ಬೇಡ ಎನ್ನುತ್ತಲೇ ಮೆತ್ತಗೆ ನಿಗಮ ಮಂಡಳಿ ಹಿಡಿದ ಶಾಸಕರು
1 min readಬೆಂಗಳೂರು: ನಿಗಮ ಮಂಡಳಿಗಳಿಗೆ ನೇಮಕಗೊಂಡಿರುವ ಶಾಸಕರು ಪ್ರಾರಂಭದಲ್ಲಿ ಹಿಂದೇಟು ಹಾಕಿದ್ದರೂ ಇದೀಗ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ. ಈ ಜವಾಬ್ದಾರಿ ನಿರ್ವಹಿಸುವ ಮೂಲಕ ಸರಕಾರ ಹಾಗೂ ಪಕ್ಷದ ವರ್ಚಸ್ಸು ಹೆಚ್ಚಿಸುವ ಕೆಲಸ ಮಾಡಬೇಕೆಂದು ಸಿಎಂ ಬಿ.ಎಸ್.ಯಡಿಯೂರಪ್ಪ ಖಡಕ್ ಸಂದೇಶ ರವಾನಿಸಿರುವುದೇ ಇದಕ್ಕೆ ಕಾರಣವಾಗಿದೆ. ಬಿಜೆಪಿ ಸರಕಾರ 1 ವರ್ಷ ಪೂರೈಸುತ್ತಿದ್ದಂತೆ ಸಿಎಂ ಬಿಎಸ್ವೈ ಅವರು 20 ಶಾಸಕರನ್ನು ನಿಗಮ ಮಂಡಳಿಗೆ ನೇಮಿಸಲು ತೀರ್ಮಾನಿಸಿ ಆದೇಶ ಹೊರಡಿಸಿದರು.
ಆದರೆ, ಮಂತ್ರಿ ಸ್ಥಾನದ ಅಪೇಕ್ಷೆಯಲ್ಲಿದ್ದ ಶಾಸಕರಿಗೆ ಇದರಿಂದ ನಿರಾಸೆಯಾಗಿತ್ತು. ಹಾಗಾಗಿ ಜುಲೈ 27ರಂದೇ ನಿಗಮ ಮಂಡಳಿ ನೇಮಕ ಸಂಬಂಧ ನಿರ್ಧಾರವಾದರೂ ಶಾಸಕರ ವಲಯದಲ್ಲಿ ಉತ್ಸಾಹ ಕಂಡಿರಲಿಲ್ಲ. ಈ ಪೈಕಿ ಕೆಲವರು ಸಚಿವ ಸ್ಥಾನದ ಆಕಾಂಕ್ಷೆ ಹೊಂದಿರುವುದಾಗಿ ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಅಂಥವರಲ್ಲಿ ತಿಪ್ಪಾರೆಡ್ಡಿ ಹೆಸರನ್ನು ನಿಗಮ ಮಂಡಳಿ ಪಟ್ಟಿಯಿಂದ ಕೈಬಿಡಲಾಯಿತು. ಸ್ವತಃ ಸಿಎಂ ಅವರೇ ತಿಪ್ಪಾರೆಡ್ಡಿ ಜತೆಗೆ ಈ ಬಗ್ಗೆ ಮಾತನಾಡಿದ್ದರು. ಆದರೆ, ರೆಡ್ಡಿ ಅವರಿಗೆ ಮುಂಬರುವ ದಿನಗಳಲ್ಲಿ ಸಚಿವ ಸ್ಥಾನ ನೀಡುವ ಬಗ್ಗೆ ಖಚಿತತೆ ಇಲ್ಲ.
ಕಾದು ನೋಡುವ ತಂತ್ರ ಅನುಸರಿಸಿದ್ದ ಕಮಲ ಕಲಿಗಳುನಿಗಮ ಮಂಡಳಿಗೆ ನೇಮಕವಾದವರಲ್ಲಿ ಹಿರಿಯ ಶಾಸಕರಾದ ಅರಗ ಜ್ಞಾನೇಂದ್ರ, ಹರತಾಳು ಹಾಲಪ್ಪ, ನರಸಿಂಹ ನಾಯಕ್(ರಾಜೂಗೌಡ), ಎ.ಎಸ್.ಪಾಟೀಲ್ ನಡಹಳ್ಳಿ, ಶಿವನಗೌಡ ನಾಯಕ್, ಸಿದ್ದು ಸವದಿ, ನೆಹರೂ ಓಲೇಕಾರ್, ದುರ್ಯೋಧನ ಐಹೊಳೆ, ಡಾ.ಶಿವರಾಜ ಪಾಟೀಲ್ ಮತ್ತಿತರರು ಇದ್ದಾರೆ. ಈ ಎಲ್ಲ ಶಾಸಕರು ಒಂದಲ್ಲ ಒಂದು ಸಂದರ್ಭದಲ್ಲಿ ಮಂತ್ರಿ ಸ್ಥಾನದ ಆಸೆ ತೋಡಿಕೊಂಡಿದ್ದರು. ಇಂತಹ ಆಸೆಯಿರುವಾಗ ದಿಢೀರ್ ನಿಗಮ ಮಂಡಳಿಗೆ ನೇಮಕ ಮಾಡಿದ್ದರಿಂದ ಶಾಸಕರಿಗೆ ಬೇಸರವಾಗಿತ್ತು. ಇದರ ಪ್ರತಿಭಟನಾ ಸೂಚಕವಾಗಿ ಕಾಯ್ದು ನೋಡುವ ತಂತ್ರಕ್ಕೂ ಶರಣಾಗಿದ್ದರು.
ಇದರ ಮಧ್ಯೆ ತಮ್ಮನ್ನು ಭೇಟಿಯಾಗಿದ್ದ ಕೆಲವು ಶಾಸಕರಿಗೆ ಅನಗತ್ಯ ಗೊಂದಲ ಮೂಡಿಸುವುದು ಬೇಡ. ವಿಶಿಷ್ಟ ಪರಿಸ್ಥಿತಿಯಲ್ಲಿ ಸರಕಾರ ರಚನೆಯಾಗಿದೆ. ಕೋವಿಡ್ನಂತಹ ಸಂಕಟವೂ ಇದೆ. ಎಲ್ಲರನ್ನೂ ಮಂತ್ರಿ ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ಹೈಕಮಾಂಡ್ ತೀರ್ಮಾನಿಸಬೇಕಾಗುತ್ತದೆ. ಸದ್ಯಕ್ಕೆ ನಿಗಮ ಮಂಡಳಿ ಮೂಲಕ ಅಧಿಕಾರ ನೀಡಲಾಗಿದೆ. ಇದನ್ನು ತಪ್ಪಿಸಿಕೊಳ್ಳಬೇಡಿ. ದೊರೆತ ಅವಕಾಶ ಬಳಸಿಕೊಂಡು ಸರಕಾರ ಮತ್ತು ಪಕ್ಷಕ್ಕೆ ಒಳ್ಳೆಯ ಹೆಸರು ತರುವ ಕೆಲಸ ಮಾಡುವಂತೆ ಸಿಎಂ ಕಿವಿಮಾತು ಹೇಳಿದ್ದರು. ಇದಾದ ಬಳಿಕ ಹರತಾಳು ಹಾಲಪ್ಪ, ಮಾಡಾಳು ವಿರೂಪಾಕ್ಷಪ್ಪ, ದತ್ತಾತ್ರೇಯ ಪಾಟೀಲ್ ರೇವೂರ್, ಎಸ್.ವಿ.ರಾಮಚಂದ್ರ ನಿಗಮ ಮಂಡಳಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.