ಕೋಟೆನಾಡು ಬೌದ್ಧ ಕೇಂದ್ರವು ಬೃಹದಾಕಾರವಾಗಿ ಬೆಳೆಯುವ ಎಲ್ಲ ಲಕ್ಷಣಗಳನ್ನೂ ಹೊಂದಿದೆ. ಇಂತಹ ಕಾರ್ಯಕ್ಕೆ ಇಡೀ ಸಮುದಾಯ ಕೈಜೋಡಿಸಬೇಕು : ಉಪನಿರ್ದೇಶಕ ಎಂ. ರೇವಣಸಿದ್ದಪ್ಪ
1 min readಬೌದ್ಧವಿಹಾರಗಳಿಗೆ ಬರುವ ಮೂಲಕ ಮೌಢ್ಯತೆಯನ್ನು ತೊರೆದು ಸಮಾನತೆಯ ಬದುಕು ಬದುಕಲು ಸಾಧ್ಯವಾಗುತ್ತದೆ.
ಕೋಟೆನಾಡು ಬೌದ್ಧ ಕೇಂದ್ರವು ಬೃಹದಾಕಾರವಾಗಿ ಬೆಳೆಯುವ ಎಲ್ಲ ಲಕ್ಷಣಗಳನ್ನೂ ಹೊಂದಿದೆ. ಇಂತಹ ಕಾರ್ಯಕ್ಕೆ ಇಡೀ ಸಮುದಾಯ ಕೈಜೋಡಿಸಬೇಕು : ಎಂ. ರೇವಣಸಿದ್ದಪ್ಪ.
ಚಿತ್ರದುರ್ಗಹೊಯ್ಸಳ ನ್ಯೂಸ್/
ಚಿತ್ರದುರ್ಗ.
ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ಶೋಷಿತ ಸಮಾಜದ ಎರಡು ಕಣ್ಣುಗಳಿದ್ದಂತೆ. ಅಂಬೇಡ್ಕರ್ ಸಮಾಜ ಸುಧಾರಕರಾದರೆ ಬಾಬು ಜಗಜೀವನ್ ರಾಮ್ ರಾಜಕೀಯ ಸುಧಾರಕರಾಗಿದ್ದರು ಎಂದು ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಎಂ. ರೇವಣಸಿದ್ದಪ್ಪ ಹೇಳಿದರು.
ಅವರು ನಗರದ ಕೋಟೆನಾಡು ಬುದ್ಧವಿಹಾರದಲ್ಲಿ ಭಾನುವಾರ ನಡೆದ ಕಾರ್ಮಿಕರ ಬದುಕಿನ ಬೆಳಕು ಬಾಬು ಜಗಜೀವನ್ ರಾಮ್ 36 ನೇ ಪುಣ್ಯ ಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಂಬೇಡ್ಕರ್ ಮೀಸಲಾತಿ ಜಾರಿಗೆ ಹೋರಾಟ ಮಾಡಿದರೆ
ಬಾಬು ಜಗಜೀವನ್ ರಾಮ್ ಮೀಸಲಾತಿಯನ್ನು ಪ್ರಾಮಾಣಿಕವಾಗಿ ಜಾರಿಗೆ ತರುವಲ್ಲಿ ಯಶಸ್ವಿಯಾದರು. ಬಾಬೂಜಿ ಕಾರ್ಮಿಕರ ಬದುಕಿನ ಬೆಳಕಾಗಿದ್ದರಲ್ಲದೆ ದೇಶದ ಆಹಾರ ಸಮಸ್ಯೆಯನ್ನು ಬಗೆಹರಿಸಿ ಹಸಿರು ಕ್ರಾಂತಿಯ ಹರಿಕಾರರಾಗಿದ್ದರು ಎಂದರು.
ಇಂತಹ ಪವಿತ್ರ ಕೋಟೆ ನಾಡು ಬೌದ್ಧ ವಿಹಾರಕ್ಕೆ ಯಾರನ್ನೂ ಕರೆಯುವ ಅವಶ್ಯಕತೆ ಇಲ್ಲ. ಸ್ವಯಂ ಪ್ರೇರಿತರಾಗಿ ಬರಬೇಕು. ನಾನು ಸಹ ನಾನಾಗಿಯೇ ಬಂದಿದ್ದೇನೆ. ಬೌದ್ಧವಿಹಾರಗಳಿಗೆ ಬರುವ ಮೂಲಕ ಮೌಢ್ಯತೆಯನ್ನು ತೊರೆದು ಸಮಾನತೆಯ ಬದುಕು ಬದುಕಲು ಸಾಧ್ಯವಾಗುತ್ತದೆ.
ವಿಶೇಷವಾಗಿ ಕೋಟೆನಾಡು ಬೌದ್ಧ ಕೇಂದ್ರವು ಬೃಹದಾಕಾರವಾಗಿ ಬೆಳೆಯುವ ಎಲ್ಲ ಲಕ್ಷಣಗಳನ್ನೂ ಹೊಂದಿದೆ. ಇಂತಹ ಕಾರ್ಯಕ್ಕೆ ಇಡೀ ಸಮುದಾಯ ಕೈಜೋಡಿಸಬೇಕು ಎಂದರು.
ಉಪನ್ಯಾಸಕ ಡಾ. ಬಿ.ಎಂ.ಗುರುನಾಥ ಮಾತನಾಡಿ ಏಕೆ ಹೀಗೆ ನಮ್ಮ ನಡುವೆ ಮಾತು ಬೆಳೆದಿದೆ. ಕುರುಡು ಹಮ್ಮು ಬೇಟೆಯಾಡಿ, ಪ್ರೀತಿ ನರಳಿದೆ ಎಂಬ ಕವಿವಾಣಿಯಂತೆ ಈ ಹೊತ್ತಿಗೆ ಬೇಕಾಗಿರುವುದು ಮಾತಲ್ಲ, ನಮ್ಮೊಳಗಿನ ಹಮ್ಮು, ಅಹಂಕಾರ ದೂರವಾಗಿ ಪ್ರೀತಿ, ಕರುಣೆ, ಮೈತ್ರಿ ಮೈಗೂಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದರು.ಜಾತಿ ಎನ್ನುವುದು ವ್ಯಕ್ತಿಯೊಳಗಿನ ದಕ್ಷತೆಯನ್ನು ಪ್ರತಿಭೆಯನ್ನು ಹೊಸಕಿ ಹಾಕಿದೆ. ಬಾಬು ಜಗಜೀವನ್ ರಾಮ್ ಅವರ ರಾಜಕೀಯ ಹಿನ್ನೆಡೆಗೆ ಮುಖ್ಯವಾಗಿ ಜಾತಿ ರಾಜಕಾರಣವೇ ಅಡ್ಡವಾಯಿತು ಎನ್ನುವುದು ವಿಷಾದನೀಯ.
ಬಾಬೂಜಿಯವರಿಗೆ ಮೂರು ಬಾರಿ ಈ ದೇಶದ ಪ್ರಧಾನಿಯಾಗುವ ಅವಕಾಶ ಒದಗಿಬಂದಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ. ಇದು ಈ ದೇಶದ ಬಹಳ ದೊಡ್ಡ ದುರಂತ. ಭಾರತ ದೇಶ ಜಾತ್ಯಾತೀತ ಎನ್ನುವ ತತ್ವಕ್ಕೆ ಹಿನ್ನಡೆಯನ್ನು ಅನುಭವಿಸುವಂತಾಯಿತು. ಶೋಷಿತ ಸಮುದಾಯದ ದಕ್ಷ ಆಡಳಿತಗಾರನನ್ನು ದೇಶದ ಅತ್ಯುನ್ನತ ಪದವಿಗೇರಿಸುವ ಸುವರ್ಣವಕಾಶವನ್ನು ಈ ದೇಶವೇ ಕಳೆದುಕೊಂಡಿತು.
ಪ್ರೊಫೆಸರ್ ಎಚ್.ಲಿಂಗಪ್ಪ, ಉಪನ್ಯಾಸಕರಾದ ಬಾಲೆನಹಳ್ಳಿ ಆರ್.ರಾಮಣ್ಣ, ಕೆರೆಯಾಗಳಹಳ್ಳಿ ತಿಪ್ಪೇಸ್ವಾಮಿ, ಬೆಸ್ಕಾಂ ತಿಪ್ಪೇಸ್ವಾಮಿ, ಹನುಮಂತಪ್ಪ ಮಾತನಾಡಿದರು. ಪ್ರಾಂಶುಪಾಲ ಸಿದ್ದಲಿಂಗಮ್ಮ ಅಧ್ಯಕ್ಷತೆ ವಹಿಸಿದ್ದರು. ಲಾಯರ್ ಚಂದ್ರಪ್ಪನವರು ಸ್ವಾಗತಿಸಿದರು. ಬುದ್ಧ ಮತ್ತು ಆತನ ದಮ್ಮ ಕೃತಿಯನ್ನು ಶಿಕ್ಷಕಿ ತಿಪ್ಪಮ್ಮ ಡಾ.ಚಂದ್ರಪ್ಪ ಓದಿ ವ್ಯಾಖ್ಯಾನಿಸಿದರು. ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕ ಸಂಘದ ಅಧ್ಯಕ್ಷ ಬನ್ನಿಹಟ್ಟಿ ಮಲ್ಲೇಶ್, ಪ್ರಾಂಶುಪಾಲ ಬಿ.ಪಿ.ತಿಪ್ಪೇಸ್ವಾಮಿ ಇದ್ದರು.