ಟಿಪಿ ಉಮೇಶ್ ಗೆ ರಾಷ್ಟ್ರ ಪ್ರಶಸ್ತಿ; ಮಾಜಿ ಸಚಿವ ಹೆಚ್. ಆಂಜನೇಯರಿಂದ ಅಭಿನಂದನೆ
1 min readಟಿಪಿ ಉಮೇಶ್ ಗೆ ರಾಷ್ಟ್ರ ಪ್ರಶಸ್ತಿ; ಮಾಜಿ ಸಚಿವ ಹೆಚ್ ಆಂಜನೇಯ ರಿಂದ ಅಭಿನಂದನೆ
ಚಿತ್ರದುರ್ಗ ಹೊಯ್ಸಳ ಸುದ್ದಿ:
ಜಿಲ್ಲೆಯ ಹೆಮ್ಮೆಯ ಪುತ್ರ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಅಮೃತಾಪುರ ಶಾಲೆಯ ಸಹ ಶಿಕ್ಷಕ, ತೊಡರನಾಳು ವಾಸಿ ಉಮೇಶ್ ಟಿ ಪಿ ರವರಿಗೆ ಭಾರತ ಸರ್ಕಾರದಿಂದ ನೀಡಲಾಗುವ ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಕರ್ನಾಟಕ ರಾಜ್ಯದಿಂದ ಆಯ್ಕೆಯಾಗಿರುವುದು ಸಂತಸವಾಗಿದೆ ಎಂದು ಮಾಜಿ ಸಚಿವ ,ಕೆಪಿಸಿಸಿ ಉಪಾಧ್ಯಕ್ಷ ಹೆಚ್ ಆಂಜನೇಯ ತಿಳಿಸಿದ್ದಾರೆ.
2004ರಲ್ಲಿ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲ್ಲೂಕಿನ ಚಿಕ್ಕಬಳ್ಳಾರಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ವೃತ್ತಿ ಆರಂಭಿಸಿರುವ ಉಮೇಶ್, 2006 ರಲ್ಲಿ ತಾಲ್ಲೂಕಿನ ಕೇಶವಾಪುರ ಶಾಲೆಗೆ ವರ್ಗಾವಣೆಯಾಗಿ ಬಂದಿದ್ದಾರೆ.
2009 ರಿಂದ ಅಮೃತಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಇವರು , ಶಾಲೆಯಲ್ಲಿ ವಿನೂತನ ಶೈಕ್ಷಣಿಕ ಕಾರ್ಯಕ್ರಮ ಅನುಷ್ಠಾನಗೊಳಿಸುವ ಮೂಲಕ ಮಕ್ಕಳ ದಾಖಲಾತಿ ಪ್ರಮಾಣ ಹೆಚ್ಚಳಕ್ಕೆ ಶ್ರಮಿಸುತ್ತಿದ್ದಾರೆ.
ಆರಂಭದಲ್ಲಿದ್ದ 39 ವಿದ್ಯಾರ್ಥಿಗಳ ಸಂಖ್ಯೆಯನ್ನು 80 ಕ್ಕೆ ಹೆಚ್ಚಿಸಿದ್ದಾರೆ. ದಾನಿಗಳ ನೆರವು ಪಡೆದು ಶಾಲೆಗೆ ಮೂಲಸೌಕರ್ಯ ಒದಗಿಸುವಲ್ಲಿ ಪ್ರಮುಖರಾಗಿದ್ದಾರೆ.
ಶಿಕ್ಷಕ ಮಾತ್ರವಲ್ಲದೆ ಉಮೇಶ್ ಸಾಹಿತ್ಯ ಕ್ಷೇತ್ರದಲ್ಲಿಯೂ ತೊಡಗಿದ್ದಾರೆ. ‘ನನ್ನಯ ಸೈಕಲ್ ಟ್ರಿಣ್ ಟ್ರಿಣ್’, ‘ವಚನಾಂಜಲಿ’, ‘ವಚನವಾಣಿ’, ‘ಫೋಟೋಕ್ಕೊಂದು ಫ್ರೇಮು’, ‘ಅಪ್ಪನು ಕೊಡಿಸಿದ ಮೊದಲ ಪುಸ್ತಕ’, ‘ದೇವರಿಗೆ ಬೀಗ’ ಎಂಬ ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ.
ಇವರು ಆನೇಕ ಸಂಘಸಂಸ್ಥೆಗಳು ನೀಡುವ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ ,ಅಲ್ಲದೆ ಸರ್ಕಾರವು ನೀಡುವ ತಾಲ್ಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ , ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ , ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಮತ್ತು ಈ ಬಾರಿಯ ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದಿರುವುದು ಹೆಮ್ಮೆಯ ಸಂಗತಿ. ಇನ್ನೂ ಹೆಚ್ಚಿನ ಸೇವೆಯನ್ನು ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ನಿಮ್ಮಿಂದಾಗಲೆಂದು ಕೆಪಿಸಿಸಿ ಉಪಾಧ್ಯಕ್ಷ , ಮಾಜಿ ಸಚಿವ ಹೆಚ್ ಆಂಜನೇಯ ರವರು ಶುಭ ಹಾರೈಸಿದ್ದಾರೆ.