‘ನೀಟ್’ ಪ್ರಶ್ನೆಪತ್ರಿಕೆ ಸೋರಿಕೆ: ಹೊಳಲ್ಕೆರೆಯಲ್ಲಿ ಯುವ ಕಾಂಗ್ರೆಸ್ನಿಂದ ಬೃಹತ್ ಪ್ರತಿಭಟನೆ
ಚಿತ್ರದುರ್ಗ ಹೊಯ್ಸಳ:
ಹೊಳಲ್ಕೆರೆ:
ಕರ್ನಾಟಕ ಪ್ರದೇಶ್ ಯುವ ಕಾಂಗ್ರೆಸ್ ಸಮಿತಿಯ ಆದೇಶದ ಮೇರೆಗೆ, ಮಾಜಿ ಸಚಿವ ಹೆಚ್.ಆಂಜನೇಯ ಅವರ ಮಾರ್ಗದರ್ಶನದಲ್ಲಿ ಹೊಳಲ್ಕೆರೆ ವಿಧಾನಸಭಾ ಯುವ ಕಾಂಗ್ರೆಸ್ ಹಾಗೂ ಹೊಳಲ್ಕೆರೆ ಮತ್ತು ಭರಮಸಾಗರ ಯುವ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ‘ನೀಟ್’ (NEET) ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ವಿರೋಧಿಸಿ, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಪರವಾಗಿ ಹೊಳಲ್ಕೆರೆ ಪಟ್ಟಣದ ಮುಖ್ಯ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವೈಫಲ್ಯ ಮತ್ತು ಪರೀಕ್ಷಾ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರದ ವಿರುದ್ಧ ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
*ಪಾರದರ್ಶಕತೆ ಕಾಯ್ದುಕೊಳ್ಳುವಲ್ಲಿ ಕೇಂದ್ರ ವಿಫಲ:ಹೆಚ್.ಟಿ ಹನುಮಂತಪ್ಪ*
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಹೊಳಲ್ಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಟಿ ಹನುಮಂತಪ್ಪ, “ನೀಟ್ ಪರೀಕ್ಷೆಯಂತಹ ದೇಶದ ಮಹತ್ವದ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದು ಅತ್ಯಂತ ಆಘಾತಕಾರಿ. ಕೇಂದ್ರ ಸರ್ಕಾರ ಪರೀಕ್ಷಾ ವ್ಯವಸ್ಥೆಯನ್ನು ಪಾರದರ್ಶಕವಾಗಿ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಈ ಹಗರಣದ ಹಿಂದೆ ಬಿಜೆಪಿ ಯುವ ಮೋರ್ಚಾದ ಸದಸ್ಯರ ಜಾಲ ಸಕ್ರಿಯವಾಗಿದ್ದು, ಸುಪ್ರೀಂಕೋರ್ಟ್ ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖೆಯಾಗಬೇಕು” ಎಂದು ಆಗ್ರಹಿಸಿದರು.
*ಶಿಕ್ಷಣ ಮಂತ್ರಿಯನ್ನು ವಜಾ ಮಾಡಿ:* ಪವನ್ ಹೆಚ್.ಪಿ
ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಪವನ್ ಹೆಚ್.ಪಿ ಮಾತನಾಡಿ, “ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ದೇಶದ ಶಿಕ್ಷಣ ವ್ಯವಸ್ಥೆಗೆ ದುರ್ಗತಿ ಬಂದಿದೆ. ಪದೇ ಪದೇ ಪೇಪರ್ ಲೀಕ್ ಆಗುತ್ತಿದ್ದರೂ ಪ್ರಧಾನಿ ಮೋದಿ ಮೌನವಾಗಿದ್ದಾರೆ. ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನ್ ಅವರು ಕನಿಷ್ಠ ಜವಾಬ್ದಾರಿಯನ್ನೂ ಹೊರುತ್ತಿಲ್ಲ. ನರೇಂದ್ರ ಮೋದಿ ಅವರಿಗೆ ದೇಶದ ಯುವಕರ ಬಗ್ಗೆ ಕಾಳಜಿ ಇದ್ದರೆ, ಅಯೋಗ್ಯ ಶಿಕ್ಷಣ ಮಂತ್ರಿಯನ್ನು ಕೂಡಲೇ ವಜಾ ಮಾಡಬೇಕು” ಎಂದು ಒತ್ತಾಯಿಸಿದರು.
*ಇದು ಆತ್ಮಹತ್ಯೆಯಲ್ಲ, ಸರ್ಕಾರದ ಕೊಲೆ: ಚೇತನ್ ಹೆಚ್.*
ಹೊಳಲ್ಕೆರೆ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಹೆಚ್. ಮಾತನಾಡಿ, “ಬಿಜೆಪಿಯ ದಳ್ಳಾಳಿಗಳು ಭಾರತದ ಯುವಜನರ ಭವಿಷ್ಯವನ್ನು ಹಾಳು ಮಾಡಲು ನಿಂತಿದ್ದಾರೆ. ನೀಟ್ ಪರೀಕ್ಷೆಯ ಪೇಪರ್ ಲೀಕ್ನಿಂದಾಗಿ ನೊಂದು ನಾಲ್ಕು ಜನ ಅಮಾಯಕ ವಿದ್ಯಾರ್ಥಿಗಳು ಪ್ರಾಣ ತೆತ್ತಿದ್ದಾರೆ. ಇದು ಆತ್ಮಹತ್ಯೆಯಲ್ಲ, ಕೇಂದ್ರ ಸರ್ಕಾರದ ದುರಾಡಳಿತ ನಡೆಸಿದ ಕೊಲೆ” ಎಂದು ಗಂಭೀರವಾಗಿ ಆರೋಪಿಸಿದರು.
ಪ್ರತಿಭಟನೆಯಲ್ಲಿ ಭರಮಸಾಗರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಮುಬಾರಕ್, ಮಾಜಿ ಜಿ.ಪಂ ಅಧ್ಯಕ್ಷ ಪಿ.ಆರ್ ಶಿವಕುಮಾರ್ ಶಿವಪುರ, ಮಾಜಿ ಜಿ.ಪಂ ಸದಸ್ಯ ಎಂ.ಜಿ ಲೋಹಿತ್ ಕುಮಾರ್, ಮಾಜಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಧುಪಾಲೇ ಗೌಡ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಹೇಮಂತ್ ಗೌಡ, ಲೋಕೇಶ್, ಕಾಂಗ್ರೆಸ್ ಯುವ ಮುಖಂಡರಾದ ಹರೀಶ್ ಯಾದವ್, ತಿಮ್ಮಣ್ಣ, ಗಜೇಂದ್ರ, ಬಸವರಾಜ್, ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಡ್ಮಿನ್ ಹಾಗೂ ಪ್ರಧಾನ ಕಾರ್ಯದರ್ಶಿ ಆಕಾಶ್ ಎಸ್. ಕಡೆಮನೆ, ಜಿಲ್ಲಾ ಮತ್ತು ತಾಲೂಕಿನ ಯುವ ಕಾಂಗ್ರೆಸ್ ಪದಾಧಿಕಾರಿಗಳು, ಮಹಿಳಾ ಕಾರ್ಯಕರ್ತರು ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
