ಅಕ್ಷರ ಹಬ್ಬದಂತೆ ಜರುಗಿದ ‘ಪ್ರತಿಭಾ ಪುರಸ್ಕಾರ-2026’
CHITRADURGA HOYSSLA NEES /
ಚಿತ್ರದುರ್ಗ/ ಬೆಳಗಟ್ಟ:
ಹಳೆಯ ನೆನಪುಗಳ ಮೆಲುಕು, ಸಾಧನೆಯ ಹಾದಿಯಲ್ಲಿರುವ ಪುಟ್ಟ ಪಾದಗಳಿಗೆ ಹಿರಿಯರ ಬೆಂಬಲ ಹಾಗೂ ಗ್ರಾಮದ ತುಂಬೆಲ್ಲ ಪಸರಿಸಿದ ಸಾಂಸ್ಕೃತಿಕ ಕಂಪಿನ ನಡುವೆ ಬೆಳಗಟ್ಟದ ‘ಗೆಳೆತನದ ಗಂಗೋತ್ರಿ’ ಸಂಘಟನೆಯ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭವು ಅತ್ಯಂತ ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಆರಾಧ್ಯ ದೈವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಶಾಲೆಯ ವಿದ್ಯಾರ್ಥಿಗಳು ಹಾಗೂ ಗಣ್ಯರ ಸಮ್ಮುಖದಲ್ಲಿ ಅದ್ಧೂರಿ ಮೆರವಣಿಗೆ ಚಾಲನೆ ಪಡೆಯಿತು. ಮಂಗಳವಾದ್ಯಗಳ ಘೋಷದೊಂದಿಗೆ ಆರಂಭವಾದ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸುವಾಗ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಇದು ಕೇವಲ ಮೆರವಣಿಗೆಯಾಗಿರದೆ, ಅಕ್ಷರ ಸಂಸ್ಕೃತಿಯ ವಿಜಯಯಾತ್ರೆಯಂತೆ ಕಂಡುಬಂದಿತು.
ಮೆರವಣಿಗೆಯ ನಂತರ ‘ಶ್ರೀ ನರಹರಿ ಸದ್ಗುರು ಕಲ್ಯಾಣ ಮಂಟಪ’ದಲ್ಲಿ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಕಾರ್ಯಕ್ರಮವನ್ನು ಶ್ರೀ ಸಂಪತ್ ಕುಮಾರ್ ಕೆ.ಬಿ.ಆರ್.ಸಿ. ಅವರು ಉದ್ಘಾಟಿಸಿ ಮಾತನಾಡಿ , ಶಿಕ್ಷಣವು ಕೇವಲ ಅಂಕಗಳಿಗೆ ಸೀಮಿತವಾಗದೆ ವ್ಯಕ್ತಿತ್ವ ವಿಕಸನಕ್ಕೆ ದಾರಿಯಾಗಬೇಕು ಎಂದು ಕರೆ ನೀಡಿದರು.ಸನ್ಮಾನಿತ ವಿದ್ಯಾರ್ಥಿಗಳ ಮೊಗದಲ್ಲಿ ಸಾಧನೆಯ ತೃಪ್ತಿ ಎದ್ದು ಕಾಣುತ್ತಿತ್ತು. , “ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಅದ್ಭುತವಾದ ಪ್ರತಿಭೆಯಿದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಗೆಳೆತನದ ಗಂಗೋತ್ರಿ ಜಾತ್ಯಾತೀತವಾಗಿ ಮಾಡುತ್ತಿರುವುದು ಶ್ಲಾಘನೀಯ” ಎಂದರು.
ಕಾರ್ಯಕ್ರಮದ ಸಂಚಾಲಕರಾದ ಶ್ರೀ ನಾಗರಾಜ್ ಬೆಳಗಟ್ಟ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, 1990-91ನೇ ಸಾಲಿನ ವಿದ್ಯಾರ್ಥಿಗಳ ಈ ಸಂಘಟನೆಯು ಹೇಗೆ ಸಮಾಜಮುಖಿಯಾಗಿ ಬೆಳೆಯುತ್ತಿದೆ ಎಂಬುದನ್ನು ವಿವರಿಸಿದರು. “ನಮ್ಮ ಶಾಲೆಯ ಮಣ್ಣಿನ ಋಣವನ್ನು ತೀರಿಸುವ ಒಂದು ಸಣ್ಣ ಪ್ರಯತ್ನವಿದು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಾವು ನೀಡುವ ಪುರಸ್ಕಾರ ಅವರ ಮುಂದಿನ ಉನ್ನತ ಸಾಧನೆಗೆ ಪ್ರೇರಣೆಯಾಗಲಿ” ಎಂದು ಆಶಿಸಿದರು.
ಸಮಾರಂಭದ ಪ್ರಮುಖ ಆಕರ್ಷಣೆಯಾದ ಅಭಿನಂದನಾ ಪತ್ರ , ನಗದು ಬಹುಮಾನ ಹಾಗೂ ಪುಸ್ತಕ ವಿತರಣೆಯನ್ನು ಡಿ.ಎಲ್ ತಿಮ್ಮಾರೆಡ್ಡಿ ನಿವೃತ್ತ ಮುಖ್ಯೋಪಾಧ್ಯಾಯರು ಹಳೆಯ ವಿದ್ಯಾರ್ಥಿಗಳು ತಮ್ಮ ಶಾಲೆಗೆ ಮರಳಿ ಬಂದು ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ನಮಗೆ ಹೆಮ್ಮೆಯ ವಿಷಯ ಎಂದರು. ವಿದ್ಯಾರ್ಥಿಗಳು ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಸಾಧನೆಯ ಶಿಖರಕ್ಕೇರಬೇಕೆಂದು ಹಾರೈಸಿದರು. ಚಿತ್ರದುರ್ಗದ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಗುರುನಾಥ್ ಬಿ.ಎಂ. (ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ) ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, “ಸಂಸ್ಕೃತಿ ಮತ್ತು ಶಿಕ್ಷಣ ಒಂದೇ ನಾಣ್ಯದ ಎರಡು ಮುಖಗಳು. ಗೆಳೆತನದ ಗಂಗೋತ್ರಿ ಸಂಘಟನೆಯು ಸ್ನೇಹದ ಮೂಲಕ ಸಮಾಜದಲ್ಲಿ ಜ್ಞಾನದ ದೀವಿಗೆಯನ್ನು ಹಚ್ಚುತ್ತಿದೆ. ಇಂತಹ ಕಾರ್ಯಕ್ರಮಗಳು ಗ್ರಾಮೀಣ ಪ್ರತಿಭೆಗಳಿಗೆ ಆನೆಬಲ ನೀಡುತ್ತವೆ” ಎಂದು ಮಾರ್ಮಿಕವಾಗಿ ನುಡಿದರು.
ಕಾರ್ಯಕ್ರಮದಲ್ಲಿ ಲೋಕೇಶ್ ವಿ. ಪ್ರಾಚಾರ್ಯರು, ಮಂಜುನಾಥ.ಎಸ್, ಮುಖ್ಯೋಪಾಧ್ಯಾಯರು , ಉಪನ್ಯಾಸಕರಾದ ಮಹಮದ್ ಶಕೀಲ್ , ಸಂತೋಷ್ ಕುಮಾರ್, ರಾಮು, ಅಜ್ಜಣ್ಣ, ಗೆಳೆತನದ ಗಂಗೋತ್ರಿ ಬಳಗದ ಎಲ್ಲಾ ಸದಸ್ಯರು, ಪೋಷಕರು, ಗ್ರಾಮಸ್ಥರು ಪಿಯು ಕಾಲೇಜು ಮತ್ತು ಪ್ರೌಢಶಾಲೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
