ತುಳಿತಕ್ಕೊಳಗಾದ ದಲಿತರಿಗೆ ಅನ್ಯಾಯವಾಗಲು ಕಾಂಗ್ರೆಸ್ ಸರ್ಕಾರ ಬಿಡುವುದಿಲ್ಲ: ಡಿ. ಸುಧಾಕರ್
ಚಿತ್ರದುರ್ಗ ಹೊಯ್ಸಳ
ಚಳ್ಳಕೆರೆ:
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಸಮಾಜದಲ್ಲಿ ತುಳಿತಕ್ಕೊಳಗಾದ ದಲಿತರು ಹಾಗೂ ಶೋಷಿತರ ಪರವಾಗಿ ಸದಾ ನಿಂತು ಅವರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹೇಳಿದರು.
ನಗರದ ತಾಲೂಕು ಕಚೇರಿ ಎದುರು ದಲಿತ ಸಂಘಟನೆಗಳು ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ಎರಡು ದಿನಗಳಿಂದ ನಡೆಸುತ್ತಿರುವ ಧರಣಿ ಸ್ಥಳಕ್ಕೆ ಆಗಮಿಸಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಆದೇಶದಂತೆ ಒಳಮೀಸಲಾತಿಗೆ ಮಾರ್ಗಸೂಚಿ ದೊರೆತಿದ್ದು, ರಾಜ್ಯ ಸರ್ಕಾರ ಈ ಕುರಿತು ಮಸೂದೆ ರೂಪಿಸಿ ರಾಜ್ಯಪಾಲರಿಗೆ ಅಂಕಿತಕ್ಕಾಗಿ ಕಳುಹಿಸಿದೆ. ಆದರೆ ಹೈಕೋರ್ಟ್ ತಡೆಯಾಜ್ಞೆಯಿಂದ ತಾತ್ಕಾಲಿಕವಾಗಿ ಜಾರಿ ಪ್ರಕ್ರಿಯೆ ಸ್ಥಗಿತಗೊಂಡಿದೆ. ತಡೆ ತೆರವಾದ ಕೂಡಲೇ ಯಾವುದೇ ಮುಲಾಜು ಇಲ್ಲದೆ ಒಳಮೀಸಲಾತಿ ಜಾರಿಗೆ ತರಲಾಗುವುದು ಎಂದು ತಿಳಿಸಿದರು.
ಹಿಂದಿನಂತೆ 6:6:5 ಅನುಪಾತದಲ್ಲಿ ಮೀಸಲಾತಿ ಜಾರಿಯಾಗಲಿದೆ ಎಂದು ಅವರು ಹೇಳಿದರು. ಜೊತೆಗೆ ಧಾರವಾಡದಲ್ಲಿ ಉದ್ಯೋಗ ಕಲ್ಪನೆ ಸಂಬಂಧ ಉಂಟಾದ ಆಕ್ರೋಶದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಒಟ್ಟು 2 ಲಕ್ಷ 70 ಸಾವಿರ ಸರ್ಕಾರಿ ಹುದ್ದೆಗಳಿದ್ದು, ಮೊದಲ ಹಂತದಲ್ಲಿ 56 ಸಾವಿರ ಹುದ್ದೆಗಳ ಭರ್ತಿಗೆ ಸಚಿವ ಸಂಪುಟ ನಿರ್ಧಾರ ಕೈಗೊಂಡಿದೆ. ಈ ಕುರಿತು ನಾಲ್ಕು ಗಂಟೆಗಳ ಕಾಲ ಚರ್ಚೆ ನಡೆಸಿ ಎಲ್ಲ ಸಮುದಾಯಗಳ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಸಂಚಾಲಕ ಟಿ. ವಿಜಯ್ ಕುಮಾರ್ ಮಾತನಾಡಿ, ನಾಗಮೋಹನ್ ದಾಸ್ ವರದಿ ಪ್ರಕಾರ ಎಸ್ಸಿ ಸಮುದಾಯಕ್ಕೆ ಶೇ.17 ಹಾಗೂ ಎಸ್ಟಿ ಸಮುದಾಯಕ್ಕೆ ಶೇ.7 ಮೀಸಲಾತಿ ಜಾರಿಯಾಗಬೇಕು. ಒಳಮೀಸಲಾತಿಯ ಆಶಯಕ್ಕೆ ಅನುಗುಣವಾಗಿಯೇ ನೇಮಕಾತಿ ನಡೆಯಬೇಕು. ಆದರೆ ರಾಜ್ಯ ಸರ್ಕಾರ 56,432 ಹುದ್ದೆಗಳ ಭರ್ತಿಗೆ ಮುಂದಾಗಿರುವ ಕ್ರಮದಿಂದ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಘೋರ ಅನ್ಯಾಯವಾಗಲಿದೆ ಎಂದು ಆರೋಪಿಸಿದರು.
ಶೇ.56 ಮೀಸಲಾತಿ ಹಾಗೂ ಒಳಮೀಸಲಾತಿ ಹೊರಗಿಟ್ಟು ನೇಮಕಾತಿಗೆ ಮುಂದಾಗಿರುವ ಕ್ರಮವು ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ ಎಂದರು. ರಾಜ್ಯಪಾಲರು ಅಂಕಿತ ನೀಡದೆ ಮಸೂದೆ ವಾಪಸ್ ಕಳುಹಿಸಿದ ನಂತರ ಸಚಿವ ಸಂಪುಟದಲ್ಲಿ ಸರಿಪಡಿಸಿ ಪುನಃ ಕಳುಹಿಸಲಾಗಿದೆ. ಕೇಂದ್ರ ಸರ್ಕಾರದಿಂದ ಅಂತಿಮ ಅನುಮತಿ ಬರುವ ಮುನ್ನ ಖಾಲಿ ಹುದ್ದೆಗಳ ಭರ್ತಿ ಮಾಡುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಮಾದಿಗ ಸಮುದಾಯದ 35 ವರ್ಷಗಳ ಹೋರಾಟಕ್ಕೆ ಅನ್ಯಾಯ ಮಾಡುವ ದಿಕ್ಕಿನಲ್ಲಿ ಸರ್ಕಾರ ನಡೆದುಕೊಳ್ಳುತ್ತಿದೆ. ಕ್ಷೇತ್ರದಲ್ಲಿ ಎಲ್ಲೆಡೆ ಮಾದಿಗರು ತಡೆದು ಪ್ರಶ್ನಿಸುತ್ತಿದ್ದಾರೆ. ನಮ್ಮ ಸಮುದಾಯ ನಿಮಗೆ ಮತ ನೀಡಿ ಗೆಲ್ಲಿಸಿದೆ; ಆದ್ದರಿಂದ ನಿಮ್ಮ ಮೇಲೂ ನಮಗೆ ಭರವಸೆ ಇದೆ ಎಂದು ಸಚಿವ ಸಂಪುಟದಲ್ಲಿಯೇ ನಾನು ಪ್ರಶ್ನಿಸಿದ್ದೇನೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಡಿ. ಚಂದ್ರು, ದ್ಯಾವರನಹಳ್ಳಿ ತಿಪ್ಪೇಸ್ವಾಮಿ, ಸುರೇಶ್, ನನ್ನಿವಾಳ ನಾಗರಾಜ್, ಶಿವಮೂರ್ತಿ, ಎನ್. ಪ್ರಕಾಶ್, ಮಲ್ಲೇಶ್, ಕಾಂತರಾಜ್, ನಾಗರಾಜ್, ಕೆ.ಕುಮಾರ್, ರಾಜು, ವೀರಭದ್ರಪ್ಪ ಸೇರಿದಂತೆ ದಲಿತ ಸಂಘರ್ಷ ಸಮಿತಿ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.
