ಕುಟುಂಬ ಯೋಜನೆಯಲ್ಲಿ ಪುರುಷರ ಸಹಭಾಗಿತ್ವ ಬಹು ಮುಖ್ಯ: ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ
1 min readಕುಟುಂಬ ಯೋಜನೆಯಲ್ಲಿ ಪುರುಷರ ಸಹಭಾಗಿತ್ವ ಬಹು ಮುಖ್ಯ: ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ
ವರದಿ:ಆನಂದ್, ಆಲಘಟ
ಚಿತ್ರದುರ್ಗ ಸುದ್ದಿ:
ಮಿತಿಮೀರಿ ಬೆಳೆಯುತ್ತಿರುವ ಜನಸಂಖ್ಯೆ, ನಗರೀಕರಣ, ವಾಯು ಮಾಲಿನ್ಯ ಶಬ್ದ ಮಾಲಿನ್ಯ, ಇವುಗಳು ಮನುಷ್ಯರಿಗೆ ಅನಾರೋಗ್ಯಕ್ಕೆ ಎಡೆ ಮಾಡಿಕೊಡುತ್ತಿವೆ. ಸಾರ್ವಜನಿಕರು ಕೂಡ ಮಿತ ಸಂತಾನ ಹೊಂದುವುದು ಅನಿವಾರ್ಯವಾಗಿದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ. ಮೂಗಪ್ಪ ಹೇಳಿದರು.
ತಾಲೂಕಿನ ಗೋನೂರು ಗ್ರಾಮದಲ್ಲಿ ಸಾರ್ವಜನಿಕರ ಮನೆಗಳನ್ನು ಭೇಟಿ ಮಾಡಿ ಕುಟುಂಬ ಕಲ್ಯಾಣ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡುತ್ತಾ ಅವರು ಮಾತನಾಡಿದರು.
ಒಂದೆರಡು ಮಕ್ಕಳ ನಂತರ ಮಕ್ಕಳು ಬೇಡವೆಂದು ನಿರ್ಧರಿಸಿದ ದಂಪತಿಗಳು ಕುಟುಂಬ ಯೋಜನೆ ಅನುಸರಿಸಿತ್ತಿರುವುದು ಅನಿವಾರ್ಯವಾಗಿದೆ, ಆದರೆ ಜೀವನ ಶೈಲಿಯ ಬದಲಾವಣೆಯಿಂದಾಗಿ ಹೆಣ್ಣು ಮಕ್ಕಳಲ್ಲಿ ರಕ್ತಹೀನತೆ, ಹೃದಯದ ತೊಂದರೆ ಗರ್ಭಕೋಶದ ತೊಂದರೆ ಹಿಂದಿನ ಹೆರಿಗೆ ಸಿಜರಿಯನ್ ಆಗಿರುವುದು ಇಂತಹವರು ಕುಟುಂಬ ಕಲ್ಯಾಣ ಶಸ್ತ್ರಚಿಕಿತ್ಸೆ ಮಾಡಿಸಲು ಹಿಂಜರಿಯಬಹುದು, ಇಂತಹ ಸಂದರ್ಭದಲ್ಲಿ ಪುರುಷರಿಗೊಂದು ಸದಾವಕಾಶ ಹೊಲಿಗೆ ಇಲ್ಲ. ಗಾಯ ಇಲ್ಲ. ಆಸ್ಪತ್ರೆಯಲ್ಲಿ ತಂಗುವ ಹಾಗಿಲ್ಲ. ದಾಂಪತ್ಯ ಜೀವನಕ್ಕೆ ಅಡ್ಡಿ ಇಲ್ಲ, ಲೈಂಗಿಕ ಸಂಪರ್ಕಕ್ಕೆ ಯಾವುದೇ ಅಡಚಣೆ ಇಲ್ಲದ ಪುರುಷ ಸಂತಾನವಿರೋಧ ಶಸ್ತ್ರ ಚಿಕಿತ್ಸೆ ನುರಿತ ತಜ್ಞವೈದ್ಯರಿಂದ ಇದೀಗ ಲಭ್ಯವಿರುವುದರಿಂದ ಇದರ ಸದುಪಯೋಗ ಪಡಿಸಿಕೊಳ್ಳುವುದು ಉತ್ತಮ ಎಂದರು.
ಸಾರ್ವಜನಿಕರು ಉಚಿತ ಆರೋಗ್ಯ ಸಹಾಯವಾಣಿ-104, ಆಶಾ ಕಾರ್ಯಕರ್ತೆ, ಆರೋಗ್ಯ ನಿರೀಕ್ಷಣಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ಪಡೆಯಬಹುದು ಎಂದರು.
ನಿರೀಕ್ಷಣಾಧಿಕಾರಿ ಮಹೇಶ್ ಕರ ಪತ್ರ ಹಂಚಿಕೆ ಮಾಡುವುದರ ಮುಖಾಂತರ ಕುಟುಂಬ ಯೋಜನೆಗಳ ಕುರಿತು ಸಾರ್ವಜನಿಕರ ಗಮನಸೆಳೆದರು.
ಈ ಸಂದರ್ಭದಲ್ಲಿ ಬೆಳಗಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿ ಮಂಜುಶ್ರೀ. ಆಶಾ ಕಾರ್ಯಕರ್ತೆ ಶಿವರುದ್ರಮ್ಮ, ಜಮುನಾ,ಮತ್ತಿತರು ಹಾಜರಿದ್ದರು.