ಸ್ಥಳೀಯ ಪತ್ರಿಕೆಗಳ ಜಾಹೀರಾತು ಧರ ಹೆಚ್ಚಳಕ್ಕೆ ಒತ್ತಾಯ ರಾಜ್ಯಾಧ್ಯಕ್ಷ ಎ.ಸಿ.ತಿಪ್ಪೇಸ್ವಾಮಿ
1 min readಸ್ಥಳೀಯ ಪತ್ರಿಕೆಗಳ ಜಾಹೀರಾತು ಧರ ಹೆಚ್ಚಳಕ್ಕೆ ಒತ್ತಾಯ: ರಾಜ್ಯಾಧ್ಯಕ್ಷ ಎ.ಸಿ.ತಿಪ್ಪೇಸ್ವಾಮಿ
ಚಿತ್ರದುರ್ಗ ಹೊಯ್ಸಳ :
ಚಿತ್ರದುರ್ಗ:
ಸ್ಥಳೀಯ ಮತ್ತು ಪ್ರಾದೇಶಿಕ ಪತ್ರಿಕೆಗಳ ಜಾಹೀರಾತು ಧರ ಹೆಚ್ಚಿಸಬೇಕೆಂದು ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷರಾದ ಎ.ಸಿ.ತಿಪ್ಪೇಸ್ವಾಮಿ ಒತ್ತಾಯಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ಚಿತ್ರದುರ್ಗ ಜಿಲ್ಲಾ ಘಟಕದ ಅಧ್ಯಕ್ಷರ ಆಯ್ಕೆ ಸಭೆಯಲ್ಲಿ ಮಾತನಾಡಿದ ಅವರು, 2023 ರ ಏಪ್ರಿಲ್ 1 ರಿಂದ ಜಾಹೀರಾತು ಧರ ಹೆಚ್ಚಿಸಬೇಕಾಗಿತ್ತು, ಆದರೆ ಸರ್ಕಾರ ಜಾಹೀರಾತು ಧರ ಹೆಚ್ಚಿಸಿಲ್ಲ. ಹೊಸ ಜಾಹೀರಾತ ನೀತಿ ಸಹ ಜಾರಿಯಾಗಿಲ್ಲ, ಹಾಗಾಗಿ ಕೂಡಲೇ ಸರ್ಕಾರ ಶೇಕಡ 12% ರಷ್ಟು ಜಾಹೀರಾತು ಧರವನ್ನು ಹೆಚ್ಚಿಸಬೇಕು ಎಂದು ತಿಳಿಸಿದರು.
ಜಾಹೀರಾತುಗಳನ್ನು ಐ.ಎನ್.ಎಸ್ ಏಜೆನ್ಸಿಗಳ ಮೂಲಕ ಬಿಡುಗಡೆ ಮಾಡುವುದು ನಿಲ್ಲಿಸಬೇಕು ಎಂದು ಆಯುಕ್ತರಲ್ಲಿ ಮನವಿ ಮಾಡಲಾಗಿದೆ. ಆಯುಕ್ತರು ಅದಕ್ಕೆ ಸಮ್ಮತಿಸಿದ್ದು, ಮುಂದಿನ ದಿನಗಳಲ್ಲಿ ಸರ್ಕಾರಿ ಜಾಹೀರಾತುಗಳನ್ನು ಪತ್ರಿಕೆಗಳಿಗೆ ನೇರವಾಗಿ ನೀಡುವಂತಾಗಬೇಕು. ಏಜೆನ್ಸಿಯವರು ಜಾಹೀರಾತು ಪ್ರಕಟಿಸಿ ಹತ್ತಾರು ತಿಂಗಳಾದರು ಹಣ ಪಾವತಿಸುವುದಿಲ್ಲ, ಹಾಗಾಗಿ ಖಾಸಗಿ ಏಜೆನ್ಸಿಗಳಿಂದ ಜಾಹೀರಾತುಗಳನ್ನು ನೀಡುವುದು ಕೂಡಲೇ ನಿಲ್ಲಿಸಬೇಕು ಎಂದು ಹೇಳಿದರು.
ರಾಜ್ಯಮಟ್ಟದ ಪತ್ರಿಕೆಗಳಿಗೆ ನೀಡುವ ಜಾಹೀರಾತುಗಳನ್ನ ಜಿಲ್ಲಾ ಮಟ್ಟದ ಪತ್ರಿಕೆಗಳಿಗೆ ನೀಡಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ರೂಪಿಸಬೇಕಾಗಿದೆ. ಸರ್ಕಾರದ ಜಾಹೀರಾತು ನೀತಿಯಲ್ಲಿ ತಿಳಿಸಿರುವಂತೆ ರಾಜ್ಯದ ಎಲ್ಲಾ ಜಿಲ್ಲೆಯ ವಾರ್ತಾ ಅಧಿಕಾರಿಗಳು ಸ್ಥಳೀಯ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಜಾಹೀರಾತುಗಳನ್ನು ಬಿಡುಗಡೆ ಮಾಡಬೇಕು. ಇಲಾಖೆಯವರು ಹತ್ತಾರು ಕಾಮಗಾರಿಗಳ ಮೊತ್ತವನ್ನು ತಿಳಿಸದೆ ನೀಡಿರುವ ಜಾಹೀರಾತುಗಳನ್ನು ವಾರ್ತಾ ಅಧಿಕಾರಿಗಳು ಪರಿಶೀಲಿಸಬೇಕು. ಜಾಹೀರಾತಿನ ಮೊತ್ತವನ್ನು ಪರಿಗಣಿಸಿ ಜಾಹೀರಾತುಗಳನ್ನು ಬಿಡುಗಡೆ ಮಾಡಬೇಕೆಂದು ತಿಳಿಸಿದರು.
ಸಂಪಾದಕರು ಜೇನು ನೊಣದಂತಿರಬೇಕು, ಒಗ್ಗಟ್ಟಿನಿಂದ ಏನನ್ನಾದರು ಸಾಧಿಸಬಹುದು, ಹಾಗಾಗಿ ಎಲ್ಲರೂ ಒಂದಾಗಿ ಸಂಘವನ್ನು ಬಲಪಡಿಸಬೇಕು. ಸಂಪಾದಕರು ಗುರುತಿಸಿಕೊಳ್ಳುವ ಅಗತ್ಯತೆ ತುಂಬಾ ಇದೆ, ಆ ಕೆಲಸವನ್ನು ಎಲ್ಲಾ ಸಂಪಾದಕರು ಮಾಡುತ್ತಲೇ ತಮ್ಮ ಸಂಸ್ಥೆಗಳನ್ನ ಉತ್ತಮ ಅಭಿವೃದ್ಧಿ ಮಟ್ಟಕ್ಕೆ ಕೊಂಡೊಯ್ಯಬೇಕೆಂದು ಹೇಳಿದರು.
ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ಚಿತ್ರದುರ್ಗ ಜಿಲ್ಲಾ ಅಧ್ಯಕ್ಷರಾಗಿ ರವಿಮಲ್ಲಾಪುರ ಬಹುಮತದಿಂದ ಆಯ್ಕೆ ಮಾಡಲಾಯಿತು, ಪ್ರಧಾನಕಾರ್ಯದರ್ಶಿಯಾಗಿ ಎಂ.ಕೆ.ಹರೀಶ್, ಉಪಾಧ್ಯಕ್ಷರಾಗಿ ಎಲ್.ವಿ.ಮಾಲತೇಶ್ ಅರಸ್, ಜಯವಿಜಯಕುಮಾರ್, ಸಹ ಕಾರ್ಯದರ್ಶಿಯಾಗಿ ಡಿ.ಎನ್.ಕೃಷ್ಣಮೂರ್ತಿ, ತಿಪ್ಪೇಸ್ವಾಮಿ, ಖಜಾಂಚಿಯಾಗಿ ಶ್ರೀನಿವಾಸ್, ಸಂಘಟನಾ ಕಾರ್ಯದರ್ಶಿಯಾಗಿ ಕೆ.ವೆಂಕಟೇಶ್ನಾಯ್ಕ್, ಜಂಟಿ ಕಾರ್ಯದರ್ಶಿಯಾಗಿ ಗಣೇಶ್.ಕೆ.ಸಿ, ಕಾರ್ಯದರ್ಶಿಯಾಗಿ ಪ್ರವೀಣ್.ವೈ.ಕೆ ಆಯ್ಕೆಯಾಗಿದ್ದಾರೆ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯ ಸಂಘಟನೆಗೆ ನಾಮನಿರ್ದೇಶಕರಾಗಿ ಎಸ್.ಟಿ.ನವೀನ್, ಟಿ.ತಿಪ್ಪೇಸ್ವಾಮಿ ಸಂಪಿಗೆ, ರಾಜ್ಯ ಬೆಂಗಳೂರು ವಿಭಾಗದ ಕಾರ್ಯದರ್ಶಿಯಾಗಿ ಜಿ.ಓ.ಎಲ್ ಮೂರ್ತಿಯನ್ನು ನೇಮಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ದಿನೇಶ್ಗೌಡಗೆರೆ, ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ಉಪಾಧ್ಯಕ್ಷ ಗೌನಹಳ್ಳಿ ಗೋವಿಂದಪ್ಪ ಉಪಸ್ಥಿತರಿದ್ದರು.