗಳು ಮತ್ತು ಭಾರತದ ಸಂವಿಧಾನ ಪರಸ್ಪರ ಪೂರಕವಾಗಿವೆ.ವಿಶ್ವ ಮಾನವ ಹಕ್ಕುಗಳ ಪಟ್ಟಿಯನ್ನು ಸಂವಿಧಾನದಲ್ಲಿ ಅಳವಡಿಸಿಕೊಂಡ ಮೊದಲ ದೇಶ ಭಾರತವಾಗಿದೆ.ಇದರ ಸಂಪೂರ್ಣ ಶ್ರೇಯಸ್ಸು ಡಾ.ಬಿ.ಆರ್. ಅಂಬೇಡ್ಕರ್ ರವರಿಗೆ ಸಲ್ಲುತ್ತದೆ. ಕಾರಣ ನಮ್ಮ ಭಾರತದ ಸಂವಿಧಾನ ರಚನೆ ಯಾಗುವ ಸಂಧರ್ಭದಲ್ಲಿ ವಿಶ್ವ ಮಾನವ ಹಕ್ಕುಗಳು ಘೋಷಣೆ ಯಾಗಿದ್ದರಿಂದ ಮಾನವ ಹಕ್ಕುಗಳಿಗೆ ಸಂವಿಧಾನದ ಮಾನ್ಯತೆ ನೀಡಿ ದೇಶದ ಪ್ರಜೆಗಳನ್ನು ಅನ್ಯಾಯ, ಅಸಮಾನತೆ, ಶೋಷಣೆ ಮತ್ತು ದಬ್ಬಾಳಿಕೆ ಗಳಿಂದ ರಕ್ಷಿಸಿ, ಜಾತಿ, ಧರ್ಮ, ಗಂಡು-ಹೆಣ್ಣು, ಅಂತಸ್ತು, ಜನಾಂಗದ ಆಧಾರದ ಮೇಲೆ ತಾರತಮ್ಯ ಮಾಡದೇ ಅವಕಾಶಗಳು ಮತ್ತು ಸೌಲಭ್ಯಗಳು ಎಲ್ಲರಿಗೂ ಸಮಾನವಾಗಿ ದೊರೆಯುವಂತೆ ಮಾಡುವ ಮೂಲಕ ವಿಶ್ವ ಮಾನವ ಹಕ್ಕುಗಳಿಗೆ ಗೌರವ ಸಲ್ಲಿಸಲಾಯಿತು.
ಆದರೆ ಇಂದು ನಮ್ಮ ದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಮಹಿಳೆಯರ ಮೇಲಿನ ಅತ್ಯಾಚಾರ,ಜಾತಿ ನಿಂದನೆ ಮತ್ತು ಹಲ್ಲೆ, ಅಸ್ಪುಶ್ಯತೆ ಆಚರಣೆ, ಧಾರ್ಮಿಕ ಶೋಷಣೆ, ಕಾರ್ಮಿಕರ ಹಕ್ಕುಗಳ ಉಲ್ಲಂಘನೆ ಹೀಗೆ ಹಲವು ರೀತಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚುತ್ತಿವೆ.
ಸಂವಿಧಾನದ ಅಡಿಯಲ್ಲಿ ರಚನೆಗೊಂಡಿರುವ ರಾಷ್ಟ್ರೀಯ ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗಗಳು ಮಾನವ ಹಕ್ಕುಗಳು ಉಲ್ಲಂಘನೆ ಆಗದಂತೆ ತಡೆದು ಪ್ರತಿಯೊಬ್ಬ ಪ್ರಜೆಗಳ ಸಮಾನತೆ, ಸ್ವಾತಂತ್ರ್ಯ, ಶೈಕ್ಷಣಿಕ, ಮತ್ತು ಧಾರ್ಮಿಕ ಹಕ್ಕುಗಳನ್ನು ರಕ್ಷಿಸುವ ಅಗತ್ಯತೆ/ಜವಾಬ್ದಾರಿ ಇನ್ನೂ ಬಹಳಷ್ಟು ಬೇಕಿದೆ.
__________
ಆಯೇಷಾ ಟಿ. ಸುಲ್ತಾನ್
ತೃತೀಯ ಬಿ.ಎಸ್.ಸಿ.
ಎಸ್ ಜೆ ಎಂ. ಕಾಲೇಜು.ಚಂದ್ರವಳ್ಳಿ,ಚಿತ್ರದುರ್ಗ.