ಸಣ್ಣ ಸಮುದಾಯಗಳಿಗೆ ಬಿಜೆಪಿ ಬಜೆಟ್ ನಲ್ಲಿ ಅನ್ಯಾಯ ಮಾಡಿದೆ:ಎಂ.ಡಿ. ಲಕ್ಷ್ಮೀನಾರಾಯಣ್.
1 min readಚಿತ್ರದುರ್ಗ ಮಾ. ೯
ಸರಕಾರ ಮಂಡಿಸಿರುವ ಬಜೇಟ್ನಲ್ಲಿ ಮೇಲ್ವರ್ಗದ ಐದಾರು ಸಮುದಾಯದ ನಿಗಮಗಳಿಗೆ ಹಣವನ್ನು ನೀಡುವ ಮೂಲಕ ಸಣ್ಣ ಸಣ್ಣ ಸಮುದಾಯಗಳಿಗೆ ಅನ್ಯಾಯ ಮಾಡಲಾಗಿದೆ ಎಂದು ನೇಕಾರರ ಒಕ್ಕೂಟಗಳ ರಾಜ್ಯ ಘಟಕದ ಅಧ್ಯಕ್ಷ ಎಂ.ಡಿ. ಲಕ್ಷ್ಮೀನಾರಾಯಣ್ ಅಸಮಧಾನ ವ್ಯಕ್ತಪಡಿಸಿದರು.
ಮಂಗಳವಾರ ಖಾಸಗಿ ಭೇಟಿ ಹಿನ್ನಲೆಯಲ್ಲಿ ಚಿತ್ರದುರ್ಗಕ್ಕೆ ಆಗಮಿಸಿದ ವೇಳೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ರಾಜ್ಯದ ಹಿಂದುಳಿದ ವರ್ಗಗಳ ೧೦೨ ಸಮುದಾಯಗಳು ಹಾಗೂ ಪ್ರವರ್ಗ ೧ರ ೯೫ ಸಮುದಾಯಗಳು ಸರಕಾರದ ಮೂಲ ಸೌಕರ್ಯಗಳಿಂದ ವಂಚಿತವಾಗಿರುವ ಸಂದರ್ಭದಲ್ಲಿ ಮುಂದುವರಿದ ಜನಾಂಗಗಳಿಗೆ ಹಣ ನೀಡಲಾಗಿದೆ ಎಂದರು.
ಮೇಲ್ವರ್ಗದ ಒಂದು ಸಮುದಾಯಕ್ಕೆ ನಿಗಮ ಸ್ಥಾಪಿಸಿರುವುದು ಸ್ವಾಗತರ್ಹವಾದರೂ ಒಂದೇ ಸಮುದಾಯಕ್ಕೆ ನಿಗಮ ಘೋಷಣೆ ಮಾಡಿರುವುದು ಇತರೆ ಜನಾಂಗಗಳಿಗೆ ಅಪಮಾನ ಮಾಡಿದಂತಾಗಿದೆ. ಹಿಂದುಳಿದ ೬೭ ಸಮುದಾಯಗಳು ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆನ್ನುವ ಕೋರಿಕೆಗೆ ಸ್ಪಂದನೆ ಇಲ್ಲದಾಗಿದೆ ಎಂದರು.
ರಾಜ್ಯದಲ್ಲಿ ೨೬ ಉಪ ಪಂಗಡಗಳನ್ನು ಹೊಂದಿರುವ ನೇಕಾರ ಸಮುದಾಯಕ್ಕೆ ನೇಕಾರ ಅಭಿವೃದ್ಧಿ ನಿಗಮ ಸ್ಥಾಪನೆ ಕುರಿತಂತೆ ಒಕ್ಕೂಟದೊಂದಿಗೆ ಮುಖ್ಯಮಂತ್ರಿಗೆ ಸಲ್ಲಿಸಿದ್ದರೂ ಬಜೆಟ್ನಲ್ಲಿ ಘೋಷಣೆ ಮಾಡದಿರುವುದು ನೇಕಾರರ ಹಾಗೂ ಹಿಂದುಳಿದ ವರ್ಗಗಳ ಸಮುದಾಯಗಳಿಗೆ ಅವಮಾನವಾಗಿದೆ. ಮಾರ್ಚ್ ೩೧ರವರೆಗೆ ನಡೆಯಲಿರುವ ಅಧಿವೇಶನದಲ್ಲಿ ನೇಕಾರರ ಅಭಿವೃದ್ಧಿ ನಿಗಮ ಸ್ಥಾಪಿಸುವ ಜೊತೆಗೆ ಹಿಂದುಳಿದ ವರ್ಗಗಳು ಸಲ್ಲಿಸಿರುವ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.