ದುರ್ಗಾದೇವಿ ಮೊರೆ ಹೋದ ಶ್ರೀರಾಮುಲುಗೆ ಒಲಿಯುವುದೆ ಡಿಸಿಎಂ
1 min readಯಾದಗಿರಿ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬೆನ್ನಲ್ಲೇ ಆರೋಗ್ಯ ಸಚಿವ ಶ್ರೀರಾಮುಲು ಇಂದು ಗಡೇ ದುರ್ಗಾದೇವಿಯ ಮೊರೆ ಹೋಗಿದ್ದಾರೆ. ಕಲ್ಯಾಣ ಕರ್ನಾಟಕ ಉತ್ಸವದ ಹಿನ್ನೆಲೆ ಯಾದಗಿರಿಗೆ ಆಗಮಿಸಿರುವ ಶ್ರೀರಾಮುಲು, ವಡಗೇರಾ ತಾಲೂಕಿನ ಗೋನಾಲದಲ್ಲಿರುವ ಗಡೇ ದುರ್ಗಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ್ರು. ಈ ವೇಳೆ ಅವರು ತಮಗೆ ಡಿಸಿಎಂ ಸ್ಥಾನ ಒಲಿಯಲಿ ಎಂದು ದೇವಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ಡೆಪ್ಯೂಟಿ ಚೀಫ್ ಮಿನಿಸ್ಟರ್ ಆಫ್ ಕರ್ನಾಟಕ ಮಸ್ಟ್ & ಕಂಪಲ್ಸರಿ ಎಂದು ಶ್ರೀರಾಮುಲು ಪತ್ರ ಬರೆದು ಅದಕ್ಕೆ ದೇವಾಲಯದಲ್ಲಿ ಅರ್ಚನೆ ಮಾಡಿಸಿದ್ದಾರೆ. *ರಾಮುಲು ಬರೆದ ಪತ್ರ ಮಾದ್ಯಮಗಳಿಗೆ ಲಭ್ಯವಾಗಿದೆ*. ಈ ಹಿಂದೆ ದೇವಿ ದರ್ಶನ ಪಡೆದಿದ್ದ ಡಿಕೆ ಶಿವಕುಮಾರ್, ಸಂಕಷ್ಟ ದೂರವಾಗುವಂತೆ ಮೊರೆ ಇಟ್ಟಿದ್ದರು. ಬಳಿಕ ಅವರಿಗೆ ಕೆಪಿಸಿಸಿ ಪಟ್ಟ ದಕ್ಕಿತ್ತು. ಈಗ ಶ್ರೀರಾಮುಲು ಕೂಡ ಡಿಸಿಎಂ ಪಟ್ಟಕ್ಕಾಗಿ ದೇವಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ ಎನ್ನಲಾಗಿದೆ. ಅವರ ಸಂಕಲ್ಪದಂತೆ ದೇವಸ್ಥಾನ ಪೂಜಾರಿ ಮರಿಸ್ವಾಮಿ, ದೇವಿಗೆ ಅರ್ಚನೆ ಮಾಡಿದ್ದಾರೆ.
ಮನಸ್ಸಿನಲ್ಲೇನಿದೆ ಅದೇ ಪತ್ರದಲ್ಲಿದೆ
ಪೂಜೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಸಿದ ಶ್ರೀರಾಮುಲು, ಗಡೇ ದುರ್ಗಾದೇವಿ ಬಗ್ಗೆ ಸ್ನೇಹಿತರಿಂದ ತಿಳಿದುಕೊಂಡಿದ್ದೆ. ಹೀಗಾಗಿ ಭೇಟಿ ನೀಡಿದ್ದೇನೆ. ಒಳ್ಳೆಯದಾಗಲಿ ಎಂದು ದೇವಿಗೆ ಪತ್ರ ಬರೆದಿದ್ದೇನೆ. ಮನಸ್ಸಿನಲ್ಲಿರುವುದನ್ನೇ ಬರೆದುಕೊಟ್ಟಿದ್ದೇನೆ. ಆದ್ರೆ ದೇವಿ ಮುಂದೆ ಹೇಳಿಕೊಂಡ ವಿಚಾರಗಳನ್ನ ಬಹಿರಂಗವಾಗಿ ಹೇಳಲಾರೆ ಎಂದರು. ರಾಷ್ಟೀಯ ನಾಯಕರು ಸ್ಥಾನ ಮಾನದ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ರಾಮುಲು ಸ್ಪಷ್ಟಪಡಿಸಿದ್ದಾರೆ.