May 8, 2024

Chitradurga hoysala

Kannada news portal

ಪತ್ರಿಕೆಗಳನ್ನು ಮನೆ ಮನೆಗೆ ತಲುಪಿಸುವ ಪತ್ರಿಕಾ ವಿತರಕರು ನಿಜವಾದ ಹೀರೋಗಳಿದ್ದಂತೆ:ಜಿಲ್ಲಾಧಿಕಾರಿ ದಿವ್ಯಪ್ರಭು

1 min read

ಯಾವ ವೃತ್ತಿಯೂ ಅವಮಾನ – ಅಪಮಾನಕ್ಕೆ ಒಳಗಾಗುವ ವೃತ್ತಿಯಲ್ಲ:ಮಾದಾರ ಚನ್ನಯ್ಯ ಶ್ರೀ

ಪತ್ರಿಕೆಗಳನ್ನು ಮನೆ ಮನೆಗೆ ತಲುಪಿಸುವ ಪತ್ರಿಕಾ ವಿತರಕರು ನಿಜವಾದ ಹೀರೋಗಳಿದ್ದಂತೆ:    ಜಿಲ್ಲಾಧಿಕಾರಿ ದಿವ್ಯಪ್ರಭು

ಚಿತ್ರದುರ್ಗ ಹೊಯ್ಸಳ ನ್ಯೂಸ್/

ಚಿತ್ರದುರ್ಗ:

ಪತ್ರಿಕಾ ವಿತರಕರ ವೃತ್ತಿ ಸ್ವಾಭಿಮಾನಕ್ಕೆ ಪೂರಕವಾದ ವೃತ್ತಿಯಾಗಿದೆ. ಸೂರ್ಯ ಉದಯಿಸುವ ಮುನ್ನವೇ ಕಾರ್ಯಪ್ರವೃತ್ತರಾಗಿ ದುಡಿಯುವ ಈ ವರ್ಗ ಆರೋಗ್ಯಭರಿತ ಕಾಯಕ ಜೀವಿಗಳಾಗಿದ್ದಾರೆ ಎಂದು ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ, ಜಿಲ್ಲಾ ಕಾರ್ಯನಿರತ ಪತ್ರಿಕಾ ಹಂಚಿಕೆದಾರರ, ವಿತರಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಪತ್ರಿಕಾ ವಿತರಕರು ಪತ್ರಿಕೆಯನ್ನು ಮನೆ ಮನೆಗೆ ತಲುಪಿಸಿದಾಗ ಮಾತ್ರ ಪತ್ರಿಕಾ ರಂಗದಲ್ಲಿನ ವರದಿಗಾರರು, ಸಂಪಾದಕರು ಪರಿಶ್ರಮ ಸಾರ್ಥಕವಾಗಲಿದೆ. ಪತ್ರಿಕಾ ಸಂಪಾದಕರ ಜವಾಬ್ದಾರಿ ಎಷ್ಟು ಅಗತ್ಯವಾಗಿರುತ್ತದೆಯೋ ಹಾಗೆಯೇ ಪತ್ರಿಕಾ ವಿತರಕರ ಜವಾಬ್ದಾರಿ ಅದಕ್ಕಿಂತ ಹೆಚ್ಚಿನ ಜವಾಬ್ದಾರಿಯಾಗಿರುತ್ತದೆ. ಮಳೆ, ಚಳಿ, ಗಾಳಿ ಯಾವುದನ್ನು ಲೆಕ್ಕಿಸದೇ ವಾರಿಯರ್ ಆಗಿ ಕೆಲಸ ಮಾಡುವವರು ಪತ್ರಿಕಾ ವಿತರಕರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಸಮಾಜದಲ್ಲಿ ಯಾವ ವೃತ್ತಿಯೂ ಕೂಡ ಅವಮಾನ ಮತ್ತು ಅಪಮಾನಕ್ಕೆ ಒಳಗಾಗುವ ವೃತ್ತಿಯಲ್ಲ. 12ನೇ ಶತಮಾನದಲ್ಲಿ ಎಲ್ಲಾ ಶರಣ-ಶರಣೆಯರು ತಮ್ಮ ತಮ್ಮ ವೃತ್ತಿಗಳ ಆಧಾರದ ಮೇಲೆ ಕಾಯಕ ನಡೆಸುತ್ತಿದ್ದರು. ಯಾವುದೇ ವೃತ್ತಿಗಳು ಸಮಾಜದಲ್ಲಿ ಕೆಳದರ್ಜೆ ಹಾಗೂ ಮೇಲ್ದರ್ಜೆ ಎಂಬ ವಿಭಾಗಗಳನ್ನು ಮಾಡಿ ಮಾತನಾಡುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟರು.

ನಾನೂ ಕೂಡ ನನ್ನ ವಿದ್ಯಾರ್ಥಿ ಜೀವನದಲ್ಲಿ ಮನೆ ಮನೆಗೆ ಪತ್ರಿಕೆ ಹಂಚಿದ್ದೇನೆ. ಚಹ ಮಾರುವುದು, ಪತ್ರಿಕೆ ವಿತರಣೆ ಮಾಡುವುದು ಅವಮಾನವಲ್ಲ ಅದು ಕೂಡ ಗೌರವ ಕೊಡುವ ಕರ್ತವ್ಯ ಸೇವೆ. ಪತ್ರಿಕಾ ವಿತರಕರ ವೃತ್ತಿ ಸ್ವಾಭಿಮಾನಕ್ಕೆ ಧಕ್ಕೆ ತರುವ ಕೆಲಸವಲ್ಲ. ಸ್ವಾಭಿಮಾನಕ್ಕೆ ಪೂರಕವಾದ ವೃತ್ತಿ. ಮಾನಸಿಕ ಮತ್ತು ದೈಹಿಕ ದೃಷ್ಠಿಯಿಂದ ಸಂಪೂರ್ಣ ಆರೋಗ್ಯಭರಿತ ಸೇವೆಯೇ ಪತ್ರಿಕಾ ವಿತರಣೆ ಸೇವೆ ಎಂದರು.

ಪತ್ರಿಕಾ ವಿತರಿಕಗೆ ಸೇವಾ ಭದ್ರತೆ ಹಾಗೂ ಆರೋಗ್ಯ ವಿಮೆ ಸೇರಿದಂತೆ ವಿವಿಧ ಭದ್ರತೆಗಳನ್ನು ಸರ್ಕಾರಗಳು ನೀಡಿದರೆ ಬಹುಶಃ ನೀವೂ ಕೂಡ ಕಾಳಜಿಯಿಂದ ಸೇವೆ ಮಾಡಲು ಸಾಧ್ಯವಾಗಲಿದೆ. ಪತ್ರಿಕೆಯನ್ನು ಪ್ರಾಮಾಣಿಕವಾಗಿ ಓದುಗರ ಮನೆಗೆ ಮುಟ್ಟಿಸುವ ಜವಾಬ್ದಾರಿಯನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಮಾತನಾಡಿ, ಪತ್ರಿಕಾ ವಿತರಕರ ಸಮಸ್ಯೆ ತಿಳಿಯಲು ವಿತರಕರ ದಿನಾಚರಣೆ ಸಹಕಾರಿ ಆಗಿದೆ. ನಿತ್ಯವೂ ಪತ್ರಿಕೆಗಳನ್ನು ಮನೆ ಮನೆಗೆ ತಲುಪಿಸುವ ಪತ್ರಿಕಾ ವಿತರಕರು ನಿಜವಾದ ಹೀರೋಗಳಿದ್ದಂತೆ. ಎ.ಪಿ.ಜೆ.ಅಬ್ದುಲ್ ಕಲಾಂ ಅವರು ಕೂಡ ಚಿಕ್ಕ ವಯಸ್ಸಿನಲ್ಲಿ ಪತ್ರಿಕಾ ವಿತರಣೆ ವೃತ್ತಿಯಲ್ಲಿ ತೊಡಗಿ, ನಂತರ ದೇಶದ ಉನ್ನತ ಸ್ಥಾನವಾದ ರಾಷ್ಟ್ರಪತಿ ಹುದ್ದೆ ಅಲಂಕರಿಸಿದರು. ನನ್ನ ತಾತ, ತಂದೆ ಕೂಡ ಈ ವೃತ್ತಿ ಮಾಡಿದ್ದಾರೆ. ನನಗೆ ಆ ಸಮಯಯಲ್ಲಿ ಅವಕಾಶ ದೊರೆಯಲಿಲ್ಲ. ಪತ್ರಿಕೆ ಹೊರತರುವುದು ನಿತ್ಯ ಹೆರಿಗೆಯμÉ್ಟೀ ನೋವು ಅನುಭವಿಸಿದಂತೆ ಎಂದು ಹೇಳಿದರು.
ಪತ್ರಿಕಾ ವಿತರಕರಿಗೆ ಈಗಾಗಲೇ ನಿವೇಶನ ಹಂಚಿಕೆ ಮಾಡಲಾಗಿದ್ದು, ಹಕ್ಕುಪತ್ರ ವಿತರಣೆ ಮಾಡುವುದು ಬಾಕಿ ಇದೆ. ಇದರ ಜೊತೆಗೆ ಪತ್ರಿಕೆ ಬಂಡಲ್ ವಿಂಗಡಣೆ ಮಾಡಲು ಸ್ಥಳವನ್ನು ಗುರುತಿಸುವಂತೆ ಮನವಿ ಮಾಡಲಾಗಿದ್ದು, ಆದಷ್ಟು ಶೀಘ್ರದಲ್ಲಿ ಜಿಲ್ಲಾಡಳಿತದ ವತಿಯಿಂದ ಹಕ್ಕುಪತ್ರ ವಿತರಣೆ ಹಾಗೂ ಪತ್ರಿಕಾ ಬಂಡಲ್ ವಿಂಗಡಣೆಗೆ ಸೂಕ್ತ ಸ್ಥಳವನ್ನು ನೀಡಲು ಅಗತ್ಯ ಕ್ರಮವಹಿಸಲಾಗುವುದು ಎಂದರು.

ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ಪತ್ರಿಕಾ ವಿತರಣೆ ಅತ್ಯಂತ ಶ್ರಮದ ಕಾಯಕ. ನಿಮ್ಮ ದೊಡ್ಡ ತಂಡದಿಂದಾಗಿ ಪತ್ರಿಕೆ ತಲುಪಿಸುತ್ತಿದ್ದೀರಿ. ಶಾಸಕರು, ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚಿಸಿ ನಿವೇಶನಕ್ಕೆ ಹಕ್ಕುಪತ್ರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ದೀನದಯಾಳ್ ಉಪಾಧ್ಯಾಯ ಸೇರಿ ಅನೇಕರು ಪತ್ರಿಕೆಗಳನ್ನು ಹಂಚಿಕೆಯೇ ಉನ್ನತ ಸ್ಥಾನ ಪಡೆದಿದ್ದಾರೆ. ಡಿಜಿಟಲ್‍ಗಿಂತ ಪತ್ರಿಕೆ ಓದುವುದರಿಂದ ಅಚ್ಚಳಿಯದೇ ಉಳಿಯಲಿದೆ. ಪಿಎಂ-ಸ್ವಾನಿಧಿ ಯೋಜನೆ ಮೂಲಕ ಅ. 4ರಂದು ನೋಂದಣಿ ಮಾಡಿಕೊಂಡು ರೂ.10ಸಾವಿರ ಸೌಲಭ್ಯ ಪಡೆದುಕೊಳ್ಳಿ. ನಂತರ ರೂ.5 ಲಕ್ಷದಿಂದ ರೂ.10ಲಕ್ಷದವರೆಗೆ ಸಾಲ ಸೌಲಭ್ಯ ಸಿಗಲಿದ್ದು, ಜೀವನಮಟ್ಟ ಸುಧಾರಿಸಿಕೊಳ್ಳಿ ಎಂದರು.

ರಾಜ್ಯ ಪತ್ರಿಕಾ ವಿತಕರ ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಶಂಭುಲಿಂಗ ಮಾತನಾಡಿ, ವಿತರಕರ ಒಗ್ಗಟ್ಟು ಒಡೆಯುವ ಕೆಲಸ ಮಾಡಬೇಡಿ. ಒಕ್ಕೂಟ ಮತ್ತು ಜಿಲ್ಲಾ ಸಂಘದ ಮೇಲೆ ವಿಶ್ವಾಸವಿಡಿ ನಿಮ್ಮ ಸಮಸ್ಯೆಗಳಿಗೆ ಖಂಡಿತ ಪರಿಹಾರ ಸಿಗಲಿದೆ.

ಜಿಲ್ಲಾ ಕಾರ್ಯನಿರತ ಪತ್ರಿಕಾ ಹಂಚಿಕೆದಾರರ, ವಿತರಕರ ಜಿಲ್ಲಾ ಅಧ್ಯಕ್ಷ ಎಸ್.ತಿಪ್ಪೇಸ್ವಾಮಿ ಮಾತನಾಡಿ, ಏಳನೇ ವರ್ಷಾಚರಣೆ ಇದಾಗಿದೆ. ಕರೋನಾ ಅವಧಿಯಲ್ಲೂ ಜೀವ ಭಯದಲ್ಲೂ ಪತ್ರಿಕೆ ಉಳಿಸಿ, ಬೆಳೆಸುವ ಕೆಲಸ ಮಾಡುತ್ತಿದ್ದೇವೆ. ನಮ್ಮನ್ನು ಗುರುತಿಸುವ ಕೆಲಸ ಆಗುತ್ತಿಲ್ಲ. ನಿವೇಶನ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಇದಕ್ಕೆ ಪತ್ರಕರ್ತರ ಸಹಕಾರವೂ ಇದೆ. ಆದರೆ, ಹಕ್ಕುಪತ್ರ ವಿತರಿಸುವ ಕೆಲಸವಾಗಿಲ್ಲ. ವಿತರಕರಿಗಾಗಿ ಬಂಡಲ್ ವಿಂಗಡಿಸಲು ಪ್ರತ್ಯೇಕ ಸ್ಥಳ, ಭವನದ ಅಗತ್ಯವಿದ್ದು ಸ್ಪಂದಿಸಬೇಕಿದೆ ಎಂದರು.

ಹಿರಿಯ ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖಪ್ಪ ಮಾತನಾಡಿ, 24 ಮಂದಿ ಪತ್ರಿಕಾ ವಿತರಿಗೆ ಈಗಾಗಲೇ ನಿವೇಶನ ಹಂಚಿಕೆ ಮಾಡಲಾಗಿದ್ದು, ಹಕ್ಕು ಪತ್ರ ನೀಡುವುದು ಬಾಕಿ ಇದೆ. ಹಕ್ಕು ಪತ್ರ ವಿತರಣೆ ಕಂದಾಯ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದ್ದು, ಒಂದು ತಿಂಗಳೊಗೆ ನಿವೇಶನಗಳಿಗೆ ಹಕ್ಕುಪತ್ರ ನೀಡಬೇಕು ಹಾಗೂ ನಗರ ವ್ಯಾಪ್ತಿಯ ಯಾವುದೇ ಸ್ಥಳದಲ್ಲಿ ಪತ್ರಿಕಾ ಬಂಡಲ್ ವಿಂಗಡಣೆಗೆ ತಾತ್ಕಾಲಿಕವಾಗಿ ಸ್ಥಳಾವಕಾಶ ಮಾಡಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

ಹಿರಿಯ ಪತ್ರಕರ್ತ ಎಂ.ಎನ್.ಅಹೋಬಳಪತಿ ಮಾತನಾಡಿ, ರಾಜ್ಯದ ಯಾವ ಜಿಲ್ಲೆಯಲ್ಲೂ ಆಗದ ಹಂಚಿಕೆದಾರರು ಮತ್ತು ವಿತರಕರಿಗೆ ಮಾಜಿ ಶಾಸಕ ತಿಪ್ಪಾರೆಡ್ಡಿ ಅವರ ಸಹಕಾರದಿಂದ ನಿವೇಶನ ಸೌಲಭ್ಯ ಚಿತ್ರದುರ್ಗದಲ್ಲಿ ಮೊಟ್ಟಮೊದಲ ಬಾರಿಗೆ ಸಿಕ್ಕಿದೆ. ಆದರೆ, ಹಕ್ಕುಪತ್ರ ಕೊಡಿಸಲು ಈಗಿನ ಶಾಸಕರು, ಜಿಲ್ಲಾಧಿಕಾರಿಗಳು ಅಗತ್ಯ ಕ್ರಮವಹಿಸಬೇಕು ಎಂದು ಹೇಳದರು.

ಕಾರ್ಯಕ್ರಮದಲ್ಲಿ ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ದಿನೇಶ್ ಗೌಡಗೆರೆ, ಕೆಪಿಸಿಸಿ ಕೋ ಆರ್ಡಿನೇಟರ್ ಕುಮಾರ್ ಗೌಡ ಸೇರಿದಂತೆ ಪತ್ರಿಕಾ ವಿತರಕರು, ಹಂಚಿಕೆದಾರರು ಇದ್ದರು.

About The Author

Leave a Reply

Your email address will not be published. Required fields are marked *