ಆತಂಕ ಮುಡಿಸಿದ ಕರಡಿ ಸಂಚಾರ
1 min readಆತಂಕ ಮುಡಿಸಿದ ಕರಡಿ ಸಂಚಾರ
ಶ್ರೀ ಶಾಂತವೀರ ಸ್ವಾಮೀಜಿ ಹಲವು ಬಾರಿ ಕರಡಿಗಳನ್ನು ಸೆರೆಹಿಡಿದು ಮುಂದೆ ಆಗುವ ಅಪಾಯವನ್ನು ತಡೆಯುವಂತೆ ಮನವಿ ಮಾಡಿದರೂ ಅರಣ್ಯ ಇಲಾಖೆ ಉದಾಸೀನ
ಚಿತ್ರದುರ್ಗ ಹೊಯ್ಸಳ
ಹೊಸದುರ್ಗ:
ಸಂಜೆಯ ಇಳಿಮುಖವಾಗುತ್ತಿದ್ದಂತೆ ಮಠದ ಆವರಣದಲ್ಲಿ ಕರಡಿಗಳ ಓಡಾಟ ಜೋರಾಗಿದೆ, ಮಠದ ಭಕ್ತರು, ಸಾರ್ವಜನಿಕರು ಆತಂಕಕ್ಕೊಳಗಾಗಿದ್ದಾರೆ.
ಹೊಸದುರ್ಗದ ಕುಂಚಿಟಿಗ ಮಹಾಸಂಸ್ಥಾನ ಮಠದ ಆವರಣದಲ್ಲಿ ಕಳೆದ 6 ತಿಂಗಳಿಂದ ಸಾಮಾನ್ಯವಾಗಿ ಸಂಜೆಯಾಗುತ್ತಲೇ ಒಂದೂ, ಎರಡು ಕರಡಿಗಳು ಕಾಣಿಸಿಕೊಳ್ಳುತ್ತಿವೆ. ಮಠದ ಬಾಗಿಲಿನವರೆಗೆ ಬಂದು ಹೋಗಿರುವ ವಿಡಿಯೋಗಳು ಸಾಕಷ್ಟು ವೈರಲ್ ಆಗಿವೆ.
ಜ.18 ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ಕರಡಿಯೊಂದು ಮಠದ ಆವರಣದಲ್ಲಿ ಓಡಾಟವನ್ನು ಮಾಡಿದ್ದು ಮಠದಲ್ಲಿನ ಸಿ.ಸಿ.ರಸ್ತೆಯ ಮುಂಭಾಗ ಹಾಗೂ ಹಿಂಬದಿಯಲ್ಲಿ ಓಡಾಡಿ ಮತ್ತೆ ಮರೆಯಾಗುವ ವಿಡಿಯೋವನ್ನು ಮಠದ ಸಿಬ್ಬಂದಿ ಸೆರೆ ಹಿಡಿದಿದ್ದಾರೆ.
ಕುಂಚಿಟಿಗ ಮಠದ ಶ್ರೀ ಶಾಂತವೀರ ಸ್ವಾಮೀಜಿ ಹಲವು ಬಾರಿ ಕರಡಿಗಳನ್ನು ಸೆರೆಹಿಡಿದು ಮುಂದೆ ಆಗುವ ಅಪಾಯವನ್ನು ತಡೆಯುವಂತೆ ಮನವಿ ಮಾಡಿದರೂ ಅರಣ್ಯ ಇಲಾಖೆ ಸಿಬ್ಬಂದಿ ಉದಾಸೀನ ತೋರುತ್ತಿದ್ದಾರೆ ಎಂದು ಭಕ್ತರು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಕರಡಿ ಅತ್ಯಂತ ಅಪಾಯಕಾರಿ ಪ್ರಾಣಿಯಾಗಿದ್ದು, ಜನವಸತಿ, ಮಠದ ಸಮೀಪದಲ್ಲೇ ಅಡ್ಡಾಡುವುದು ಆತಂಕದ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ಹೊಸದುರ್ಗದ ಅರಣ್ಯ ಇಲಾಖೆ ಸಿಬ್ಬಂದಿ ಕರಡಿ ಸೆರೆ ಹಿಡಿದು ಬೇರೆಡೆಗೆ ಸಾಗಿಸಬೇಕು ಎಂದು ಇಲ್ಲಿ ವಾಯುವಿಹಾರಕ್ಕೆ ಬರುವವರು ಒತ್ತಾಯಿಸಿದ್ದಾರೆ.