March 28, 2024

Chitradurga hoysala

Kannada news portal

ದೇವರು……. ಒಂದು ಅಭಿಪ್ರಾಯ….. ವಿಶ್ವದ ಜನರು ನಂಬಿರುವ ಪೂಜಿಸುವ ದೇವರು ಇರಬಹುದೇ…

1 min read


ದೇವರು…….
ಒಂದು ಅಭಿಪ್ರಾಯ…..

ವಿಶ್ವದ ಜನರು ನಂಬಿರುವ ಪೂಜಿಸುವ ದೇವರು ಇರಬಹುದೇ……

ನಾವು ಮುಗ್ದರೇ, ಮೂರ್ಖರೇ, ಬುದ್ದಿವಂತರೇ, ಎಲ್ಲಾ ತಿಳಿದವರೇ,ಅನುಭವಸ್ಥ ನಾಗರೀಕರೇ……
ಒಮ್ಮೆ ಯೋಚಿಸಿ……

ಕೆತ್ತಿದ ಕಲ್ಲನ್ನೋ, ಮಣ್ಣನ್ನೋ, ವಿಗ್ರಹವನ್ನೋ, ಚರ್ಚನ್ನೋ, ಮಸೀದಿಯನ್ನೋ ದೇವರೆಂದು – ದೇವಸ್ಥಾನವೆಂದೋ ಪೂಜಿಸುವೆವು,

ಮಳೆಯನ್ನು ವರುಣನೆಂದು, ಗಾಳಿಯನ್ನು ವಾಯುವೆಂದು, ಬೆಂಕಿಯನ್ನು ಅಗ್ನಿ ದೇವನೆಂದು ಆರಾಧಿಸುವೆವು,

ಶಿಲೆಗೆ ವಿವಿಧ ರೂಪದ ಮನುಷ್ಯನ ಆಕಾರ ನೀಡಿ ಸರ್ವಶಕ್ತನೆನ್ನುವೆವು,

ಕಲ್ಲಿನ ಮೂರ್ತಿಗೆ ಹಾಲು, ತುಪ್ಪ, ಹಣ್ಣುಗಳ ಅಭಿಷೇಕ ಮಾಡುವೆವು,

ಅಭಿನಯಿಸುವ ನಟ ನಟಿಯರನ್ನು ದೇವರೆಂಬತೆ ಪರಿಗಣಿಸುವೆವು,

ಖಾವಿ ಬಿಳಿ ಹಸಿರು ಬಟ್ಟೆಯ ಸ್ವಾಮೀಜಿಗಳನ್ನು ದೇವರ ಅವತಾರಗಳೆಂಬಂತೆ ಭಾವಿಸುವೆವು,

ಭವಿಷ್ಯ ಹೇಳುವ ಜ್ಯೋತಿಷಿಗಳನ್ನು ದೈವವಾಣಿಯ ವಕ್ತಾರರೆಂದು ನಂಬುವೆವು,

ಸ್ವರ್ಗವನ್ನೇ ಸೃಷ್ಟಿಸುತ್ತೇವೆ ಎನ್ನುವ ರಾಜಕಾರಣಿಗಳಿಗೆ ಜೈಕಾರ ಹಾಕುವೆವು,

ಹೆಣ್ಣನ್ನು ಪ್ರಕೃತಿಗೆ ಹೋಲಿಸಿ ಪೂಜನೀಯ ಸ್ಥಾನ ನೀಡುವೆವು.

ಹೌದಲ್ಲವೇ ?,

ಹಾಗಾದರೆ……
ಎಷ್ಟೊಂದು ಒಳ್ಳೆಯವರು, ಎಷ್ಟೊಂದು ದೈವಭಕ್ತರು, ಎಷ್ಟೊಂದು ಮುಗ್ಧರು ನಾವುಗಳು,

ಆದರೆ, .‌.‌.‌

ಅದೇ ಕಲ್ಲಿನ ದೇವರನ್ನು ಅನೇಕರಿಗೆ ಮುಟ್ಟಲೂ ಬಿಡುವುದಿಲ್ಲ,

ಅದೇ ದೇವಸ್ಥಾನಕ್ಕೆ ಮಸೀದಿಗಳಿಗೆ ಕೆಲವು ಕಡೆ ಮಹಿಳೆಯರಿಗೆ ಪ್ರವೇಶ ಕೊಡುವುದಿಲ್ಲ,

ಪ್ರಕೃತಿಯನ್ನು ಧಾರಾಳವಾಗಿ ನಾಶಮಾಡುತ್ತಿದ್ದೇವೆ,

ವಿಗ್ರಹಗಳಿಗೆ ಸುರಿಯುವ ಹಾಲು ಹಣ್ಣುಗಳನ್ನು ಹಸಿದವರಿಗೆ ನೀಡುವುದಿಲ್ಲ,

ಅದೇ ಹೆಣ್ಣನ್ನು ವರದಕ್ಷಿಣೆಗಾಗಿ ಸುಡುತ್ತಿರುವವರು ನಾವೇ,

ಅದೇ ಮಹಿಳೆಯರಿಗೆ ವೇಶ್ಯೆ ಪಟ್ಟ ಕಟ್ಟಿರುವವರು ನಾವೇ,

ಅದೇ ರಾಜಕಾರಣಿಗಳಿಂದ ಮೋಸ ಹೋಗುತ್ತಿರುವವರು ನಾವೇ,

ಜ್ಯೋತಿಷ್ಯ ನಂಬಿ ಸೃಷ್ಟಿಗೇ ಅವಮಾನ ಮಾಡುತ್ತಿರುವವರು ನಾವೇ,

ಅಭಿನಯಿಸುವ ನಟ ರಾಜನಂತಾದರೆ ದುಡಿಯುವ ರೈತ ಆಳಾದ,

ಸರ್ವಶಕ್ತ ,ಜಗದ್ ರಕ್ಷಕ, ಸರ್ವಜನ ಹಿತರಕ್ಷಕ ಭಗವಂತನಾದರೆ, ಈ ಮೇಲು ಜಾತಿ, ಕೀಳು ಜಾತಿ ಕರಿಯ ಬಿಳಿಯ, ಬಡವ ಶ್ರೀಮಂತ ಸೃಷ್ಟಿಸಿದವರಾರು, ಅದನ್ನೇಕೆ ಆ ಸರ್ವಶಕ್ತ ತಡೆಯಲಿಲ್ಲ.

ಈಗ ಆತ್ಮವಿಮರ್ಶೆ ಮಾಡಿಕೊಳ್ಳೋಣ,…‌.

ನಾವು ಮುಗ್ಧರೋ, ಜ್ಞಾನಿಗಳೋ, ದೈವಭಕ್ತರೋ, ಅಜ಼್ಞಾನಿಗಳೋ, ಆಷಾಡಭೂತಿಗಳೋ,
ಅನುಕೂಲ ಸಿಂಧುಗಳೋ, ಅಥವಾ ಯಾವುದನ್ನೂ ವಿಮರ್ಶಿಸದೆ ಭಯಪಟ್ಟು
ಯಥಾಸ್ಥಿತಿ ಒಪ್ಪುವ ಮೂರ್ಖರೋ,

ದೇವರ ಮೇಲಿನ ನಂಬಿಕೆಯಿಂದ ಒಂದಷ್ಟು ಲಾಭಗಳು ಇರುವುದು ನಿಜ.

ನಮಗಿಂತ ಮೇಲೆ ‌ಯಾರೋ ಒಬ್ಬ ಶಕ್ತಿಯುತ ವ್ಯಕ್ತಿ ಇದ್ದಾನೆ ಎಂಬ ನಂಬಿಕೆ ಒಂದಷ್ಟು ಮಾನಸಿಕ ನೆಮ್ಮದಿ ನೀಡಬಹುದು.

ಸಂಕಷ್ಟದ ಸಮಯದಲ್ಲಿ ಮನುಷ್ಯ ಪ್ರಯತ್ನ ವಿಫಲವಾದಾಗ ಅಗೋಚರ ಶಕ್ತಿ ಕಾಪಾಡಬಹುದು ಎಂಬ ದೂರದ ಆಸೆ ಸ್ವಲ್ಪ ಸಮಾಧಾನ ನೀಡಬಹುದು.

ದೇವಸ್ಥಾನದ ಪ್ರಯಾಣ ಮತ್ತು ದೇವ ಮಂದಿರದ ಪ್ರಶಾಂತತೆ ಒಂದಷ್ಟು ಭರವಸೆ ಕೊಡಬಹುದು.

ದೇವರ ಬಗೆಗಿನ ಹಾಡುಗಳು ಭಜನೆಗಳು ಕಥೆಗಳು ಪುಸ್ತಕಗಳು ಮನಸ್ಸಿನ ‌ಆತ್ಮವಿಶ್ವಾಸ ಹೆಚ್ಚಿಸಬಹುದು.

ದೇವರ ಬಗೆಗಿನ ಭಯ,
ವ್ಯಕ್ತಿಗಳು ತಪ್ಪು ಮಾಡುವುದನ್ನು ಕಡಿಮೆ ಮಾಡಿ ಸಮಾಜದ ಶಾಂತಿಗೆ ಒಂದಷ್ಟು ಕೊಡುಗೆ ನೀಡಬಹುದು.

ಮಂದಿರ ಮಸೀದಿ ಚರ್ಚು ಗುರುದ್ವಾರಗಳು ಮತ್ತು ಅದಕ್ಕೆ ಸಂಬಂಧಿಸಿದ ಆಚರಣೆಗಳು ಹಲವು ಜನರಿಗೆ ಉದ್ಯೋಗ ನೀಡಬಹುದು.

ದೇವರ ನಂಬಿಕೆ ಹಬ್ಬದ ಸಂಭ್ರಮ ಆಚರಿಸಲು ಸಹಕಾರಿಯಾಗಬಹುದು.

ಕೆಲವು ಆಕಸ್ಮಿಕಗಳು ಕೆಲವರಿಗೆ ಅದೃಷ್ಟವಾಗಿಯೂ ಕೆಲವರಿಗೆ ದುರಾದೃಷ್ಟವಾಗಿಯೂ ಕಾಡಬಹುದು. ಅದನ್ನು ದೇವರ ಕೃಪೆಯೆಂದು ಭಾವಿಸಲಾಗುತ್ತದೆ.

ಹೀಗೆ ಕೆಲವು ನಂಬಿಕೆ ಆಧಾರಿತ ಗಾಳಿ ಗೋಪುರವು ‌ದೇವರ ಅಸ್ತಿತ್ವವನ್ನು ಸಮರ್ಥಿಸಬಹುದು.

ಆದರೆ ಈ ಎಲ್ಲವೂ ನಂಬಿಕೆಯೇ ಹೊರತು ವಾಸ್ತವವಲ್ಲ.

ನೀವು ಅನಾದಿ ಕಾಲದಿಂದ ಈ ಕ್ಷಣದವರೆಗೆ ಆದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿ.

ಬೆತ್ತಲೆಯಿಂದ ಜೀನ್ಸ್ ವರೆಗೆ, ಕಾಲ್ನಡಿಗೆಯಿಂದ ವಿಮಾನದವರೆಗೆ, ಗೆಡ್ಡೆ ಗೆಣಸುಗಳಿಂದ ಕಬಾಬ್ ವರೆಗೆ, ಔಷಧೀಯ ಸಸ್ಯಗಳಿಂದ ಆಸ್ಪತ್ರೆಯ ವೆಂಟಿಲೇಟರ್ ವರೆಗೆ, ಗುಂಪು ಆಡಳಿತದಿಂದ ಪ್ರಜಾಪ್ರಭುತ್ವದವರಗೆ,
ಪಾರಿವಾಳಗಳಿಂದ ಇಂಟರ್ ನೆಟ್ ವರೆಗೆ ಎಲ್ಲವೂ ಸೃಷ್ಟಿಯ ಪ್ರಾರಂಭದಲ್ಲೇ ಆಗದೆ ಮನುಷ್ಯನ ಅಗಾಧ ಅನುಭವದಿಂದ ಹಂತ ಹಂತವಾಗಿ ಬೆಳವಣಿಗೆ ಹೊಂದಿದೆ. ದೇವರ ಸೃಷ್ಟಿಯೇ ಆಗಿದ್ದರೆ ಎಲ್ಲವನ್ನೂ ಸ್ಮಾರ್ಟ್ ಆಗಿ ಮೊದಲೇ ಪ್ಲಾನ್ ಮಾಡಬೇಕಿತ್ತು.

ಅನಾದಿ ಕಾಲದಲ್ಲಿ ಒಬ್ಬರಿಗೊಬ್ಬರು ಕೊಂದು ಬಲಿಷ್ಠರು ಮಾತ್ರ ಬದುಕುವ ವ್ಯವಸ್ಥೆಯಿಂದ ಅನೇಕ ಯುದ್ಧಗಳನ್ನು ಮಾಡಿ ಕೋಟಿ ಕೋಟಿ ಜನರ ಹತ್ಯೆಗಳು ನಡೆದು ಈಗ ಒಂದಷ್ಟು ರಕ್ಷಣೆಯ ವ್ಯವಸ್ಥೆಯಲ್ಲಿ ನಾವಿದ್ದೇವೆ.
ಇಲ್ಲಿಯೂ ದೇವರ ಪಾತ್ರ ಕಾಣುವುದಿಲ್ಲ.

ದೇವರ ಶಕ್ತಿಯಿಲ್ಲದೆ ಒಂದು ಹುಲ್ಲು ಕಡ್ಡಿಯೂ ಚಲಿಸುವುದಿಲ್ಲ ಎಂದು ಭಕ್ತರು ಹೇಳಿದರೆ, ದೇವರಿಗೆ ಒಂದು ಹುಲ್ಲು ಕಡ್ಡಿಯನ್ನು ಕದಲಿಸುವ ಶಕ್ತಿ ಇಲ್ಲ ಎಂದು ಕೆಲವರು ಹೇಳುತ್ತಾರೆ.

ಜ್ಞಾನದಿಂದ ಕುತೂಹಲಕ್ಕಾಗಿ ಹುಡುಕಾಟ ನಡೆಸಿದಾಗ ಬೇರೆ ಬೇರೆ ರೂಪದ ಶಕ್ತಿಗಳು ಸಿಗುತ್ತವೆಯೇ ಹೊರತು ಸಾಮಾನ್ಯ ಜನ ನಂಬಿರುವ ಕೇಂದ್ರೀಕೃತ ಮತ್ತು ಸಮಸ್ತ ಸೃಷ್ಟಿಯ ಮೇಲೆ ನಿಯಂತ್ರಣ ಇರುವ ಶಕ್ತಿ ಗೋಚರಿಸುವುದಿಲ್ಲ.

ಕುರಾನ್ ಬೈಬಲ್ ವೇದ ಉಪನಿಷತ್ತುಗಳು ಮತ್ತು ಇತರ ಧರ್ಮ ಗ್ರಂಥಗಳು ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುತ್ತವೆ. ಆದರೆ ‌ಆ ಯಾವ ಉತ್ತರವೂ ಸರಳವಾಗಿ ಸಹಜವಾಗಿ ನೇರವಾಗಿ ಸಾಮಾನ್ಯ ತಿಳುವಳಿಕೆಗೆ ನಿಲುಕದೆ ಬಹುತೇಕ ಕಾಲ್ಪನಿಕ ಪಲಾಯನವಾದವೇ ಆಗಿರುತ್ತದೆ. ದೇವರನ್ನು ತೋರಿಸುವ ಪ್ರಯತ್ನ ಮಾತ್ರ ಸಫಲವಾಗಿಲ್ಲ.

ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಬಲ್ಲೆ ಎನ್ನುವ ಗ್ರಂಥಗಳು, ಅದರ ರಚನಾಕಾರರು ಮತ್ತು ಅದನ್ನು ಇಂದಿಗೂ ಪ್ರತಿಪಾದಿಸುತ್ತಿರುವ ಧಾರ್ಮಿಕ ಪ್ರತಿನಿಧಿಗಳು ಖಂಡಿತ ಭ್ರಮಾಧೀನರಾಗಿರುತ್ತಾರೆ.

ಅವರಿಗೆ ಕೇಳಿ, ಅಪಘಾತ ಅನಾರೋಗ್ಯ ಕುಟುಂಬ ಕಲಹ ಅಧಿಕಾರ ಬಡತನ ದೌರ್ಭಾಗ್ಯ ಮದುವೆ ನಿರುದ್ಯೋಗ ಎಲ್ಲಕ್ಕೂ ಕಾರಣಗಳನ್ನು ಮತ್ತು ಅದಕ್ಕೆ ಪರಿಹಾರವನ್ನು ಸೂಚಿಸುತ್ತಾರೆ. ನಮಗೆ ಗೊತ್ತಿಲ್ಲ ಎಂದು ಹೇಳುವುದೇ ಇಲ್ಲ.

ಹಾಗಾದರೆ ಇದು ಸಾಧ್ಯವೇ. ಇದು ಸಾಧ್ಯವಾಗಿದಿದ್ದರೆ ಇಡೀ ವಿಶ್ವವೇ ಸ್ವರ್ಗವಾಗುತ್ತಿತ್ತು.

ಇದನ್ನು ಮರೆಮಾಚಲು ವಿಧಿ ಲಿಖಿತ – ಹಣೆ ಬರಹ ಎಂಬ ಮತ್ತೊಂದು ಪಲಾಯನವಾದದ ಸೂತ್ರ ಮುಂದಿಡುತ್ತಾರೆ.

ಹುಟ್ಟುವ ಪ್ರತಿ ಜೀವಿಗೂ ಹಣೆ ಬರಹ ಬರೆಯುತ್ತಾ ಕೂರಲು ದೇವರಿಗೆ ಕೆಲಸವಿಲ್ಲವೇ ? ಇದು ಸಾಧ್ಯವೇ ?

ವಿಶ್ವದ ಪ್ರತಿ ನಾಗರಿಕತೆಯು ಒಂದೊಂದು ದೇವರನ್ನು ‌ಸೃಷ್ಟಿಸಿರುವುದು ಮನುಷ್ಯನೇ ದೇವರ ಸೃಷ್ಟಿಕರ್ತ ಎಂಬುದನ್ನು ಸೂಚಿಸುತ್ತದೆಯಲ್ಲವೇ.

ಜ್ಞಾನವೆಂಬುದು ನಿಂತ ನೀರಲ್ಲ ಅದು ಹರಿಯುವ ಪ್ರವಾಹ ಎಂಬ ಸೂಕ್ಷ್ಮ ತಿಳಿವಳಿಕೆ ಅವರಿಗೆ ಇರುವುದಿಲ್ಲ. ಇದ್ದರೂ ಅದನ್ನು ಒಪ್ಪಿಕೊಂಡರೆ ಅವರ ಅಸ್ತಿತ್ವವೇ ಕುಸಿಯುತ್ತದೆ.

ಸಾವಿನ ಭಯ, ಹಣ ಅಧಿಕಾರ ಸಿಗುವ ದುರಾಸೆ, ದಾರಿದ್ರ್ಯ ಸ್ಥಿತಿಗೆ ತಲುಪುವ ಆತಂಕ, ಸಂಕೀರ್ಣ ಜೀವನ ಶೈಲಿ, ಯಶಸ್ಸನ್ನು ತಪ್ಪಾಗಿ ಅರ್ಥೈಸಿರುವುದು, ಪ್ರಬುದ್ದತೆಯ ಮಟ್ಟ ಕುಸಿದು ಸ್ವತಂತ್ರ ಕ್ರಿಯಾತ್ಮಕ ಚಿಂತನೆಯ ಕೊರತೆ ದೇವರ ಬಗ್ಗೆ ನಾವು ನಿಷ್ಪಕ್ಷಪಾತ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗತ್ತಿಲ್ಲ.

ಇದನ್ನೆಲ್ಲಾ ಮೀರಿ ಯೋಚಿಸಿದರೆ ದೇವರ ಇರುವಿಕೆ ಮತ್ತು ಇಲ್ಲದಿರುವಿಕೆಯ ಸ್ಪಷ್ಟ ಚಿತ್ರಣ ಸಿಗುತ್ತದೆ.

ನಿಮ್ಮ ನಂಬಿಕೆ ಮತ್ತು ಅಭಿಪ್ರಾಯ ಗೌರವಿಸುತ್ತಾ…….

ದೇವರಲ್ಲಿಯೇ ಒಂದು ಕೋರಿಕೆ…..

ನನ್ನ ಪ್ರೀತಿಯ ದೇವರೆ ನೀನೆಲ್ಲಿರುವೆ,
ನಿನ್ನನ್ನು ಒಮ್ಮೆ ನೋಡಬೇಕೆನಿಸಿದೆ ,
ನಿನ್ನ ಬಳಿ ತುಂಬಾ ಮಾತನಾಡಬೇಕಿದೆ,
ನನ್ನ ಅನೇಕ ಪ್ರಶ್ನೆಗಳಿಗೆ ಉತ್ತರ ಬೇಕಿದೆ,
ನಿನ್ನಲ್ಲಿ ನಾನು ಲೀನವಾಗಬೇಕಿದೆ,……..

ಯಾಕೆ ಸಾಧ್ಯವಿಲ್ಲವೆ?, ನಾನು ಕೆಟ್ಟವನೆ, ಹೋಗಲಿ ಬಿಡು ನಿನ್ನಿಷ್ಟ, ನಾವು ಭೂಮಿಯಲ್ಲಿ 750 ಕೋಟಿ ಜನರಿದ್ದೇವೆ,
ಅವರಲ್ಲಿ ನಿನಗಿಷ್ಟದ ಯಾರಿಗಾದರೂ ದರ್ಶನ ನೀಡು,
ಅವರಿಗೆ ಹೇಳು, ನೀನು ಎಲ್ಲಿರುವೆ ? , ಏನು ಮಾಡುತ್ತಿರುವೆ ? ಹೇಗಿರುವೆ ,? ನಿನ್ನ ಬೇಟಿ ಮಾಡುವುದು ಹೇಗೆ? ನಿನ್ನ ಶಕ್ತಿ ಏನು? ನಿನ್ನ ವ್ಯಾಪ್ತಿ ಏನು? ನಿನ್ನ ರೂಪವೇನು? ನಿನ್ನ ಗುಣವೇನು?

ಇಲ್ಲಿ ಕಟ್ಟಿಸಿರುವ ಗುಡಿ ಗೋಪುರ ಚರ್ಚು ಮಸೀದಿಗಳು ನಿನ್ನವೇನು?

ಈ ಪೂಜಾರಿ, ಸ್ವಾಮಿ, ಪಾದ್ರಿ, ಮುಲ್ಲಾಗಳು ನಿನ್ನವರೇನು?

ಜಾತಿ, ಧರ್ಮ, ಭಾಷೆಗಳನ್ನು ನೀನೇ ಸೃಷ್ಟಿಸಿದ್ದೇ?
ಗಾಳಿ, ನೀರು, ಬೆಳಕು ನಿನ್ನಿಂದಲೇ ಆಗಿದ್ದೇ?

ನನಗೆ ಬುದ್ದಿ ತಿಳಿದಾಗಿನಿಂದ ಹುಡುಕುತ್ತಿದ್ದೇನೆ,
ಎಲ್ಲಾ ಪುಣ್ಯ ಸ್ಥಳಗಳನ್ನು ಸುತ್ತಿದ್ದೇನೆ,
ಎಲ್ಲರೂ ಆಕಾಶ ತೋರುವರು,

ಅಲ್ಲಿಗೂ,
ಚಂದ್ರನಲ್ಲಿಗೂ, ಮಂಗಳನಲ್ಲಿಗೂ ಬಂದಿದ್ದೆ,
ನೀನು ಕಾಣಲಿಲ್ಲ,

ಈ ಜನರ ಮಾತುಗಳನ್ನು ಕೇಳಿ ಕೇಳಿ ಸಾಕಾಗಿದೆ,
ನನ್ನೊಡೆಯ ಒಮ್ಮೆ,- ಒಮ್ಮೆ ಕಾಣಿಸಿಕೋ,
ನಂಬಿಕೆ, ಭಕ್ತಿ, ಶ್ರದ್ಧೆ, ಶುದ್ಧತೆ ಎಂದೆಲ್ಲಾ ಕೇಳಿ ಕೇಳಿ ತಲೆ ಕೆಟ್ಟಿದೆ,

ಅದೆಲ್ಲವನ್ನೂ ಕೊಡುವುದು ನೀನೇ ಆಗಿರುವಾಗ ಇವರ ಒತ್ತಡ ಏಕೆ?

ನೀನೇ ಸರ್ವಶಕ್ತ ಎನ್ನುವರು. ಆದರೆ,
ನಿನ್ನ ಗುಣಾವಗುಣಗಳನ್ನು ಇವರೇ ನಿರ್ಧರಿಸುವರು,
ರಾಶಿ ಭವಿಷ್ಯ ರಾಹು ಕೇತು ಸ್ವರ್ಗ ನರಕ ಶ್ರೇಷ್ಠ ಕನಿಷ್ಠ,
ಎಂದೆಲ್ಲಾ ಹೇಳಿ ನಿನ್ನ ಹೆಸರಲ್ಲೇ ಎಲ್ಲಾ ಮಾಡುವರು,
ನೀನು ಮಾತ್ರ ಪತ್ತೆಯೇ ಇಲ್ಲ.

ಆದರೂ ಕಾಯುತ್ತಿದ್ದೇನೆ ನಿನ್ನ ಬರುವಿಕೆಗಾಗಿ ಶತಶತಮಾನಗಳಿಂದ,

ಯಾರು ಏನೇ ಅಂದರೂ, ಯಾರು ಏನೇ ಭಯಪಡಿಸಿದರೂ ನೀನು ಕಾಣುವವರೆಗೂ ನಿನ್ನನ್ನು ಪ್ರಶ್ನಿಸುತ್ತಲೇ ಇರುತ್ತೇನೆ ಮತ್ತು
ಹೇಳುತ್ತಲೇ ಇರುತ್ತೇನೆ ನಿನ್ನನ್ನು ಸೃಷ್ಡಿಸಿದ್ದು ನಾನೇ ಎಂದು.

ವಿವೇಕಾನಂದ. ಹೆಚ್.ಕೆ.
9844013068

About The Author

Leave a Reply

Your email address will not be published. Required fields are marked *