ಸಂವಿಧಾನದ ಆಶಯಗಳ ಪಾಲನೆಯಿಂದ ಮಾತ್ರ ಸಮಾನತೆ ಸಾಧ್ಯ: ಹರಳಯ್ಯ ಸ್ವಾಮೀಜಿ
ಚಿತ್ರದುರ್ಗ ಹೂಯ್ಸಳ:
ಮೊಳಕಾಲ್ಮೂರು:
“ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ನಾವು ಬದಲಾಗಬೇಕು, ಆ ಬದಲಾವಣೆಯ ಸಶಕ್ತ ರೂಪವೇ ಭಾರತದ ಸಂವಿಧಾನ. ಇತರ ಸಮುದಾಯಗಳಂತೆ ದಲಿತರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕು,” ಎಂದು ಬಸವ ಶಿವಶರಣ ಹರಳಯ್ಯ ಸ್ವಾಮೀಜಿ ತಿಳಿಸಿದರು.
ಅವರು ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ
ತೊರೆಕೋಲಮ್ಮನಹಳ್ಳಿ ಗ್ರಾಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಜೈ ಭೀಮ್ ಮಾದಿಗ ಯುವಕ ಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಅವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಡತನವಿದ್ದರೂ ಶಿಸ್ತಿನ ಬದುಕು ಮುಖ್ಯ:
“ಬಡತನವಿರಬಹುದು, ಆದರೆ ನಮ್ಮ ಶಿಸ್ತು, ನಡೆ ಹಾಗೂ ನುಡಿ ಶ್ರೀಮಂತವಾಗಿರಲಿ. ಇದು ಸಮಾಜದಲ್ಲಿ ನಿಮ್ಮ ಗೌರವವನ್ನು ಹೆಚ್ಚಿಸುತ್ತದೆ. ಅಂಬೇಡ್ಕರ್ ಅವರ ಜಯಂತಿ ಕೇವಲ ಒಂದು ಜಾತಿಗೆ ಸೀಮಿತವಲ್ಲ, ಅದು ಇಡೀ ಸಮಾಜಕ್ಕೆ ಬೇಕಾದ ನೀತಿಯಾಗಿದೆ. ಬಸವಣ್ಣನವರು ಕಂಡ ಸಮಾನತೆಯ ಸಮಾಜದ ಕನಸಿಗೆ ಸಂವಿಧಾನದ ಮೂಲಕ ಬಾಬಾ ಸಾಹೇಬರು ಜೀವ ತುಂಬಿದ್ದಾರೆ. ದಲಿತರನ್ನು ಮೌಢ್ಯದಲ್ಲಿ ಮುಳುಗಿಸಲು ಕೆಲವರು ದೇವರ ಹೆಸರಿನಲ್ಲಿ ಹುನ್ನಾರ ನಡೆಸಿದ್ದಾರೆ. ಮಾರಿ-ದುರುಗಿಯರ ಜಾತ್ರೆಗಿಂತ ಬಾಬಾ ಸಾಹೇಬರ ವಿಚಾರಗಳನ್ನು ಹಬ್ಬದಂತೆ ಆಚರಿಸಿ,” ಎಂದು ಅವರು ಕರೆ ನೀಡಿದರು.
ಡಿಜೆ ವ್ಯಾಮೋಹದಿಂದ ದೂರವಿರಿ:
ನಿವೃತ್ತ ತಹಸೀಲ್ದಾರ್ ಮಲ್ಲಿಕಾರ್ಜುನ ಮಾತನಾಡಿ, “ಇಂದಿನ ಯುವಜನತೆ ಡಿಜೆ ಮತ್ತು ಅಬ್ಬರದ ಸಂಸ್ಕೃತಿಗೆ ಮಾರುಹೋಗಿ ಅಂಬೇಡ್ಕರ್ ಅವರ ತತ್ವಗಳಿಗೆ ಅಪಚಾರ ಎಸಗುತ್ತಿದ್ದಾರೆ. ಕುಡಿತದಂತಹ ಚಟಗಳಿಗೆ ಬಲಿಯಾಗದೆ, ಅಂಬೇಡ್ಕರ್ ಅವರ ಸಿದ್ಧಾಂತಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಸನಾತನಿಗಳ ಗುಡಿ ಪ್ರವೇಶಕ್ಕಾಗಿ ಹೋರಾಡುವ ಬದಲು ಈ ನೆಲದ ಮೂಲ ಧರ್ಮವಾದ ಬೌದ್ಧ ಧರ್ಮದ ಆಶಯಗಳನ್ನು ಮೈಗೂಡಿಸಿಕೊಳ್ಳಿ,” ಎಂದರು.
ಶಿಕ್ಷಣವೇ ಗುಲಾಮಿತನಕ್ಕೆ ಮದ್ದು:
ವಕೀಲ ಮರ್ಲಹಳ್ಳಿ ಪರಮೇಶ್ ಮಾತನಾಡಿ, “ಗುಲಾಮಿತನವನ್ನು ಆನಂದಿಸುವ ಮನೋವ್ಯಾಧಿಗೆ ಶಿಕ್ಷಣವೇ ಏಕೈಕ ಮದ್ದು. ಅಂಬೇಡ್ಕರರನ್ನು ಕೇವಲ ಉತ್ಸವ ಮೂರ್ತಿಯನ್ನಾಗಿ ಮಾಡಬೇಡಿ, ಅವರ ವಿಚಾರಗಳನ್ನು ಸಮಾಜದಲ್ಲಿ ಬಿತ್ತಿ,” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ .ಲಿಡ್ಕರ್ ಶಂಕರ್.ಮೋಹನ್ ಕುಮಾರ್, ಚನ್ನಗಾನಹಳ್ಳಿ ಮಲ್ಲೇಶ್, ಹಿರೇಹಳ್ಳಿ ಮಲ್ಲೇಶ್, ಓ. ಕರಿಬಸಪ್ಪ, ಹೊನ್ನೂರು ಮಾರಣ್ಣ, ಲಿಂಗರಾಜ್ ಭೀಮನಕೆರೆ, ಶಿವದತ್ತ, ಆರ್. ಬಸಪ್ಪ, ಯಲ್ಲಪ್ಪ, ಅಶೋಕ್, ಮಹಂತೇಶ್, ಕುಮಾರ್, ಪೆನ್ನೇಶ್ ಹಾಗೂ ಕಾಲೋನಿಯ ಮಹಿಳೆಯರು ಮತ್ತು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು