May 2, 2024

Chitradurga hoysala

Kannada news portal

ನ್ಯಾಯಾಂಗ ವ್ಯವಸ್ಥೆಯ ಒಂದು ನೋಟ……. ” ನ್ಯಾಯಾಲಯಗಳು ಕಾನೂನನ್ನು ಎತ್ತಿ ಹಿಡಿಯುತ್ತವೆಯೇ ಹೊರತು ನ್ಯಾಯವನ್ನೇ ಕೊಡುತ್ತವೆ ಎಂಬುದು ಸಂಪೂರ್ಣ ಸತ್ಯವಲ್ಲ. ಏಕೆಂದರೆ ನ್ಯಾಯಾಲಯಗಳ ದೃಷ್ಟಿಯಲ್ಲಿ ಕಾನೂನೇ ನ್ಯಾಯ “

1 min read

ನ್ಯಾಯಾಂಗ ವ್ಯವಸ್ಥೆಯ ಒಂದು ನೋಟ…….

” ನ್ಯಾಯಾಲಯಗಳು ಕಾನೂನನ್ನು ಎತ್ತಿ ಹಿಡಿಯುತ್ತವೆಯೇ ಹೊರತು ನ್ಯಾಯವನ್ನೇ ಕೊಡುತ್ತವೆ ಎಂಬುದು ಸಂಪೂರ್ಣ ಸತ್ಯವಲ್ಲ. ಏಕೆಂದರೆ ನ್ಯಾಯಾಲಯಗಳ ದೃಷ್ಟಿಯಲ್ಲಿ ಕಾನೂನೇ ನ್ಯಾಯ ”
( Courts will delivered the law not the justice )
ಎಂಬ ಅಭಿಪ್ರಾಯ ಪ್ರಚಲಿತವಾಗಿದೆ.

ಭಾರತದ ನ್ಯಾಯಾಂಗ ವ್ಯವಸ್ಥೆಗೆ ಇದು ಬಹುತೇಕ ಅನ್ವಯಿಸುತ್ತದೆ.

ಭಾರತೀಯ ಸಮಾಜವನ್ನು ಬಹುತೇಕ ಭಯ ಭಕ್ತಿ ನಂಬಿಕೆ ‌ಸಂಸ್ಕೃತಿ ಸಂಪ್ರದಾಯ ಭ್ರಮೆ ಮತ್ತು ಅಸಮಾನತೆಯ ಆಧಾರದ ಮೇಲೆ ನಿರ್ಮಿಸಲಾಗಿದೆ. ಅಂತಹ ಸಮಾಜಕ್ಕೆ 1950 ರ ನಂತರ ಸಂವಿಧಾನವೆಂಬ ಒಂದು ಕ್ರಮಬದ್ಧ ನೀತಿ ನಿಯಮಗಳನ್ನು ಅಳವಡಿಸಲಾಯಿತು.

ಬಹುಶಃ ಅದಕ್ಕೆ ಬೇಕಾದ ಮಾನಸಿಕ ಸಿದ್ದತೆ ಅನೇಕ ಭಾರತೀಯರಿಗೆ ಇರಲಿಲ್ಲ. ಒಂದು ರೀತಿಯ ವೈಯಕ್ತಿಕ ಮತ್ತು ಸಾಮಾಜಿಕ ಘರ್ಷಣೆ ಪ್ರಾರಂಭವಾಯಿತು.

ಬಡತನ ಅಜ್ಞಾನ ಅನಕ್ಷರತೆ ಶೋಷಣೆ ಈ ಸಮಾಜದ ದಿನನಿತ್ಯದ ಬದುಕಿನಲ್ಲಿ ಹಾಸುಹೊಕ್ಕಾಗಿತ್ತು. ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯನ್ನು ಕೆಲವೇ ಕುಟುಂಬಗಳು ಹಿಡಿತದಲ್ಲಿ ಇಟ್ಟುಕೊಂಡಿದ್ದವು.

ಸುಮಾರು 1977 ರವರೆಗೆ ಈ ಸ್ಥಿತಿ ಹಾಗೆಯೇ ಮುಂದುವರೆಯಿತು. ಅಲ್ಲಿಂದ ನಿಧಾನವಾಗಿ ಒಂದಷ್ಟು ಬದಲಾವಣೆಗಳು ಆಗತೊಡಗಿದವು. ಜನಜಾಗೃತಿ ಮೂಡತೊಡಗಿತು. 1995 ರ ನಂತರ ಅದು ಮತ್ತಷ್ಟು ವೇಗ ಪಡೆಯಿತು.

ಸಾಮಾಜಿಕ ಬದಲಾವಣೆಯ ಜೊತೆಗೆ ಆರ್ಥಿಕ ಬದಲಾವಣೆಯು ಸಹ ಮತ್ತಷ್ಟು ವೇಗ ಪಡೆಯಿತು. ಅಲ್ಲಿಂದ ಮುಂದೆ ಮಾನವೀಯ ಮತ್ತು ನೈತಿಕ ಮೌಲ್ಯಗಳ ಕುಸಿತವೂ ವೇಗ ಪಡೆಯಿತು.

ನಾಗರಿಕ ಮೌಲ್ಯಗಳ ಆಧಾರದ ಮೇಲೆ ಸಮಾಜವನ್ನು ರೂಪಿಸಿಕೊಂಡಿದ್ದ ವಿದೇಶಿ ವ್ಯಾಪಾರಗಾರರು ದೇಶದೊಳಗೆ ಪ್ರವೇಶಿಸಿದ ನಂತರ ಭಾರತೀಯ ಮನಸ್ಸುಗಳು ಚಂಚಲವಾಗಿದ್ದು ನೇರವಾಗಿಯೇ ಗಮನಿಸಬಹುದಾಗಿದೆ. ವಿದೇಶಿ ಬಂಡವಾಳಗಾರರು ಹಣವನ್ನೇ ಕೇಂದ್ರೀಕರಿಸಿ ಭಾರತದ ಮಾರುಕಟ್ಟೆ ಪ್ರವೇಶಿಸಿ ಇಲ್ಲಿನ ನೈತಿಕ ಮೌಲ್ಯಗಳು ಕುಸಿಯಲು ಪ್ರೇರೇಪಿಸಿದರು.

ಸಮಾಜ – ಮಾನವೀಯ ಮೌಲ್ಯಗಳು – ಸರ್ಕಾರ ಎಲ್ಲದರ ಆಧಾರದ ಸ್ತಂಭವಾಗಿದ್ದ ನೈತಿಕತೆಯ ಜಾಗದಲ್ಲಿ ಕಾನೂನು ಆಶ್ರಯ ಪಡೆಯತೊಡಗಿತು. ಮೊದಲು ಸಣ್ಣ ಪ್ರಮಾಣದಲ್ಲಿ ಇದ್ದ ಇವು ನಂತರ ವ್ಯಾಪಕವಾಗಿ ಬದಲಾಯಿತು.

ಹಣದಿಂದಲೇ ಕಾನೂನನ್ನು ಸಹ ಪಡೆಯಬಹುದು ಎಂಬ ಮನೋಭಾವ ಬಲವಾಯಿತು. ಕೊಲೆ ಅತ್ಯಾಚಾರ ಹಲ್ಲೆ ಭ್ರಷ್ಟಾಚಾರ ಮಾಡಿಯೂ ಕಾನೂನಿನ ಮೂಲಕವೇ ತಪ್ಪಿಸಿಕೊಳ್ಳಬಹುದು ಎಂದು ಸಮಾಜದ ಬಹುತೇಕ ಜನರಿಗೆ ಮನವರಿಕೆಯಾಯಿತು.

ನ್ಯಾಯಾಲಯ ಅಥವಾ ಕಾನೂನುಗಳು ಅಪರಾಧಿಗಳ ಆಶ್ರಯ ತಾಣವಾಯಿತು. ನ್ಯಾಯವನ್ನು ಅಥವಾ ಪರೋಕ್ಷವಾಗಿ ಕಾನೂನನ್ನು ಹಣ ಅಧಿಕಾರದಿಂದ ಪಡೆಯಬಹುದು ಎಂದು ಅಪರಾಧಿ ಮನೋಭಾವದವರಿಗೆ ಅರಿವಾಯಿತು. ಅದರ ದುಷ್ಪರಿಣಾಮಗಳೇ ಉತ್ತರ ಪ್ರದೇಶದ ಪ್ರತಿಭಟನಾ ನಿರತ ರೈತರ ಮೇಲೆ ಹಾಡು ಹಗಲೇ ವಾಹನ ಚಲಾಯಿಸುವ ಧೈರ್ಯ ಪ್ರದರ್ಶಿಸಿದ್ದು ಮತ್ತು ಆ ರೀತಿಯ ಅನೇಕ ಘಟನೆಗಳು.

ಇದನ್ನು ನಿಯಂತ್ರಿಸಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಸರ್ಕಾರಗಳು ಚುನಾವಣಾ ರಾಜಕೀಯದಲ್ಲಿ ಮುಳುಗಿ ಹೋಗಿ ಮಾನವೀಯ ಮೌಲ್ಯಗಳಿಗಿಂತ ಓಟುಗಳ ಮೌಲ್ಯವನ್ನೇ ಹೆಚ್ಚು ಅಳೆಯುವುದರಿಂದ ಕಾನೂನುಗಳು ನಿಷ್ಪ್ರಯೋಜಕವಾಗುವ ಹಂತ ತಲುಪಿದೆ.

ನ್ಯಾಯಾಂಗ ವ್ಯವಸ್ಥೆಯ ಮೇಲೆ ಜನ ನಂಬಿಕೆ ಕಳೆದುಕೊಂಡಿದ್ದಾರೆ. ದೈವತ್ವದ ಮೇಲೆಯೂ ನಂಬಿಕೆ ಶಿಥಿಲವಾಗಿದೆ. ಹಾಗಾದರೆ ಪರ್ಯಾಯ ಏನು ಎಂಬ ಪ್ರಶ್ನೆ ಕಾಡತೊಡಗಿದೆ.

ಒಂದು ದೇಶದ ಸಂವಿಧಾನದ ಯಶಸ್ಸಿಗೆ ನೈತಿಕ ಮೌಲ್ಯಗಳು ಮುಖ್ಯವೇ ಹೊರತು ಕಾನೂನಿನ ನೀತಿ ನಿಯಮಗಳಲ್ಲ. ಇದು ಭಾರತದ ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರೇ ಇದೇ ಅರ್ಥದ ಮಾತುಗಳನ್ನು ಹೇಳಿದ್ದರು.

ನೈತಿಕತೆಯೇ ಕಾನೂನು – ಕಾನೂನೇ ನೈತಿಕತೆ ಎಂಬುದು ಜನರಿಗೆ ಮನವರಿಕೆಯಾಗದೆ ಈ ಪರಿಸ್ಥಿತಿ ಬದಲಾಗುವುದಿಲ್ಲ. ವಿಶ್ವದ ಬಹುದೊಡ್ಡ ಮತ್ತು ಅತ್ಯುತ್ತಮ ಸಂವಿಧಾನ ಹೊಂದಿರುವ ಭಾರತದಲ್ಲಿ ಹಿಂಸಾ ಪ್ರವೃತ್ತಿ ಹೆಚ್ಚುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಭಾವನಾತ್ಮಕ ನೆಲೆಯಲ್ಲಿ ಮಾತನಾಡುತ್ತಾ, ಸಮುದಾಯಗಳ ನಡುವೆ ದ್ವೇಷ ಹರಡುತ್ತಾ ಆಡಳಿತಾತ್ಮಕ ವಿಫಲತೆಯನ್ನು ಮುಚ್ಚಿಕೊಳ್ಳುವ ರಾಜಕೀಯ ವ್ಯವಸ್ಥೆ ದೇಶವನ್ನು ಹಿನ್ನಡೆಸುತ್ತಿದೆ.

ಇದನ್ನು ತುಂಬಾ ಗಂಭೀರವಾಗಿ ನಾವುಗಳು ಪರಿಗಣಿಸಬೇಕಾಗಿದೆ. ಮಾನವೀಯ ಮತ್ತು ನೈತಿಕ ಮೌಲ್ಯಗಳು ಕುಸಿಯದಂತೆ ತಡೆಯುವ ಜವಾಬ್ದಾರಿ ನಾವು ಹೊರಬೇಕಾಗಿದೆ. ಇಲ್ಲದಿದ್ದರೆ ಈಗಾಗಲೇ ಪ್ರಾರಂಭವಾಗಿರುವ ಅನೈತಿಕ ಮತ್ತು ಅಮಾನವೀಯ ಮೌಲ್ಯಗಳೇ ಸಮಾಜದಲ್ಲಿ ಮಾನ್ಯತೆ ಪಡೆಯುವ ಎಲ್ಲಾ ಸಾಧ್ಯತೆಗಳಿವೆ ಎಂದು ಎಚ್ಚರಿಸುತ್ತಾ………

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಹೆಚ್.ಕೆ.
9844013068

About The Author

Leave a Reply

Your email address will not be published. Required fields are marked *