ಸಮಾಜದ ಚಿಂತಕರು, ಸುಧಾರಕರು, ಪ್ರಜ್ಞಾವಂತರು ಯಾರು ಖಂಡಿಸಲಿಲ್ಲ
ಜಾತಿ ಕಾರಣಕ್ಕೆ ಗರ್ಭಿಣಿ ಮಗಳನ್ನು ಕೊಲ್ಲುವಷ್ಟು ಮಟ್ಟಕ್ಕೆ ಸಮಾಜ ಇಳಿದಿದೆ ಕೃತ್ಯವೆಸಗಿದವರು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಬಾರದು:
ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ
ಚಿತ್ರದುರ್ಗ ಹೊಯ್ಸಳ:
ಚಿತ್ರದುರ್ಗ:
ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ಅನ್ಯ ಜಾತಿಯ ಯುವಕನ ಜೊತೆಗೆ ಮಗಳು ಅಂತರ್ಜಾತಿ ಮದುವೆಯಾದ ಕಾರಣಕ್ಕೆ ತಂದೆಯೇ ಹಲ್ಲೆ ನಡೆಸಿ, ಯುವತಿ ಮೃತಪಟ್ಟಿದ್ದು, ಇದೊಂದು ಅಮಾನವೀಯ ಘಟನೆ. ಸಮಾಜ ಇಷ್ಟು ಕೀಳು ಮಟ್ಟಕ್ಕೆ ಇಳಿದಿದೆ ಎಂದು ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಅಧ್ಯಕ್ಷರಾದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ತೀವ್ರವಾಗಿ ಖಂಡನೆ ವ್ಯಕ್ತಪಡಿಸಿದ್ದಾರೆ.
ಈ ಘಟನೆ ನಡೆದು ಮೂರ್ನಾಲ್ಕು ದಿನವಾದರೂ ಪ್ರಜ್ಞಾವಂತ ಸಮಾಜದ ಚಿಂತಕರು, ಸಮಾಜ ಸುಧಾರಕರು,ಪ್ರಜ್ಞಾವಂತರು ಯಾರು ಖಂಡಿಸಲಿಲ್ಲ. ಬಸವಾದಿ ಶರಣರ ತತ್ವಗಳನ್ನು ಅಳವಡಿಸಿಕೊಂಡಿದ್ದೇವೆಂದು ಹೇಳುವ ಧಾರ್ಮಿಕ ಚಿಂತಕರು ಸಹ ಈ ಕೃತ್ಯ ಖಂಡಿಸುತ್ತಾರೆಂದು ಭಾವಿಸಿದ್ದೆವು. ಆದರೆ ಈವರೆಗೆ ಅದು ಆಗಲಿಲ್ಲ ಎಂದು ಶ್ರೀಗಳು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಕೆಳಜಾತಿಯ ಯುವಕನೋರ್ವ ಮೇಲ್ವರ್ಗದ ಯುವತಿಯನ್ನು ಮದುವೆಯಾದ ಎಂಬ ಕಾರಣಕ್ಕೆ ತನ್ನ ಮಗಳನ್ನೇ, ಅದರಲ್ಲೂ ಏಳು ತಿಂಗಳ ಗರ್ಭಿಣಿಯನ್ನು ಮನುಷತ್ವ ಬಿಟ್ಟು ಕ್ರೂರವಾಗಿ ಕೊಲ್ಲುವುದೆಂದರೆ ಈ ಸಮಾಜ ಎತ್ತ ಸಾಗುತ್ತಿದೆ ಎಂದು ಶ್ರೀಗಳು ಕಳವಳ ವ್ಯಕ್ತಪಡಿಸಿದ್ದಾರೆ.
ದಲಿತರು, ಶೋಷಿತರ ಮೇಲೆ ಮತ್ತು ಅವರಿಗೆ ಸಂಬಂಧಿಸಿದವರ ಮೇಲೆ ದೌರ್ಜನ್ಯಗಳು ನಡೆದರೆ ದಲಿತರೆ ಧ್ವನಿ ಎತ್ತಬೇಕು. ಮೇಲ್ವರ್ಗದವರ ಮೇಲೆ ಇಂತಹ ಪ್ರಕರಣಗಳು ನಡೆದರೆ ದಲಿತರಾದಿಯಾಗಿ ಎಲ್ಲರೂ ಅವರೊಟ್ಟಿಗೆ ಧ್ವನಿ ಎತ್ತಬೇಕು ಎಂದಿದ್ದಾರೆ. ಇದೆ ಹುಬ್ಬಳ್ಳಿಯಲ್ಲಿ ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮೇಲ್ವರ್ಗದ ಯುವತಿಯನ್ನು ಮದುವೆಯಾಗಲು ಒಪ್ಪಲಿಲ್ಲ ಎಂಬ ಕಾರಣಕ್ಕೆ ಅನ್ಯ ಧರ್ಮಿಯ ಯುವಕ ಕಾಲೇಜು ಕ್ಯಾಂಪಸ್ನಲ್ಲಿಯೇ ಚಾಕುವಿನಿಂದ ಚುಚ್ಚಿ ಕೊಂದಿದ್ದ. ಮರು ದಿನವೇ ವಿದ್ಯಾರ್ಥಿ ಸಂಘಟನೆಗಳು , ಹೋರಾಟಗಾರರು ಬೀದಿಗಿಳಿದರು ಧಾರ್ಮಿಕ ಪೀಠಾಧಿಪತಿಗಳು ಸಾಲು ಸಾಲಾಗಿ ಯುವತಿಯ ಮನೆಗೆ ಭೇಟಿ ಕೊಟ್ಟರು.
ಅಂದು ಕೊಲೆಯಾದವಳು ಮೇಲ್ವರ್ಗದ ಹುಡುಗಿ. ಇವತ್ತು ಕೊಲೆಯಾದವಳು ಮೇಲ್ವರ್ಗದ ಹುಡುಗಿಯೇ. ಅಂದು ಬೀದಿಗಿಳಿದು ಖಂಡಿಸಲು ಕಾರಣ ಅದೊಂದು ಧರ್ಮಾಧರಿತ ಕೊಲೆಯಾಗಿತ್ತು. ಇದು ಜಾತಿ ಆಧಾರಿತ ಕೊಲೆಯಾಗಿದೆ. “ದಯವೇ ಧರ್ಮದ ಮೂಲ” “ನೆಲವೊಂದೇ ಹೊಲಗೇರಿ ಶಿವಾಲಯಕ್ಕೆ” ಎಂದು ಹೇಳಿದ ಬಸವಣ್ಣನವರ ಅನುಯಾಯಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಶ್ರೀಗಳು ತಿಳಿಸಿದ್ದಾರೆ.
ಜಾತಿಯ ಕಾರಣಕ್ಕೆ ಗರ್ಭಿಣಿ ಮಗಳನ್ನು ಕ್ರೂರವಾಗಿ ಕೊಲ್ಲುವಷ್ಟು ಮಟ್ಟಕ್ಕೆ ಈ ಸಮಾಜ ಇಳಿದಿದೆ. ಕೃತ್ಯವೆಸಗಿದವರು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಬಾರದು ಎಂದು ಮಾದಾರ ಚನ್ನಯ್ಯ ಶ್ರೀಗಳು ಆಗ್ರಹಿಸಿದ್ದಾರೆ.
