ರಾಜ್ಯ ಉತ್ತಮ ಶಿಕ್ಷಕ ಪುರಸ್ಕೃತ ಟಿ.ಪಿ.ಉಮೇಶ್ ಗೆ ಗೌರವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕರಿಂದ ಸನ್ಮಾನ
1 min read
ರಾಜ್ಯ ಉತ್ತಮ ಶಿಕ್ಷಕ ಪುರಸ್ಕೃತ ಟಿ.ಪಿ.ಉಮೇಶ್ ಗೆ ಗೌರವ
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕರಿಂದ ಸನ್ಮಾನ
ಹೊಳಲ್ಕೆರೆ :
ಗ್ರಾಮೀಣ ಪ್ರದೇಶದ ಶಿಕ್ಷಣ ಕ್ಷೇತ್ರದಲ್ಲಿನ ವಿಶೇಷ ಸಾಧನೆ ಮತ್ತು ಸಾಹಿತ್ಯಿಕ ಸೇವೆ ಗುರುತಿಸಿ ಹೊಳಲ್ಕೆರೆ ತಾಲ್ಲೋಕು ಆಡಳಿತದಿಂದ ಶಿಕ್ಷಕ ಟಿ.ಪಿ.ಉಮೇಶ್ ರವರನ್ನು ಗೌರವಿಸಿ ಅಭಿನಂದಿಸಲಾಯಿತು.
ಇವರು ಕವಿಗಳು ಲೇಖಕರು ಸಹ ಆಗಿದ್ದು, ಮಕ್ಕಳಿಗಾಗಿ ನನ್ನಯ ಸೈಕಲ್ ಟ್ರಿಣ್ ಟ್ರಿಣ್ ಟ್ರಿಣ್, ಅಪ್ಪನು ಕೊಡಿಸಿದ ಮೊದಲ ಪುಸ್ತಕ, ವಚನಾಂಜಲಿ, ವಚನವಾಣಿ ಕೃತಿಗಳ ಜೊತೆಗೆ ಪೋಟೊಕ್ಕೊಂದು ಫ್ರೇಮು, ದೇವರಿಗೆ ಬೀಗ ಎಂಬ ಕೃತಿಗಳ ರಚಿಸಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿಯು ಸೇವೆ ಸಲ್ಲಿಸುತ್ತಿದ್ದಾರೆ.
ಸರ್ಕಾರಿ ಪ್ರಾಥಮಿಕ ಶಾಲೆ ಅಮೃತಾಪುರದಲ್ಲಿ ಕರ್ತವ್ಯ ನಿರ್ವಹಿಸುವ ಉಮೇಶರವರು ಕರ್ನಾಟಕ ಸರ್ಕಾರದ 2021 ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪುರಸ್ಕಾರಕ್ಕೆ ಭಾಜನರಾಗಿದ್ದರು. ಶಿಥಿಲಗೊಂಡಿದ್ದ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಖಾಸಗಿ ಸಂಸ್ಥೆಗಳಾದ ಓಸಾಟ್, ಶೋರ್ಟೆಲ್, ಸ್ಯಾನಡಿಸ್ಕ್ ಇನ್ನಿತರರ ಮನವೊಲಿಸಿ ದೇಣಿಗೆಯ ಪಡೆದು ಸುಸಜ್ಜಿತವಾದ ಶಾಲಾ ಕೊಠಡಿಗಳನ್ನು ಮಕ್ಕಳ ಶೌಚಾಲಯ ಕಟ್ಟಲು ಶ್ರಮಿಸಿದ್ದಾರೆ. ದಾಖಲಾತಿ ಕುಸಿತಗೊಂಡಿದ್ದ ಶಾಲೆಯನ್ನು ಗ್ರಾಮದ ಪೋಷಕರ ಸಹಕಾರದಿಂದ ತಾಲ್ಲೋಕಿನಲ್ಲಿಯೆ ಹೆಚ್ಚು ಮಕ್ಕಳ ದಾಖಲಾತಿ ಹೊಂದಿದ ಕಿರಿಯ ಪ್ರಾಥಮಿಕ ಶಾಲೆಯಾಗಿ ರೂಪಿಸಿದ್ದಾರೆ. ಹೊಳಲ್ಕೆರೆ ಗಡಿಭಾಗದ ಶಾಲೆಯಾದ ಅಮೃತಾಪುರ ಇಂದು ಸುಸಜ್ಜಿತ ಸೌಲಭ್ಯಗಳ ಶಾಲೆಯಾಗಿದೆ. ಇವರ ಈ ಸೇವೆಯನ್ನು ಪರಿಗಣಿಸಿ ಹೊಳಲ್ಕೆರೆ ತಾಲ್ಲೋಕು ಆಡಳಿತದವರು ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಗೌರವಿಸಿ ಪುರಸ್ಕರಿಸಿದ್ದಾರೆ.