May 19, 2024

Chitradurga hoysala

Kannada news portal

ಹಿರಿಯ ಪತ್ರಕರ್ತ ಚಂದ್ರವಳ್ಳಿ ತಿಪ್ಪೇರುದ್ರಸ್ವಾಮಿ ನಿಧನ

ವರದಿ:ಭರತ್ ಭಾರ್ಗವ.ಸಿ.ಕೆ

ಚಿತ್ರದುರ್ಗ ಹೊಯ್ಸಳ ಸುದ್ದಿ:

____________________

ಚಿತ್ರದುರ್ಗ:

ದಾವಣಗೆರೆ  ಚಿತ್ರದುರ್ಗ- ಅವಳಿ ಜಿಲ್ಲೆಯ ಹಿರಿಯ ಪತ್ರಕರ್ತ ಚಂದ್ರವಳ್ಳಿ ತಿಪ್ಪೇರುದ್ರಸ್ವಾಮಿ (85) ಭಾನುವಾರ ನಿಧನ ಹೊಂದಿದರು.

ಚಿತ್ರದುರ್ಗ ಜಿಲ್ಲೆಯಲ್ಲಿ ನಾಲ್ಕು ದಶಕದ ಹಿಂದೆಯೇ
ಚಂದ್ರವಳ್ಳಿ ದಿನ ಪತ್ರಿಕೆ ಹೊರತರುವ ಮೂಲಕ ಅವಳಿ ಜಿಲ್ಲೆಯ ಮಾಧ್ಯಮ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದ ತಿಪ್ಪೇರುದ್ರಸ್ವಾಮಿ, ನೂರಾರು ಯುವ ಪತ್ರಕರ್ತರ ಉತ್ಸಾಹಕ್ಕೆ ಚಿಲುಮೆ ರೀತಿ ಕಾರ್ಯನಿರ್ವಹಿಸಿದ್ದರು.

ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಜಿಲ್ಲಾಡಳಿತ ಕೊಡಮಾಡುವ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಸಂಘ,ಸಂಸ್ಥೆಯ ಗೌರವ, ಸನ್ಮಾನಕ್ಕೆ ಪುರಸ್ಕೃತರಾಗಿದ್ದರು. ತಿಪ್ಪೇರುದ್ರಸ್ವಾಮಿ ಇಳಿ ವಯಸ್ಸಿನಲ್ಲೂ ಕೃತಿಗಳನ್ನು ರಚಿಸಿ, ಬಿಡುಗಡೆ ಮಾಡುವ ಮೂಲಕ ಯುವ ಬರಹಗಾರರಿಗೆ ಸ್ಫೂರ್ತಿಯಾಗಿದ್ದರು.

ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಪರಿಣಿತರಾಗಿದ್ದ ತಿಪ್ಪೇರುದ್ರಸ್ವಾಮಿ, ಹಲವು ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ಮೂಲಕ ಮಧ್ಯ ಕರ್ನಾಟಕದಲ್ಲಿ ಜನಾನುರಾಗಿದ್ದರು. ವಿವಿಧ ಕಾರ್ಯಕ್ರಮಗಳಲ್ಲಿ ಆಯುರ್ವೇದ ಮತ್ತು ಮಾಧ್ಯಮ ಕ್ಷೇತ್ರದ ಕುರಿತು ಉಪನ್ಯಾಸ ನೀಡುವ ಮೂಲಕ ಸಮಾಜವನ್ನು ಜಾಗೃತಗೊಳಿಸುವ ಕೆಲಸ ನಿರ್ವಹಿಸುತ್ತಿದ್ದರು.

ಸಂಘ ಪರಿವಾರದೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ತಿಪ್ಪೇರುದ್ರಸ್ವಾಮಿ ಅವರ ಏಕೈಕ ಪುತ್ರ, ಪತ್ರಕರ್ತ ಪ್ರತಾಪ್ ರುದ್ರದೇವ ಎರಡು ತಿಂಗಳ ಹಿಂದೆ ನಿಧನ ಹೊಂದಿದ್ದರು.
ಇಬ್ಬರು ಪುತ್ರಿಯರು, ಮೊಮ್ಮಕ್ಕಳು, ಮರಿ ಮೊಮ್ಮಕ್ಕಳು ಹಾಗೂ ಸಹೋದರ ಖ್ಯಾತ ಆಯುರ್ವೇದ ವೈದ್ಯ ಡಾ.ಬಿ.ಟಿ. ರುದ್ರೇಶ್ ಸೇರಿದಂತೆ ಅನೇಕ ಬಂಧು-ಮಿತ್ರರನ್ನು ಅಗಲಿದ್ದಾರೆ.

ಅಂತ್ಯಕ್ರಿಯೆ:
ಚಿತ್ರದುರ್ಗದಲ್ಲಿ ಸೋಮವಾರ ಬೆಳಗ್ಗೆ ಮೃತರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ

About The Author

Leave a Reply

Your email address will not be published. Required fields are marked *