ಭಾವನೆ ಕೆರಳಿಸುವುದು ಬಿಟ್ಟು, ಅಭಿವೃದ್ಧಿ ರಾಜಕಾರಣ ಮಾಡಿ: ಬಿಜೆಪಿ ವಿರುದ್ಧ ಚಿತ್ರದುರ್ಗ ಕಾಂಗ್ರೆಸ್ ಅಭ್ಯರ್ಥಿ ಚಂದ್ರಪ್ಪ ಕಿಡಿ
1 min readಭಾವನೆ ಕೆರಳಿಸುವುದು ಬಿಟ್ಟು, ಅಭಿವೃದ್ಧಿ ರಾಜಕಾರಣ ಮಾಡಿ:
ಬಿಜೆಪಿ ವಿರುದ್ಧ ಚಿತ್ರದುರ್ಗ ಕಾಂಗ್ರೆಸ್ ಅಭ್ಯರ್ಥಿ ಚಂದ್ರಪ್ಪ ಕಿಡಿ
ಚಿತ್ರದುರ್ಗ ಹೊಯ್ಸಳ ನ್ಯೂಸ್/
ಹೊಸದುರ್ಗ:
ಪ್ರಧಾನಿ ನರೇಂದ್ರ ಮೋದಿಯವರು ಪದೇ ಪದೇ ಸಬ್ ಕಾ ಸತ್, ಸಬ್ ಕಾ ವಿಕಾಸ್ ಎಂದು ಹೇಳುತ್ತಾರೆ. ಆದ್ರೇ, ಮನುವಾದವನ್ನೇ ಮುಂದುವರೆಸಿದ್ದಾರೆ. ಇದೇನೇ ನಿಮ್ಮ ವಿಕಾಸದ ಹಾದಿ? ಬಿಜೆಪಿಯವರು ಮತ್ತೆತ್ತಿದರೆ ಜಾತಿ ಮತ್ತು ಧರ್ಮ ಎನ್ನುತ್ತಾರೆ. ಜನರ ಭಾವನೆಗಳ ಮೇಲೆ ರಾಜಕಾರಣ ಮಾಡುವುದನ್ನು ಬಿಟ್ಟು, ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟು ಕೊಂಡು ರಾಜಕಾರಣ ಮಾಡಿ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಕಿಡಿ ಕಾರಿದರು.
ಪಟ್ಟಣದ ಶ್ರೀದೇವಿ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಮತ್ತು ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸಂವಿಧಾನ ಮತಷ್ಟು ಬಲಿಷ್ಠ ಗೊಳ್ಳಬೇಕಾದರೆ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು. ಹಾಗಾಗಿ, ಪ್ರತಿಯೊಬ್ಬರು ಕಾಂಗ್ರೆಸ್ ಪಕ್ಷದ ಸಿದ್ಧಾಂತದ ಬಗ್ಗೆ, ಅಭಿವೃದ್ಧಿಯ ಬಗ್ಗೆ ಮನ- ಮನೆಗೆ ತಿಳಿಸಬೇಕಿದೆ. 10 ವರ್ಷಗಳ ಹಿಂದೆ ಕಾರ್ಯಕರ್ತರ ಅಭಿಪ್ರಾಯದೊಂದಿಗೆ ಇಲ್ಲಿಗೆ ಪಕ್ಷದ ಅಭ್ಯರ್ಥಿಯಾಗಿ ಬಂದಿದ್ದೆ. ಈ ಜಿಲ್ಲೆಯ ಜನರು 1.ಲಕ್ಷದ 15.ಸಾವಿರ ಮತಗಳ ಅಂತರದಲ್ಲಿ ನನ್ನನ್ನು ಗೆಲ್ಲಿಸಿದ್ದರು. ಈ ಜಿಲ್ಲೆಯ ಜನರ ಋಣವನ್ನು ಎಂದಿಗೂ ಮರಿಯೋಕೆ ಸಾಧ್ಯವಿಲ್ಲ. ಮತ್ತೆ ಬಂದ ಚುನಾವಣೆಯಲ್ಲಿ ನಾನು ಪರಾಭವಗೊಂಡರೂ, ಜಿಲ್ಲೆಯ ಜನರೊಂದಿಗೆ ಸಂಪರ್ಕದಲ್ಲಿದ್ದೆ. ಹಾಗಾಗಿ, ನನಗೆ ಪಕ್ಷ ಟಿಕೆಟ್ ನೀಡಿದೆ. 3ನೇ ಬಾರಿಗೆ ಅಭ್ಯರ್ಥಿಯಾಗಲು ಅವಕಾಶ ಕಲ್ಪಿಸಿ ಕೊಟ್ಟಿದೆ. ಸಂವಿಧಾನ ಒಂದು ಪಕ್ಷದ ಕೈಗೆ ಸಿಲುಕಿ ನಲುಗುತ್ತಿದ್ದು, ದೇಶ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದೆ. ಕಳೆದ ಚುನಾವಣೆಯ ಪೂರ್ವದಲ್ಲಿ ಬಿಜೆಪಿಯವರು ಪ್ರತಿಯೊಬ್ಬರ ಖಾತೆಗೆ 15.ಲಕ್ಷ ಹಾಕುತ್ತೇವೆ ಎಂದು ಹೇಳಿದ್ದರು. ಅವರು ಹೇಳಿದಂತೆ ನಡೆದು ಕೊಂಡಿದ್ದರೆಯೇ? 2.ಕೋಟಿ ಉದ್ಯೋಗ ಕೊಡುವುದಾಗಿ ನಂಬಿಸಿ, ಮೋಸ ಮಾಡಿದ್ದಾರೆ. ಇದನ್ನು ಅರ್ಥ ಮಾಡಿಕೊಂಡರೆ, ಯಾರು ಬಿಜೆಪಿಗೆ ಮತ ಹಾಕುವುದಿಲ್ಲ ಎಂದರು.
ನಾನು ಸಂಸದನಾಗಿದ್ದಾಗ ನನ್ನ ಶೇಕಡ 70.ರಷ್ಟು ಹಣವನ್ನು ಕುಡಿಯುವ ನೀರಿಗೆ ಇಟ್ಟಿದ್ದೆ. ಬಸ್ ಸ್ಟ್ಯಾಂಡ್ ಹಾಗೂ ಇನ್ನಿತರ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಕಳೆದ ಬಾರಿ ಸಂಸದರಾಗಿ ಸಚಿವರಾಗಿದ್ದವರೂ, ಏನು ಕೆಲಸ ಮಾಡಿದ್ದಾರೆ. ಸಂಸತ್ ನಲ್ಲಿ ಎಷ್ಟು ಬಾರಿ ಮಾತನಾಡಿದ್ದಾರೆ. ಹಾಜರಾತಿ ಎಷ್ಟಿದೆ? ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ನಾನು ಸಂಸದನಾಗಿದ್ದಾಗ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಪ್ರಾಮಾಣಿಕವಾಗಿ, ಪಕ್ಷಾತೀತವಾಗಿ ಕೆಲಸ ಮಾಡಿದ್ದೇನೆ. ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟು ಕೊಂಡು, ಮತ್ತೊಮ್ಮೆ ನಿಮ್ಮ ಬಳಿ ಮತ ಕೇಳಲು ಬಂದಿದ್ದೇನೆ ಎಂದು ತಿಳಿಸಿದರು.
ಶಾಸಕ ಬಿ.ಜಿ. ಗೋವಿಂದಪ್ಪ ಮಾತನಾಡಿ, ಪಕ್ಷ ನಡೆಸಿದ ಸರ್ವೆ ಚಂದ್ರಪ್ಪನವರ ಪರವಾಗಿ ಬಂದಿದ್ದು, ಪಕ್ಷ 3 ನೇ ಬಾರಿಗೆ ಅವರಿಗೆ ಟಿಕೆಟ್ ನೀಡಿದೆ. ವಿಧಾನಸಭಾ ಚುನಾವಣೆಯಲ್ಲಿ 85.ಸಾವಿರ ಮತಗಳನ್ನು ನೀಡಿ, ನನ್ನನ್ನ ಗೆಲ್ಲಿಸಿದ್ದಿರಿ. ಚುನಾವಣಾ ಪೂರ್ವದಲ್ಲಿ ಕೊಟ್ಟಂತಹ ಮಾತಿನಂತೆ 5 ಗ್ಯಾರಂಟಿಗಳನ್ನು ನಮ್ಮ ಸರ್ಕಾರ ಜನರಿಗೆ ನೀಡುತ್ತಿದ್ದು, ಇದನ್ನು ಮುಂದಿಟ್ಟುಕೊಂಡು ಜನರ ಬಳಿ ಮತ ಕೇಳಲು ಹೋಗುತ್ತಿದ್ದೇವೆ. ಕಳೆದ ಚುನಾವಣೆಯಲ್ಲಿ ಜವಾಬ್ದಾರಿ ತೆಗೆದು ಕೊಂಡಂತೆ ಈ ಬಾರಿಯೂ ಮತ ಕೇಳಿ. ಜಾತಿ, ಧರ್ಮದ ಆಧಾರದ ಮೇಲೆ ಮತ ಕೇಳದೆ, ಗ್ಯಾರಂಟಿ ಯೋಜನೆ ಮತ್ತು ಅಭಿವೃದ್ಧಿಗಳ ಮೇಲೆ ಮತ ಕೇಳಿರಿ ಎಂದರು.
ಲೋಕಸಭಾ ಚುನಾವಣೆಯಲ್ಲಿ ಪಕ್ಷ ಗೆದ್ದು ಅಧಿಕಾರಕ್ಕೆ ಬಂದರೆ, ಕೇಂದ್ರದಲ್ಲೂ 5 ಶಕ್ತಿ ಯೋಜನೆಗಳು ಜಾರಿಯಾಗಲಿದೆ. ಡಬಲ್ ಗ್ಯಾರಂಟಿಗಳು ಸಿಗಲಿದೆ. ಈಗಾಗಲೇ, ನಮ್ಮ ಎಐಸಿಸಿ ಅಧ್ಯಕ್ಷರು ಹೇಳಿದ್ದಾರೆ. ರಾಜ್ಯ ಸರ್ಕಾರದ ಗ್ಯಾರಂಟಿಯನ್ನು ಜನರಿಗೆ ತಲುಪಿಸಿದ್ದು, ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ, ಕೇಂದ್ರದ ಗ್ಯಾರಂಟಿಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡುತ್ತೇವೆ. ನಮ್ಮ ಅಭಿವೃದ್ಧಿ ಕಾರ್ಯಗಳನ್ನು ಜನರ ಬಾಯಿಗೆ ಹಾಕಬೇಕು. ಕಳೆದ ಬಿಜೆಪಿ ಸರ್ಕಾರ ಸರಿಯಾಗಿ ಕೆಲಸ ಮಾಡಿದ್ದರೆ, ನೀರಿಗೆ ಸಮಸ್ಯೆ ಆಗುತ್ತಿರಲಿಲ್ಲ. ನಾವು ದಾಖಲೆಯನ್ನಿಟ್ಟು ಕೊಂಡು ಮಾತನಾಡುತ್ತೇವೆ ಎಂದು ಹೇಳಿದರು.
ಕೆಪಿಸಿಸಿ ಸದಸ್ಯರುಗಳಾದ ಎಂ.ಪಿ. ಶಂಕರ್, ಅಲ್ತಾಫ್ ಪಾಷಾ, ಜಿಲ್ಲಾಧ್ಯಕ್ಷ ತಾಜಪೀರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಪದ್ಮನಾಭ್(ಹೊಸದುರ್ಗ), ಲೋಕೇಶ್ವರಪ್ಪ (ಶ್ರೀರಾಂಪುರ) ಡಿ.ಸಿ.ಸಿ.ಬ್ಯಾಂಕ್ ಉಪಾಧ್ಯಕ್ಷ ಮಂಜುನಾಥ್, ಪುರಸಭೆ ಸದಸ್ಯರುಗಳಾದ ಜಾಫರ್ ಸಾಧಿಕ್, ಶಂಕ್ರಣ್ಣ, ಕಾಂಗ್ರೆಸ್ ಮುಖಂಡರುಗಳಾದ ಜಿ. ಮಂಜುನಾಥ್, ಅಲ್ತಾಫ್ ಪಾಷಾ, ಎಂ.ಪಿ.ಶಂಕರ್, ಮಹಮ್ಮದ್ ಇಸ್ಮಾಯಿಲ್, ತಾಜಪೀರ್, ಗೋ.ತಿಪ್ಪೇಶ್, ಲಿಂಗಪ್ಪ, ರಾಜಣ್ಣ, ಕಾರೇಹಳ್ಳಿ ಬಸವರಾಜ್, ಯಶ್ವಂತ್ ಗೌಡ, ಅಜ್ಜಪ್ಪ, ಬಿ.ಜಿ. ಅರುಣ್, ಕೃಷ್ಣಮೂರ್ತಿ, ಇಸ್ಮಾಯಿಲ್, ಎ.ವಿ. ಅಜ್ಜಪ್ಪ ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿದ್ದರು.