ಕೆ.ಸಿ.ರೆಡ್ಡಿ ಆಧುನಿಕ ಕರ್ನಾಟಕ ಹಾಗೂ ಬೆಂಗಳೂರಿನ ಬೇರುಗಳಿಗೆ ನೀರು ಹಾಕಿ ಬೆಳೆಸಿದವರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
1 min readಕೆ.ಸಿ.ರೆಡ್ಡಿ ಆಧುನಿಕ ಕರ್ನಾಟಕ ಹಾಗೂ ಬೆಂಗಳೂರಿನ ಬೇರುಗಳಿಗೆ ನೀರು ಹಾಕಿ ಬೆಳೆಸಿದವರು:
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಚಿತ್ರದುರ್ಗ ಹೊಯ್ಸಳ ನ್ಯೂಸ್/
ಬೆಂಗಳೂರು:
ಆಧುನಿಕ ಕರ್ನಾಟಕ ಹಾಗೂ ಬೆಂಗಳೂರಿನ ಬೇರುಗಳಿಗೆ ನೀರು ಹಾಕಿ ಬೆಳೆಸಿದವರು ಕೆ.ಸಿ.ರೆಡ್ಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಮಾಜಿ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರ 120 ನೇ ಜನ್ಮದಿನಾಚಾರಣೆಯ ಅಂಗವಾಗಿ ಇಂದು ವಿಧಾನಸೌಧದಲ್ಲಿರುವ ಅವರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿ ಅವರು ಮಾತನಾಡಿದರು.
ಅಮೋಘವಾದ ಸಾರ್ವಜನಿಕ ಜೀವನ
ಕರ್ನಾಟಕದ ಮೊಟ್ಟ ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿಯವರು ಕರ್ನಾಟಕದ ಮೈಸೂರು ಪ್ರಜಾಪ್ರತಿನಿಧಿಯ ಸದಸ್ಯರಿಂದ ಕರ್ನಾಟಕದ ಮುಖ್ಯಮಂತ್ರಿಗಳಾಗುವವರೆಗೆ ಅಮೋಘವಾದ ಸಾರ್ವಜನಿಕ ಜೀವನ ನಡೆಸಿದವರು. ಭಾರತದ ಸ್ವಾತಂತ್ರ್ಯದ ನಂತರ ಕರ್ನಾಟಕದ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದ್ದಾರೆ. ಇಂದು ದೊಡ್ಡ ಪ್ರಮಾಣದಲ್ಲಿ ಬಿ.ಹೆಚ್.ಇ. ಎಲ್, ಬಿ.ಇ. ಎಲ್, ಹೆಚ್.ಎಂ.ಟಿ ಮುಂತಾದ ಸಾರ್ವಜನಿಕ ಉದ್ದಿಮೆಗಳನ್ನು ಸ್ಥಾಪಿಸಲು ಅಂದಿನ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು. ಉತ್ತಮ ಆಡಳಿತಗಾರ, ಎಲ್ಲರನ್ನೂ ಸಮಾನತೆ, ಪ್ರೀತಿ ವಿಶ್ವಾಸದಿಂದ ಕಂಡವರು. ಮಾದರಿ ಆಡಳಿತ ನೀಡಿದ ಅವರ ಹೆಸರು ಕರ್ನಾಟಕದ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯಲಿದೆ. ನಾವು ಅವರ ಆದರ್ಶಗಳನ್ನು ಪರಿಪಾಲನೆ ಮಾಡಬೇಕು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಕೆಲವೇ ದಿನಗಳಲ್ಲಿ ಪುತ್ಥಳಿ ಅನಾವರಣ
ಕೆ.ಸಿ ರೆಡ್ಡಿಯವರ ಪುತ್ಥಳಿ ನಿರ್ಮಾಣ ಪೂರ್ಣಗೊಂಡಿದೆ. ಪುತ್ಥಳಿಗೆ ಇಂದೇ ಕಾರ್ಯಾದೇಶ ಹೊರಡಿಸಲಾಗುವುದು. ಕೆಲವೇ ದಿನಗಳಲ್ಲಿ ಸ್ಥಳಾಂತರ ಮಾಡಿ ಪುನಃ ವಿಧಾನಸೌಧದಲ್ಲಿ ಪ್ರತಿಮೆ ಅನಾವರಣ ಮಾಡಲಾಗುವುದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.