May 4, 2024

Chitradurga hoysala

Kannada news portal

ಡಾ.ಶಿವಮೂರ್ತಿ ಮುರುಘಾ ಶರಣರ ಇಷ್ಟಲಿಂಗ ಧ್ಯಾನ…

1 min read

ಚಿತ್ರದುರ್ಗ:
ಶ್ರೀಮುರುಘಾಮಠದಲ್ಲಿ ಶಿವಯೋಗದ(ಇಷ್ಟಲಿಂಗ ಧ್ಯಾನ)ಪ್ರಾತ್ಯಕ್ಷಿಕೆಯೊಂದಿಗೆ ಡಾ. ಶಿವಮೂರ್ತಿ ಮುರುಘಾ ಶರಣರು ಆಶೀರ್ವಚನ ನೀಡಿದರು.
ನಾಗರೀಕತೆಯ ಇತಿಹಾಸ, ಶರಣರ ಇತಿಹಾಸ. ವಚನಕಾರರ ಇತಿಹಾಸ. ಇವರು ಕಲ್ಯಾಣದಲ್ಲಿ ಕೂಡಿಕೊಂಡು ಬಸವಣ್ಣನವರ ನೇತೃತ್ವ ಹಾಗು ಅಲ್ಲಮಪ್ರಭುಗಳ ಅಧ್ಯಕ್ಷತೆಯಲ್ಲಿ ಚಿಂತನೆ ನಡೆಸಿದರು. ವಚನಕಾರರು ಅನ್ವೇಷಕರು. ಭೌತಿಕತೆಗೆ ಶಾಶ್ವತವಾದ ಭವಿಷ್ಯವಿಲ್ಲ. ತತ್ತ್ವಸಿದ್ಧಾಂತದಲ್ಲಿ ಆದರ್ಶ ಇರಬೇಕು. ಇದನ್ನು ಶರೀರದಲ್ಲಿ ಸಾಧನೆ ಮಾಡಬೇಕು. ಸಿದ್ಧಾಂತ ಒಬ್ಬ ವ್ಯಕ್ತಿಯ ಇತಿಹಾಸವನ್ನು ನಿರ್ಮಿಸುತ್ತದೆ ಎಂದು ತಿಳಿಸಿದರು.

ಜನಸಾಮಾನ್ಯರು ಸಿದ್ಧಾಂತದ ಕೈಹಿಡಿಯುವುದಿಲ್ಲ ಅಂದರೆ ನಮ್ಮ ಮುಂದೆ ಆಕರ್ಷಣೆ, ವೈಯ್ಯಾರದ ಬದುಕು ಹಾಗೂ ಸೆಳೆತಗಳು ಇವೆ. ಇವು ಮಾನವ ಸಹಜವಾದ ಸೆಳೆತಗಳು. ಇವರು ಭೌತಿಕದ ಬೆನ್ನತ್ತಿ ಹೋಗುತ್ತಾರೆ. ತಿಳುವಳಿಕೆ ನಿಧಾನವಾಗಿ ನಡೆಯುವ ಪ್ರಕ್ರಿಯೆ. ಸಿದ್ಧಾಂತ ನಮ್ಮ ಕೈಹಿಡಿಯುತ್ತದೆ. ಭೌತಿಕವಾದ ಬೆಳವಣಿಗೆ ನಿಜವಾದ ಬೆಳವಣಿಗೆ ಅಲ್ಲ. ಭಾರತದ ಇತಿಹಾಸಕ್ಕೆ ಶರಣರು ಗಟ್ಟಿಯಾದ ಇತಿಹಾಸ ಕೊಡುವ ಪ್ರಯತ್ನ ಮಾಡಿದರು ಎಂದರು.

ಮಡಿ ಮೈಲಿಗೆ ಪ್ರಚಾರದ ಭರಾಟೆ ಇರುವಾಗ ಶರಣರು ಸಮಾಜಮುಖಿ ಕಾರ್ಯಗಳನ್ನು ಮಾಡಿದರು. ಸಿಂಧೂಬಯಲಿನ ನಾಗರೀಕತೆ ನಾಗರೀಕತೆಯನ್ನು ಮೂಡಿಸಿದರೆ ಶರಣಸಂಸ್ಕೃತಿ ಸಂಸ್ಕೃತಿ ಕಲಿಸುವ ಪ್ರಯತ್ನ ಮಾಡಿತು. ನಾಗರೀಕತೆಯನ್ನು ಉಡಿಗೆ ತೊಡಿಗೆ, ವೈಭವದ ಮೂಲಕ ನೋಡಬಹುದು. ಆದರೆ ಸಂಸ್ಕೃತಿ ವಿಭಿನ್ನವಾದುದು. ನಾಗರೀಕತೆಗಿಂತ ಸಂಸ್ಕೃತಿ ಮುಖ್ಯವಾದುದು. ವಚನಕಾರರು ಹುಟ್ಟುಹಾಕಿದ್ದು ಸಂಸ್ಕೃತಿ. ನಮಗೆ ಸಾಂಸ್ಕೃತಿಕ ಶ್ರೀಮಂತಿಕೆ ಕೊಟ್ಟರು. ನಾವು ಹೆಮ್ಮೆ ಮತ್ತು ಅಭಿಮಾನದಿಂದ ಹೇಳಿಕೊಳ್ಳಬಹುದು. ಯುಗಯುಗಗಳ ಆಚೆಗೆ ಸಂಸ್ಕೃತಿ ಉಳಿದುಬರುತ್ತದೆ. ಸಾಂಸ್ಕೃತಿಕ ಶ್ರೀಮಂತಿಕೆಯ ವೈವಿಧ್ಯತೆ ಹೃದಯಜನ್ಯವಾದುದು. ವಚನಗಳು ಹೃದಯಗೀತೆಗಳು. ಸಂಸ್ಕೃತಿಯ ಮೂಲ ಹೃದಯವಂತಿಕೆ. ನಿಜವಾದ ಶ್ರೀಮಂತರು ಹೃದಯ ಶ್ರೀಮಂತರು. ಇದರ ಶ್ರೀಮಂತಿಕೆ ಯಾವಾಗಲು ಇರುತ್ತದೆ ಎಂದು ಶರಣರು ಹೇಳಿದರು.

ಶರಣ ಸಂಸ್ಕೃತಿ ಹೃದಯ ಪ್ರಧಾನವಾದ ಸಂಸ್ಕೃತಿ. ಬುದ್ಧಿ ಪ್ರಧಾನಕ್ಕಿಂತ ಹೃದಯ ಪ್ರಧಾನ. ಅದು ಜೀವ ಕಾರುಣ್ಯವಾದುದು. ಶರಣರು ಕಾರುಣ್ಯಮೂರ್ತಿಗಳಾಗಿದ್ದರು. ಬಸವಣ್ಣನವರು ಸಾವಿರಾರು ಶರಣರ ಜೊತೆ ಸಂಸ್ಕಾರ ಬಿತ್ತುತ್ತ ಸಾಗುತ್ತಿದ್ದರು. ಬಿಜ್ಜಳನ ಹತ್ತಿರ ಇದ್ದರೂ ಸಹ ಧಾರ್ಮಿಕ, ಆಧ್ಯಾತ್ಮಿಕ ಹಿನ್ನೆಕೆಯಲ್ಲಿ ಶ್ರಮಿಸಿದರು ಎಂದು ಹೇಳಿದರು.

ಅಸಹಾಯಕರಿಗೆ, ಬಡವರಿಗೆ ಸಹಾಯ ಹಸ್ತ ನೀಡುತ್ತಿದ್ದರು. ಆಧುನಿಕ ಪ್ರಪಂಚದಲ್ಲಿ ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಿದೆ. ಆದರೆ ಕೊಡುವವರ ಸಂಖ್ಯೆ ಕಡಿಮೆ ಇದೆ. ‘ಹಾಸಿ ದುಡಿದಡೆ ತನಗುಂಟು, ತನ್ನ ಪುರಾತನರಿಗುಂಟು’ ಹಾಗಾಗಿ ಕಾಯಕ ಮಾಡುವುದು, ದಾಸೋಹವನ್ನು ನೀಡುವುದು. ಉತ್ಪನ್ನ, ವಿತರಣೆ ಸಮನಾಗಿರಬೇಕು ಎಂದು ಶರಣರು ಸಾರಿ ಸಾರಿ ಹೇಳಿದರು.

ಕೊರೋನಾ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಕೊರೋನಾ ಅಸಮಾನತೆಯನ್ನು ಉಂಟು ಮಾಡುವುದಿಲ್ಲ. ಅದು ಯಾರನ್ನೂ ನೋಡುವುದಿಲ್ಲ. ಅದಕ್ಕೆ ಜಾತಿ, ವರ್ಗ, ವಯಸ್ಸಿನ ನಿರ್ಬಂಧವಿಲ್ಲ. ನಮ್ಮ ಆರೋಗ್ಯ ನಮ್ಮ ಕೈಲಿದೆ. ಜಾಗೃತವಾಗಿರಬೇಕು. ‘ನಾವು ಆಧ್ಯಾತ್ಮವನ್ನು ಪಾಲಿಸಿದರೆ, ಅದನ್ನು ನಮ್ಮನ್ನು ಪೋಷಿಸುತ್ತದೆ’ ಎಂದು ತಿಳಿಸಿದರು.

About The Author

Leave a Reply

Your email address will not be published. Required fields are marked *