MLC ಚುನಾವಣೆಗೆ ಬಿಜೆಪಿಗೆ ಬಂಡಾಯದ ಬಿಸಿ ಇಬ್ಬರು ಬಿಜೆಪಿ ಬಂಡಾಯ ಅಭ್ಯರ್ಥಿಗಳು ಕಣದಲ್ಲಿ?
1 min readತುಮಕೂರು: ಆಗ್ನೇಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗೆ ಯಾವುದೇ ಬಂಡಾಯದ ಬಿಸಿ ತಾಕುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಚುನಾವಣಾ ಉಸ್ತುವಾರಿ ಎನ್.ರವಿಕುಮಾರ್ ನೀಡಿದ್ದ ಹೇಳಿಕೆ ಹುಸಿಯಾಗುವ ನಿರೀಕ್ಷೆ ಇದೆ.
ಏಕೆಂದರೆ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ತುಮಕೂರಿನ ಡಾ.ಹಾಲನೂರು ಎಸ್.ಲೇಪಾಕ್ಷ ಬುಧವಾರ ತಮ್ಮ ನಾಮಪತ್ರ ಸಲ್ಲಿಸುತ್ತಿದ್ದಾರೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ನೀಡಿದ್ದ ಟಿಕೆಟ್ ಭರವಸೆಯನ್ನು ಈಡೇರಿಸಿಲ್ಲ, ಹಾಗಾಗಿ ತಮ್ಮನ್ನು ನಂಬಿರುವ ಪದವೀಧರ ಕ್ಷೇತ್ರದ ಮತದಾರರ ಹಿತ ಕಾಯುವ ಸಲುವಾಗಿ ತಾವು ವಿಧಾನ ಪರಿಷತ್ ಗೆ ಹೋಗಲೇಬೇಕಿದೆ. ಆದ್ದರಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವುದಾಗಿ ತಮ್ಮ ಆಪ್ತೇಷ್ಟರ ಬಳಿ ಹೇಳಿಕೊಂಡಿದ್ದಾರೆ.
ಇದರ ಜೊತೆಗೆ ಹಿರಿಯೂರು ಬಿಜೆಪಿ ಶಾಸಕಿ ಪೂರ್ಣಿಮಾ ಅವರ ಪತಿ ಡಿ.ಟಿ ಶ್ರೀನಿವಾಸ್ ಕೂಡ ಪಕ್ಷೇತರರಾಗಿ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಇವರು ಕೂಡ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಈ ಇಬ್ಬರು ಬಂಡಾಯ ಅಭ್ಯರ್ಥಿಗಳನ್ನು ತಣಿಸುವ ಸವಾಲು ಬಿಜೆಪಿಗೆ ಎದುರಾಗಿದ್ದು, ಬಿಜೆಪಿ ಅಭ್ಯರ್ಥಿ ಎಂ.ಚಿದಾನಂದ್ ಗೌಡ ಈ ಡಬಲ್ ಟ್ರಬಲ್ ಅನ್ನು ಯಾವ ರೀತಿಯಲ್ಲಿ ಎದುರಿಸುತ್ತಾರೆಂದು ಕಾದು ನೋಡಬೇಕಿದೆ.