April 26, 2024

Chitradurga hoysala

Kannada news portal

ರಾಜ್ಯ ಸರ್ಕಾರದ ವಿರುದ್ದ ಕಾಂಗ್ರೆಸ್ ಪ್ರತಿಭಟನೆ.

1 min read

ಹೊಸದುರ್ಗ:ಭೂ ಸುಧಾರಣೆ, ಎ.ಪಿ.ಎಂ.ಸಿ ತಿದ್ದುಪಡಿ, ಕೊರೊನಾ ಭ್ರಷ್ಟಾಚಾರ ಹಾಗೂ ಅತಿವೃಷ್ಟಿ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಹೊಸದುರ್ಗ ತಾಲೂಕು ಬ್ಲಾಕ್ ಕಾಂಗ್ರೆಸ್ ಪಕ್ಷದಿಂದ ನಗರದ ತಹಶೀಲ್ದಾರ್ ಕಚೇರಿ ವರೆಗೆ ಪ್ರತಿಭಟನೆ ನಡೆಸಿ‌ ಉಪತಹಶೀಲ್ದಾರ್‌ ಅವರ ಮೂಲಕ ರಾಜ್ಯಪಾಲರಿಗೆ ಮನವಿ‌ಪತ್ರ ಸಲ್ಲಿಸಿದರು.

ನಗರದಲ್ಲಿ ‌ನಗರ ಮತ್ತು ಶ್ರೀರಾಂಪುರ ಬ್ಲಾಕ್ ‌ಕಾಂಗ್ರೆಸ್ ಸಮಿತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆ ಮೆರವಣಿಗೆಯಲ್ಲಿ ಮಾತನಾಡಿದ ಪಕ್ಷದ ಮಾಜಿ ಶಾಸಕ ಬಿ.ಜಿ. ಗೋವಿಂದಪ್ಪ ಕೇಂದ್ರ ಸರ್ಕಾರ ಭೂ ಸುಧಾರಣೆ ಮತ್ತು ಎ.ಪಿ.ಎಂ.ಸಿ.ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಮರಣ ಶಾಸನವಾಗಿದ್ದು, ಬಡವರ ಭೂಮಿಯನ್ನು ಕಸಿದುಕೊಂಡು ಭೂ ಮಾಲೀಕರಿಗೆ ಹಾಗೂ ಕಾರ್ಪೊರೇಟ್ ಕಂಪನಿಗಳಿಗೆ ನೀಡಲು ಈ ಬಿಜೆಪಿ ‌ನೇತೃತ್ವದ ಕೇಂದ್ರ ಸರ್ಕಾರ ಹೊರಟಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು‌ ಇಲ್ಲಿತನಕ‌ ಜನ ಪರ ಕೆಲಸ ಮಾಡದೆ ಜನ ವಿರೋಧಿ ಕೆಲಸಗಳನ್ನು ಮಾಡುತ್ತಾ ರೈತರ, ಕಾರ್ಮಿಕರ, ಮಹಿಳೆಯರ, ಯುವಕರ, ವಿದ್ಯಾರ್ಥಿಗಳ ವಿರೋಧಿ ಸರ್ಕಾರವಾಗಿದ್ದು, ಸರ್ಕಾರದ ವಿರುದ್ಧ ಕೇವಲ ಕಾಂಗ್ರೆಸ್ ಪಕ್ಷ ಪ್ರತಿಭಟನೆ ಮಾಡದೆ ರಾಜ್ಯದ 6 ಕೋಟಿ ಜನರ ಪರವಾಗಿ ಪ್ರತಿಭಟನೆ ಮಾಡುವ ಉದ್ದೇಶವೆ ಜನದ್ವನಿ ಪ್ರತಿಭಟನೆಯಾಗಿದೆ ಎಂದರು.

ಕಾಂಗ್ರೇಸ್ ಮುಖಂಡ ಆಗ್ರೋ ಶಿವಣ್ಣ ಮಾತನಾಡಿ ಸರ್ಕಾರ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ. ಇಷ್ಟು ಸಾಲದೆಂಬಂತೆ ಭೂಸುಧಾರಣೆ ಕಾಯಿದೆ ಹಾಗೂ ಎ.ಪಿ.ಎಂ.ಸಿ.ಕಾಯಿದೆ ತಿದ್ದುಪಡಿಗೊಳಿಸಿ ಅನ್ನದಾತ ರೈತನ ಬೆನ್ನುಮೂಳೆ ಮುರಿಯಲು ಹೊರಟಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೆ ಕಾಯಿದೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಎಚ್ಚರಿಸಿದರು.

ರಾಜ್ಯ ಜವಳಿ ಮಂಡಳಿಯ ಮಾಜಿ ಅಧ್ಯಕ್ಷ ಗೋ.ತಿಪ್ಪೇಶ್ ಮಾತನಾಡಿ ಲಾಕ್‌ಡೌನ್ ಸಂದರ್ಭದಲ್ಲಿ 83 ಲಕ್ಷ ಜನರಿಗೆ ಫುಡ್‌ಕಿಟ್‌ಗಳನ್ನು ವಿತರಿಸಿದ್ದೇವೆಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ. ಯಾರಿಗೆ ಎಲ್ಲಿ ಎಷ್ಟು ನೀಡಿದ್ದೇವೆಂಬ ವಿವರ ಒದಗಿಸಿಲ್ಲ. ಮಾರುಕಟ್ಟೆಯಲ್ಲಿರುವ ದರಕ್ಕಿಂತ ದುಪ್ಪಟ್ಟು ದರ ನೀಡಿ ವೈದ್ಯಕೀಯ ಸಲಕರಣೆಗಳನ್ನು ಖರೀಧಿಸಿರುವ ಸರ್ಕಾರ ಸಾಮಾಗ್ರಿಗಳು ಸರಬರಾಜಾಗದೆ ಹಣ ಪಾವತಿಸಿರುವ ಬಗ್ಗೆ ಮಾಹಿತಿ ದೊರಕಿದೆ. ಅಂದಾಜು ಎರಡು ಸಾವಿರ ಕೋಟಿ ರೂ.ಗಳನ್ನು ಹೆಚ್ಚಿಗೆ ಪಾವತಿಸಿದ್ದು, ಒಟ್ಟಾರೆ ಹಗರಣವನ್ನು ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವಂತೆ ಮನವಿ ಮಾಡಿದರು.

ಈ ವೇಳೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮಹಮದ್ ಇಸ್ಮಾಹಿಲ್ ಪ್ರತಿಭಟನೆಯ ಅಧ್ಯಕ್ಷತೆ ವಹಿಸಿದ್ದರು. ಶ್ರೀರಾಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಪ್ಪ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಪಿ ಪ್ರಕಾಶ್, ಇನ್ನೂ ಕಾಂಗ್ರೇಸ್ ಮುಖಂಡರಾದ ಕನಕ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಂ.ಹೆಚ್.ಕೃಷ್ಣಮೂರ್ತಿ, ಕಾರೇಹಳ್ಳಿ ಬಸಣ್ಣ, ಜಿ.ಪಂ ಸದಸ್ಯ ಡಾ.ಕೆ.ಅನಂತ್, ಪಿ.ಎ ಮಂಜುನಾಥ್, ಕೆ.ಸಿ.ನಿಂಗಪ್ಪ, ದೇವಿರಪ್ಪ, ಕೆ.ಟಿ.ಮಂಜುನಾಥ್, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಾ ಮಂಜುನಾಥ್, ಅಲ್ತಾಫ್ ಇನ್ನಿತರರು ಪಾಲ್ಗೊಂಡಿದ್ದರು.

About The Author

Leave a Reply

Your email address will not be published. Required fields are marked *