ಗಮಕ ಕಲೆಗೂ ಒಂದು ದಿನ ಮೀಸಲು: ಕಬೀರನಂದಾಶ್ರಮದ ಸದ್ಗುರು ಶಿವಲಿಂಗಾನಂದ ಸ್ವಾಮೀಜಿ
1 min read
ಶಿವರಾತ್ರಿ ಮಹೋತ್ಸವದ ಶಿವರಾತ್ರಿ ಸಪ್ತಾಹದ ಕಾರ್ಯಕ್ರಮದಲ್ಲಿ ಗಮಕ ಕಲೆಗೂ ಒಂದು ದಿನ ಮೀಸಲು:
ಸದ್ಗುರು ಶಿವಲಿಂಗಾನಂದ ಸ್ವಾಮೀಜಿ.
ಸಂಪಾದಕರು, ಸಿ.ಎನ್.ಕುಮಾರ್
CHITRADURGAHOYSALA NEWS
ಚಿತ್ರದುರ್ಗ:
ನಮ್ಮ ಕಲೆಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬ ಅವು ಉಳಿಯ ಬೇಕಾದರೆ ಸದಾ ಪ್ರದರ್ಶಿತವಾಗುತ್ತಿದ್ದರೆ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಗಮಕ ಕಲೆಯು ಒಂದು. ಆ ಕಲೆಗೆ ನಾವು ಪ್ರೋತ್ಸಾಹ ಕೊಡುವ ಸಲುವಾಗಿ ನಮ್ಮ ಶ್ರೀಮಠದಲ್ಲಿ ಪ್ರತಿವರ್ಷ ಶಿವರಾತ್ರಿ ಮಹೋತ್ಸವ ಸಂದರ್ಭದಲ್ಲಿ ನಡೆಯುವ ಶಿವರಾತ್ರಿ ಸಪ್ತಾಹದ ಕಾರ್ಯಕ್ರಮದಲ್ಲಿ ಗಮಕ ಕಲೆಗೂ ಒಂದು ದಿನ ಮೀಸಲಿರಿಸುವುದಾಗಿ ನಗರದ ಕಬೀರನಂದಾಶ್ರಮದ ಪೀಠಾಧ್ಯಕ್ಷರಾದ ಸದ್ಗುರು ಶಿವಲಿಂಗನಂದ ಸ್ವಾಮೀಜಿ ಅವರು ಆಶಯ ವ್ಯಕ್ತಪಡಿಸಿದರು.
ಶ್ರೀಗಳು ನಗರದ ಗಾಯತ್ರಿ ಕಲ್ಯಾಣ ಮಂಟಪದ ಶಾರದಾ ಸಭಾಭವನದಲ್ಲಿ ಚಿತ್ರದುರ್ಗದ ಗಮಕಲಾಭಿಮಾನಿಗಳ ಸಂಘದ ವಾರ್ಷಿಕೋತ್ಸವದ ನಿಮಿತ್ತ ಏರ್ಪಡಿಸಿದ್ದ ಗಮಕ ಕವಿ ಕಾವ್ಯ ವಾಚನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಸಮಾರಂಭವನ್ನು ಉದ್ಘಾಟಿಸಿ ಮೇಲಿನಂತೆ ನುಡಿದರು.ನಾನು ಬೆಂಗಳೂರಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವಾಗ ಗಮಕ ಕಲೆಯ ಒಂದೆರಡು ತರಗತಿಗೆ ಹೋಗಿ ನಂತರ ಹೋಗಲು ಸಾಧ್ಯವಾಗದೆ ಬಿಟ್ಟೆ ಎಂದು ತಮ್ಮ ಹಳೆಯ ನೆನಪನ್ನು ಸ್ಮರಿಸಿಕೊಂಡರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗಮಕ ಕಲಾಭಿಮಾನಿಗಳ ಸಂಘದ ಅಧ್ಯಕ್ಷೆ ಶ್ರೀಮತಿ ಕೆ.ಆರ್ ರಮಾದೇವಿರವರು ಕಳೆದ 40 ವರ್ಷಗಳಿಂದ ಚಿತ್ರದುರ್ಗದಲ್ಲಿ ಗಮಕ ಕಲೆಯ ಕಾರ್ಯಕ್ರಮ ನಡೆಸುತ್ತಾ ಬರಲಾಗಿದೆ. ಹಿಂದಿನ ಹಿರಿಯರು ಬಹಳ ಕಷ್ಟಪಟ್ಟು ಸಂಘ ಸ್ಥಾಪಿಸಿ ಆ ಮೂಲಕ ಕಲೆಯ ಉಳಿವಿಗೆ ಪ್ರೇರಣೆ ನೀಡಿದ್ದಾರೆ.ಅದು ಉಳಿಯಲು ಬೆಳೆಸಲು ಈ ಕಾರ್ಯಕ್ರಮ ಇನ್ನು ಮೇಲೆ ಪ್ರತಿ ತಿಂಗಳಿಗೊಮ್ಮೆ ನಡೆಯಲಿದೆ. ಪ್ರಾರಂಭಿಕವಾಗಿ ಜೆಸಿಆರ್ ಬಡಾವಣೆಯ ಗಣಪತಿ ದೇವಸ್ಥಾನದಲ್ಲಿ ಮುಂದಿನ ತಿಂಗಳು ನಡೆಯಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಪ್ರಮುಖ ಘಟ್ಟ ಕರ್ನಾಟಕ ಭಾರತ ಕಥಾಮಂಜರಿಯ ವಿಶ್ವರೂಪ ದರ್ಶನ ಕಥಾ ಭಾಗದ ವಾಚನ ಮತ್ತು ವ್ಯಾಖ್ಯಾನವನ್ನು ಸ್ವರಾತ್ಮಿಕ ಸಂಗೀತ ಶಾಲೆಯ ಪ್ರಾಚಾರ್ಯರಾದ ಗಮಕಿ ಚಂಪಕಾ ಶ್ರೀಧರ್ ಅವರು ವಾಚನ ಮಾಡಿದರೆ,ಅದಕ್ಕೆ ಸಾಗರದ ನಿವೃತ್ತ ಪ್ರೊಫೆಸರ್ ಶ್ರೀ ಕೃಷ್ಣಯ್ಯ ಅವರು ವ್ಯಾಖ್ಯಾನ ನಡೆಸಿಕೊಟ್ಟರು.ಗಮಕ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳಿಂದ ಪ್ರಾರ್ಥನೆ ನಡೆಯಿತು. ಕರ್ನಾಟಕ ಗಮಕ ಕಲಾ ಪರಿಷತ್ ಜಿಲ್ಲಾ ಪ್ರತಿನಿಧಿ
ಡಾ:ರಾಜೀವಲೋಚನ ಸ್ವಾಗತಿಸಿದರು,ಸಂಘದ ನಿರ್ದೇಶಕರಾದ ನಂಜುಂಡರಾವ್ ವಂದನಾರ್ಪಣೆ ಮಾಡಿದರು.