ನಿರ್ಮಲಾನಂದ ಸ್ವಾಮಿಗಳ ಜನ್ಮದಿನ
1 min read*ಧರ್ಮ ಕ್ಷೇತ್ರ ತಪೋಭೂಮಿ ಮತ್ತು ಡಾ ನಿರ್ಮಲಾನಂದ ಶ್ರೀ*
(1969 ಜುಲೈ 20 ನಿರ್ಮಲಾನಂದ ಸ್ವಾಮಿಗಳ ಜನ್ಮದಿನ, ) _________________
ಆದಿಚುಂಚನಗಿರಿ ಮಠದ 72 ನೇ ಪೀಠಾದ್ಯಕ್ಷರು ನಿರ್ಮಲಾನಾಂದ ಸ್ವಾಮೀಜಿಗಳು.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನಲ್ಲಿರುವ ಆದಿ ಚುಂಚನಗಿರಿ ಮಠವು ಕರ್ನಾಟಕ ರಾಜ್ಯ ಒಂದೆ ಅಲ್ಲದೆ ದಕ್ಷಿಣ ಭಾರತದ ಪ್ರಸಿದ್ದ ಮಠವಾಗಿದೆ. ಧರ್ಮ ಕ್ಷೇತ್ರ ತಪೋಭೂಮಿ ಎಂದೆ ಪ್ರಸಿದ್ದಿ ಪಡೆದಿರುವ ಆದಿ ಚುಚಂಚನಗಿರಿ ಮಠವು ಸುಮಾರು 2000 ವರ್ಷಗಳ ಇತಿಹಾಸವನ್ನು ಹೊಂದಿದೆ. ಸ್ವಾತಂತ್ರ್ಯದ ನಂತರದಲ್ಲಿ ಮಠದ ಜವಾಬ್ದಾರಿಯನ್ನು ವಹಿಸಿದ ಡಾ.ಬಾಲಗಂಗಾಧರನಾಥ ಸ್ವಾಮೀಜಿಯವರು ತಮ್ಮ ಆಡಳಿತದಲ್ಲಿ ದಾಸೋಹ ಮತ್ತು ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿ ಮಠವನ್ನು ಉನ್ನತ ಸ್ಥಾನದಲ್ಲಿ ಕೊಂಡೊಯ್ಯಲು ಶ್ರಮಿಸಿದರು. ತಮ್ಮ ನಂತರ ೪೭೫ ಕ್ಕೂ ಹೆಚ್ಚು ಶಾಲಾ ಕಾಲೇಜುಗಳು, ಅಂಧ ಮಕ್ಕಳ ಶಾಲೆ, ತಾಂತ್ರಿಕ ಹಾಗೂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸೇರಿದಂತೆ ಹತ್ತು ಹಲವು ಸಂಸ್ಥೆಗಳನ್ನು, ಶ್ರೀ ಕ್ಷೇತ್ರದಲ್ಲಿರುವ ಅದ್ಭುತ ದೇವಾಲಯವನ್ನು, ಶ್ರೀ ಕ್ಷೇತ್ರದ ಆಸ್ತಿಪಾಸ್ತಿ, ಭಕ್ತಾದಿಗಳ ನೋಡಿಕೊಳ್ಳುವ ಮಹೋನ್ನತ ಜವಾಬ್ದಾರಿಯನ್ನು ಮುಂದಾಲೋಚನೆ ಮಾಡಿ ಡಾ.ನಿರ್ಮಲಾನಂದನಾಥ ಸ್ವಾಮಿಗಳಿಗೆ ಒಪ್ಪಿಸಬೇಕೆಂದು ಬಯಸಿದ್ದರು, ಅದರಂತೆ ಈ ಎಲ್ಲ ಜವಾಬ್ದಾರಿಗಳನ್ನು ನಿರ್ಮಲಾನಂದನಾಥ ಸ್ವಾಮಿಗಳು ತಮ್ಮ ಹೆಗಲ ಮೇಲೆ ಹಾಕಿಕೊಂಡು ಅತ್ಯಂತ ಪ್ರೀತಿಯಿಂದ ಮುನ್ನಡೆಸಿಕೊಂಡು ಬರುತ್ತಿದ್ದಾರೆ.
1969 ಜುಲೈ 20 ರಂದು ಜನಿಸಿದ ನಿರ್ಮಲಾನಂದ ಸ್ವಾಮಿಗಳ ಪೂರ್ವದ ಹೆಸರು ನಾಗರಾಜ.
ಇವರು ಜನಿಸಿದ್ದು ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕು ಚೀಕನಹಳ್ಳಿಯಲ್ಲಿ.
ನರಸೇಗೌಡ ಮತ್ತು ಶ್ರೀಮತಿ ನಂಜಮ್ಮನವರು ಸ್ವಾಮಿಗಳ ಮಾತಾಪಿತೃಗಳು.
ತುಮಕೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೊಮಾ ಪಡೆದರು.
ಮೈಸೂರಿನ ನ್ಯಾಶನಲ್ ಇನ್ಸ್ಟಿಟ್ಯೂಟ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ. ಪದವಿ ಪಡೆದರು.
ಮದ್ರಾಸ್ನ ಪ್ರತಿಷ್ಠಿತ ಐಐಟಿ (ಇಂಡಿಯನ್ ಇನ್ಸ್ಇಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ) ಎಂ.ಟೆಕ್ ಪದವಿ ಪಡೆದರು.
ಐಐಟಿಯಲ್ಲಿ ಪದವಿ ಪಡೆದಿದ್ದ ಶ್ರೀಗಳಿಗೆ ಕೇಂದ್ರ ಜಲಶಕ್ತಿ ಸಂಶೋಧನಾಲಯ ಪೂನದಲ್ಲಿ ವಿಜ್ಞಾನಿಯಾಗಿ ಉದ್ಯೋಗ ಲಭಿಸಿತು. ಆದರೆ, ಸ್ವಾಮಿಗಳು ಎಷ್ಟೇ ಶಿಕ್ಷಣ ಪಡೆದಿದ್ದರೂ ಉದ್ಯೋಗ ದೊರೆತಿದ್ದರೂ ಅವರ ಮನಸ್ಸು ಲೌಕಿಕಕ್ಕಿಂತಲೂ ಪಾರಮಾರ್ಥಿಕದ ಕಡೆಗೆ ಒಲಿಯಿತು. ಸಮಾಜಸೇವೆಗಾಗಿ ಅವರ ಮನಸ್ಸು ತುಡಿಯುತ್ತಿತ್ತು.
ಪರಮಪೂಜ್ಯ ಬಾಲಗಂಗಾಧರನಾಥ ಸ್ವಾಮಿಗಳು ಚುಂಚನಗಿರಿಯನ್ನು ಚಿನ್ನದ ಗಿರಿಯನ್ನಾಗಿ ಮಾಡಿದರೆ ಸ್ವಾಮಿ ನಿರ್ಮಲಾನಂದರು ಆ ಚಿನ್ನದಗರಿಗೆ ಸಾತ್ವಿಕ ಲೇಪಮಾಡಿ ಗಟ್ಟಿಗೊಳಿಸುತ್ತಿದ್ದಾರೆ.
ಸಮಾಜಕ್ಕೆ ನಿರ್ಮಲಾನಂದ ಸ್ವಾಮೀಜಿಗಳ ಸೇವೆಗಳನ್ನು ಪರಿಗಣಿಸಿ ಮೈಸೂರು ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಅನ್ನು ಏಪ್ರಿಲ್ ೩೦, ೨೦೧೬ರಂದು ಶ್ರೀ ಕ್ಷೇತ್ರ ಆದಿಚುಂಚನಗಿರಿಯಲ್ಲಿ ನೀಡಿ ಗೌರವಿಸಿತು.
ಇಂದು ಸಮಾಜದ ಎಲ್ಲಾ ವರ್ಗದವರಿಗೆ ವಿಶೇಷವಾಗಿ ದೀನದಲಿತರಿಗೆ ಸೌಹಾರ್ದತೆ ಮತ್ತು ಜ್ಞಾನದ ಸಂದೇಶವನ್ನು ಹರಡುವ ಪರಮಪೂಜ್ಯ, ಮಹಾಗುರುಗಳ ಪ್ರಾರಂಭಿಸಿದ ಕೆಲಸವನ್ನು ನಿರ್ಮಲಾನಂದ ಸ್ವಾಮೀಜಿಗಳು ಪಟ್ಟುಬಿಡದೆ ಮುಂದುವರಿಸುತ್ತಿದ್ದಾರೆ.
ಆಧುನಿಕ ವಿಜ್ಞಾನ ಮತ್ತು ತಾಂತ್ರಿಕ ಜ್ಞಾನ ಹಾಗೂ ಪ್ರಾಚೀನ ಪರಂಪರೆಯ ಎಲ್ಲದರಲ್ಲೂ ಸ್ವಾಮಿಗಳು ಪಾಂಡಿತ್ಯವನ್ನು ಹೊಂದಿದ್ದಾರೆ. ಸಂಸ್ಕೃತ, ಪ್ರಾಕೃತ, ವೇದ ವಿಜ್ಞಾನಗಳನ್ನು ಮೈಗೂಡಿಸಿಕೊಂಡಿರುವ ಸ್ವಾಮಿಗಳ ಜ್ಞಾನ ಅಪಾರ. ಸಂಗೀತ, ಲಲಿತಕಲೆ ಮತ್ತು ಸಾಹಿತ್ಯದ ಬಗ್ಗೆ ಸ್ವಾಮಿಗಳಿಗೆ ಇರುವ ಆಳವಾದ ಜ್ಞಾನವು ಅವರ ಆಧ್ಯಾತ್ಮಿಕ ಪ್ರವಚನಗಳಲ್ಲಿ ಪ್ರತಿಫಲಿಸುತ್ತದೆ.
ಭಾರತದಲ್ಲಷ್ಟೇ ಅಲ್ಲದೆ ವಿದೇಶಗಳಲ್ಲಿನ ಲಕ್ಷಾಂತರ ಭಕ್ತರ ಪ್ರಜ್ಞೆಯನ್ನು ಬೆಳಗಿಸುತ್ತಿದ್ದಾರೆ. ಜ್ಙಾನ ಮತ್ತು ಶಾಂತಿ ಸೌಹಾರ್ದ ಸಂದೇಶವನ್ನು ವಿಶ್ವದೆಲ್ಲಡೆ ಹರಡುತ್ತಿರವ ಶ್ರೀಗಳನ್ನು ಅವರ ಹುಟ್ಟುಹಬ್ಬದ ನಿಮಿತ್ತ ನೆನಪು ಮಾಡಿಕೊಳ್ಳುವ ಅವಕಾಶ ದೊರೆತಿರುವುದು ನಮ್ಮ ಪುಣ್ಯ. ____****____ ಸಿಎನ್ಕೆ