ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾವೂ – ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಗುರುತಿಸಿ ಮುಖ್ಯವಾಹಿನಿಗೆ ತರುವುದಾಗಿದೆ
ಚಿತ್ರದುರ್ಗ ಹೊಯ್ಸಳ ಸುದ್ದಿ
ಹೊಸದುರ್ಗ :
ಹಾನಗಲ್ ಕುಮಾರಸ್ವಾಮಿಗಳು ಲಿಂಗ ದೀಕ್ಷೆ ಹಾಗೂ ಸಂಸ್ಕಾರ ನೀಡುವ ಮೂಲಕ ವೀರಶೈವ ಲಿಂಗಾಯತ ಧರ್ಮವನ್ನು ಕಾಯಕ ಧರ್ಮವೆಂದು ಜನರಿಗೆ ಪರಿಚಯಿಸಿದರು. ಇಂದು ಅವರ ಕನಸಿನ ಕೂಸಾದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ದೇಶ-ವಿದೇಶಗಳಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ ಎಂದು ರಾಜ್ಯ ಖನಿಜ ನಿಗಮದ ಅಧ್ಯಕ್ಷ ಎಸ್. ಲಿಂಗಮೂರ್ತಿ ತಿಳಿಸಿದರು.
ನಗರದ ಶ್ರೀ ಗುರು ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹೊಸದುರ್ಗ ತಾಲ್ಲೂಕು ಘಟಕದ ವತಿಯಿಂದ ಆಯೋಜಿಸಿದ್ದ ಪದಾಧಿಕಾರಿಗಳ ಸೇವಾ ದೀಕ್ಷೆ ಹಾಗೂ ಶತಾಯುಷಿಗಳ ಗೌರವ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು 1904ರಲ್ಲಿ ಹಾನಗಲ್ ಕುಮಾರಸ್ವಾಮಿಗಳು ಸ್ಥಾಪಿಸಿದ ವೀರಶೈವ ಮಹಾಸಭಾ ಇಂದು ವಿಶ್ವದಾದ್ಯಂತ ತನ್ನ ಸೇವಾ ಚಟುವಟಿಕೆಗಳನ್ನು ವಿಸ್ತರಿಸಿಕೊಂಡು ಸಮಾಜದ ಹಿತಕ್ಕಾಗಿ ಕೆಲಸ ಮಾಡುತ್ತಿದೆ.
ಮಹಾಸಭೆಯ ಪದಾಧಿಕಾರಿಗಳು ಸೇವಾ ದೀಕ್ಷೆ ಸ್ವೀಕರಿಸಿದ ನಂತರ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಗುರುತಿಸಿ ಅವರನ್ನು ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ನಿವೃತ್ತ ಐಜಿಪಿ ಶಟ್ಟಿಹಳ್ಳಿ ಸಿದ್ದರಾಮಪ್ಪ ಮಾತನಾಡಿ, ವೀರಶೈವ ಲಿಂಗಾಯತರು ಬಸವಣ್ಣನ ತತ್ವಗಳಲ್ಲಿ ಬದುಕುವ ಪ್ರಜ್ಞಾವಂತ ಸಮುದಾಯ, ಸಮಾಜದ ಅಭಿವೃದ್ಧಿಗಾಗಿ ಪ್ರತಿಮಾಸ ಸಭೆಗಳನ್ನು ನಡೆಸಿ ಚಿಂತನೆ ಮಾಡಬೇಕು. ಸಂಘಟನೆಯ ಪದಾಧಿಕಾರಿಗಳು ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ತ್ರೈಮಾಸಿಕ ಸಭೆ ನಡೆಸಿ ಲೆಕ್ಕಪತ್ರ ಮಂಡಿಸಿದಾಗ ಸಂಘಟನೆಗೆ ಗೌರವ ಹೆಚ್ಚುತ್ತದೆ ಎಂದರು.
ವೀರಶೈವ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸ್ವಯಂ ಉದ್ಯೋಗಗಳಲ್ಲಿ ತೊಡಗಿಸಿಕೊಳ್ಳಬೇಕು. ಗ್ರಾಮೀಣ ಭಾಗದ ಮಹಿಳೆಯರಿಗೆ ಉದ್ಯೋಗ ಸೃಷ್ಟಿಯಾಗುವಂತೆ ಗುಡಿಕೈಗಾರಿಕೆಗಳನ್ನು ಸ್ಥಾಪಿಸುವ ಕಾರ್ಯವನ್ನು ಮಹಾಸಭೆ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ರಾಜ್ಯ ವೀರಶೈವ ಮಹಿಳಾ ಘಟಕದ ಅಧ್ಯಕ್ಷೆ ಮುಕ್ತಾಂಬ ಮಾತನಾಡಿ, ಮಹಾಸಭೆ ವೀರಶೈವ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದು,ಮುಂದಿನ ಪೀಳಿಗೆಗೆ ಅಗತ್ಯವಾದ ಸಾಮಾಜಿಕ,ರಾಜಕೀಯ ಹಾಗೂ ಆರ್ಥಿಕ ಸದೃಢತೆಯನ್ನು ನಿರ್ಮಿಸುವ ಉದ್ದೇಶದಿಂದ ದೇಶದಾದ್ಯಂತ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿದೆ ಎಂದರು.
125 ವರ್ಷಗಳ ಇತಿಹಾಸ ಹೊಂದಿರುವ ಈ ಸಂಸ್ಥೆ, 12ನೇ ಶತಮಾನದಲ್ಲಿ ಬಸವಣ್ಣ ಸಾರಿದ “ಕಾಯಕವೇ ಕೈಲಾಸ” ತತ್ವದ ಅಡಿಯಲ್ಲಿ ಬೆಳೆಯುತ್ತ ಬಂದಿದೆ. ವಚನ ಸಾಹಿತ್ಯದ ಆದರ್ಶಗಳ ಪ್ರಕಾರ ಶ್ರಮಪಟ್ಟು ದುಡಿದು ಬದುಕುವ ಮೌಲ್ಯಗಳನ್ನು ವೀರಶೈವ ಲಿಂಗಾಯತ ಧರ್ಮ ಸಾರುತ್ತಿದೆ. ಮಹಿಳೆಯರಿಗೂ ಸಮಾನತೆ ದೊರೆಯುವಂತೆ ಧರ್ಮ ತನ್ನದೇ ಆದ ಆಚಾರ-ವಿಚಾರಗಳ ಮೂಲಕ ಕೆಲಸ ಮಾಡುತ್ತಿದೆ ಎಂದು ಹೇಳಿದರು.ವೀರಶೈವ ಲಿಂಗಾಯತ ಸಮಾಜ ಒಳಪಂಗಡಗಳ ಭಿನ್ನಾಭಿಪ್ರಾಯಗಳಿಂದ ನಲುಗಿದ್ದು,ಸದೃಢ ಮತ್ತು ಸಮೃದ್ಧ ಸಮಾಜ ನಿರ್ಮಾಣವೇ ಮಹಾಸಭೆಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ತಾಲೂಕಿನ ವಿವಿಧ ಸಮುದಾಯಗಳ ಶತಾಯುಷಿ ತಮ್ಮ ಸೇರಿದಂತೆ ವಿವಿಧ ಶತಾಯುಷಿಗಳನ್ನು ಮಹಾಸಭೆ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ರೇಣುಕಾ ಪ್ರಸನ್ನ, ಉಮೇಶ್ ಪಾಟೀಲ್, ನಿವೃತ್ತ ಐಜಿಪಿ ಸಿದ್ದರಾಮಪ್ಪ,ದ್ಯಾಮಣ್ಣ, ಅಬ್ಬಿಗೆರೆ ಮನೋಹರ್, ನಟರಾಜ್,ಮಹಡಿ ಶಿವಮೂರ್ತಿ,ಮುಕ್ತಾಂಬ, ಮಂಜುನಾಥ್, ಓಂಕಾರಪ್ಪ,ಮಂಜುಳಾ ನಾಗರಾಜ್,ವೀರೇಶ್ ಮೈಲನಹಳ್ಳಿ,ವೀರಶೈವ ಮಹಿಳಾ ಘಟಕದ ಅಧ್ಯಕ್ಷೆ ಸಿಂಧು ಅಶೋಕ್, ಮೇಘಾ,ಚನ್ನಯ್ಯ, ಆನಂದ್ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಪದಾಧಿಕಾರಿಗಳು ಭಾಗವಹಿಸಿದ್ದರು.
