ಪುರುಷ ಸಂತಾನ ನಿರೋಧ ಶಸ್ತ್ರಚಿಕಿತ್ಸೆ ಜಾಗೃತಿ ಕಾರ್ಯಕ್ರಮದಲ್ಲಿ ಬಿ.ಮೂಗಪ್ಪ :
ಪುರುಷ ಸಂತಾನ ನಿರೋಧ ಶಸ್ತ್ರಚಿಕಿತ್ಸೆಗೆ ವ್ಯಾಸೆಕ್ಟಮಿ ಸರಳ ವಿಧಾನ
____________________________________
ಚಿತ್ರದುರ್ಗ: ಸೆ 21:
ಪುರುಷ ಸಂತಾನ ನಿರೋಧ ಶಸ್ತ್ರಚಿಕಿತ್ಸೆಗೆ ವ್ಯಾಸೆಕ್ಟಮಿ ಒಂದು ಸರಳ ವಿಧಾನವಾಗಿದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ. ಮೂಗಪ್ಪ ಹೇಳಿದರು.
ನಗರದ ಇಂಡಿಯನ್ ಬ್ಯಾಂಕ್ ಹತ್ತಿರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮತ್ತು ಆರೋಗ್ಯ ಇಲಾಖೆ ವತಿಯಿಂದ ಸೋಮವಾರ ಆಯೋಜಿಸಿದ್ದ ಪುರುಷ ಸಂತಾನ ನಿರೋಧ ಶಸ್ತ್ರಚಿಕಿತ್ಸೆ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವ್ಯಾಸೆಕ್ಟಮಿ ಒಂದು ಸೂಕ್ತ ಮತ್ತು ಸರಳ ವಿಧಾನ. ಹೊಲಿಗೆ ಇಲ್ಲ, ಗಾಯ ಇಲ್ಲ, ಆಸ್ಪತ್ರೆಯಲ್ಲಿ ತಂಗುವ ಹಾಗಿಲ್ಲ. ಚಿಕಿತ್ಸಾ ವಿಧಾನಕ್ಕೆ ಕೇವಲ ಐದರಿಂದ ಹತ್ತು ನಿಮಿಷಗಳು ಮಾತ್ರ ಸಾಕು, ಚಿಕಿತ್ಸೆಯಾದ 20 ನಿಮಿಷಗಳ ಬಳಿಕ ಮನೆಗೆ ಹೋಗಬಹುದು ಎಂದು ತಿಳಿಸಿದರು.
ರಕ್ತಹೀನತೆ, ಹೃದಯ ಸಂಬಂಧಿ ಕಾಯಿಲೆ, ಹಿಂದಿನ ಹೆರಿಗೆ ಸಿಜರಿನ್ ಆದವರು, ರಕ್ತಹೀನತೆಯಿಂದ ಇರುವ ತಾಯಂದಿರು 30 ವರ್ಷ ಮೇಲ್ಪಟ್ಟ ತಾಯಿಯು ಗರ್ಭ ಧರಿಸಿ ಹೆರಿಗೆಯಾದವರು, ಯಾವುದೇ ಸಾಂಕ್ರಾಮಿಕ ರೋಗದಿಂದ ನರಳುತ್ತಿರುವವರು, ಒಂದೆರಡು ಮಕ್ಕಳು ಜನಿಸಿದ ನಂತರ ಮಕ್ಕಳು ಸಾಕೆಂದು ನಿರ್ಧರಿಸಿದ ಕುಟುಂಬದ ಇಂತಹ ಮಹಿಳೆಯರು ತಾವು ಕುಟುಂಬ ಕಲ್ಯಾಣ ಶಸ್ತ್ರಚಿಕಿತ್ಸೆಗೆ ಒಳಗಾಗಿ ತಮ್ಮ ಪ್ರಾಣಹಾನಿ ಮಾಡಿಕೊಳ್ಳುವುದಕ್ಕಿಂತ, ತಮ್ಮ ಪತಿಯವರಿಗೆ ವ್ಯಾಸೆಕ್ಟಮಿ ಶಸ್ತ್ರಚಿಕಿತ್ಸೆಗೆ ಮನವೊಲಿಸಬೇಕು ಎಂದರು.
ಪುರುಷ ಸಂತಾನ ನಿರೋಧ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಆರೋಗ್ಯವಾಗಿ ಇರಬಹುದು. ತಮ್ಮ ಕುಟುಂಬ ಸಂತಸದಿಂದ ಜೀವನ ಸಾಗಿಸಬಹುದು. ಪುರುಷತ್ವಕ್ಕೆ ಯಾವುದೇ ಹಾನಿಯಿಲ್ಲ. ದೈಹಿಕ ನಿಶ್ಯಕ್ತಿ ಪರುಷರಲ್ಲಿ ಉಂಟಾಗುವುದಿಲ್ಲ. ಲೈಂಗಿಕ ಸಾಮಥ್ರ್ಯ ಕಡಿಮೆಯಾಗುವುದಿಲ್ಲ. ಒಂದೆರಡು ದಿನಗಳ ನಂತರ ಯಾವುದೇ ದೈಹಿಕ ಶ್ರಮದ ಕಷ್ಟಕರ ಕೆಲಸವಾದರೂ ಸಹಿತ ಮಾಡಬಹುದು. ಪುರುಷ ಸಂತಾನ ನಿರೋಧ ಶಸ್ತ್ರಚಿಕಿತ್ಸೆ ಶಾಶ್ವತ ವಿಧಾನ ಆದರೂ ಪುನರ್ ಬದಲಾಯಿಸಲು ಸಾಧ್ಯ. ಎಂದು ತಾಯಂದಿರುಗಳಿಗೆ ಜಾಗೃತಿ ಶಿಕ್ಷಣ ನೀಡಿದರು.
ಧರ್ಮಸ್ಥಳ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸುಧಾ ಮಾತನಾಡಿ, ಗ್ರಾಮಾಭಿವೃದ್ಧಿ ಸಂಸ್ಥೆಯು ಮಹಿಳೆಯರ ಜ್ಞಾನ ವಿಕಾಸಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದು, ತಾಯಂದಿರು ಆರೋಗ್ಯ ಕಾರ್ಯಕ್ರಮಗಳಲ್ಲಿ ಪಡೆದ ಆರೋಗ್ಯ ಶಿಕ್ಷಣವನ್ನು ಚಾಚೂ ತಪ್ಪದೇ ಪಾಲಿಸಿ, ಜೀವನದಲ್ಲಿ ಅಳವಡಿಸಿಕೊಂಡು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡರೆ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು ಎಂದು ತಾಯಂದಿರಿಗೆ ತಿಳುವಳಿಕೆ ನೀಡಿದರು.
ಕಾರ್ಯಕ್ರಮದಲ್ಲಿ 40ಕ್ಕೂ ಹೆಚ್ಚು ಜನ ತಾಯಂದಿರು ಹಾಜರಿದ್ದರು.