ಚಿತ್ರದುರ್ಗ ವಲಯ ಪುರುಷರ ಮತ್ತು ಮಹಿಳೆಯರ ಥ್ರೋಬಾಲ್ ಪಂದ್ಯಾವಳಿ
ದೈಹಿಕ-ಮಾನಸಿಕ ಸದೃಢತೆಗೆ ಕ್ರೀಡೆ ಸಹಕಾರಿ
1 min read
ಚಿತ್ರದುರ್ಗ,ಫೆಬ್ರವರಿ23:
ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಕ್ರೀಡೆಗಳು ಸಹಕಾರಿಯಾಗಿವೆ ಎಂದು ಸರ್ಕಾರಿ ಕಲಾ ಕಾಲೇಜಿನ (ಸ್ವಾಯತ್ತ) ಪ್ರಾಂಶುಪಾಲರಾದ ಪ್ರೊ.ಟಿ.ಎಲ್.ಸುಧಾಕರ್ ಹೇಳಿದರು.
ನಗರದ ಸರ್ಕಾರಿ ಕಲಾ ಕಾಲೇಜು ಕ್ರೀಡಾಂಗಣದಲ್ಲಿ ಮಂಗಳವಾರ ಕಾಲೇಜು ಶಿಕ್ಷಣ ಇಲಾಖೆ, ದಾವಣಗೆರೆ ವಿಶ್ವವಿದ್ಯಾನಿಲಯ ಹಾಗೂ ಚಿತ್ರದುರ್ಗ ಸರ್ಕಾರಿ ಕಲಾ ಕಾಲೇಜು(ಸ್ವಾಯತ್ತ) ವತಿಯಿಂದ ಆಯೋಜಿಲಾಗಿದ್ದ ದಾವಣಗೆರೆ ವಿಶ್ವವಿದ್ಯಾನಿಲಯ ಅಂತರ ಕಾಲೇಜು ಚಿತ್ರದುರ್ಗ ವಲಯ ಪುರುಷರ ಮತ್ತು ಮಹಿಳೆಯರ ಥ್ರೋಬಾಲ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ಕೋವಿಡ್-19 ಸಂಪೂರ್ಣವಾಗಿ ಹೋಗಿಲ್ಲ. ಹಾಗಾಗಿ ಕ್ರೀಡಾಪಟುಗಳು ಆಟವಾಡುವ ಸಂದರ್ಭದಲ್ಲಿ ಮಾಸ್ಕ್, ಸ್ಯಾನಿಟೈಸರ್ ಮತ್ತು ಸಾಮಾಜಿಕ ಅಂತರ ಪಾಲನೆ ಮಾಡುವುದರೊಂದಿಗೆ ತಮ್ಮ ಉಜ್ವಲ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು. ಕ್ರೀಡೆಯಲ್ಲಿ ಸೋಲು-ಗೆಲುವು ಸಮಾನವಾಗಿ ಹಂಚಿಕೊಳ್ಳಬೇಕು. ಇಂದು ಸೋತವರು ನಾಳೆ ಗೆಲುವು ಸಾಧಿಸುತ್ತಾರೆ. ಪ್ರತಿಯೊಬ್ಬರು ಕ್ರೀಡಾ ಮನೋಭಾವದಿಂದ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕ್ರೀಡಾಪಟುಗಳಿಗೆ ಸಲಹೆ ನೀಡಿದರು.
ದಾವಣಗೆರೆ ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ನಿರ್ದೇಶಕರ ಸಂಘದ ಕಾರ್ಯದರ್ಶಿ ಪ್ರೊ.ಹೆಚ್. ತಿಪ್ಪೇಸ್ವಾಮಿ ಮಾತನಾಡಿ, ಕೋವಿಡ್-19 ಬಳಿಕ ದಾವಣಗೆರೆ ವಿವಿಯು ಕರ್ನಾಟಕದ ವಿಶ್ವವಿದ್ಯಾನಿಯಗಳಲ್ಲಿಯೇ ಮೊಟ್ಟ ಮೊದಲ ಬಾರಿಗೆ ಕ್ರೀಡೆಗಳನ್ನು ಆಯೋಜನೆ ಮಾಡಿದೆ. ಕೋವಿಡ್-19ರ ಹಿನ್ನೆಲೆಯಲ್ಲಿ ಎರಡು ವಲಯಗಳಲ್ಲಿ ಪಂದ್ಯಾವಳಿ ಆಯೋಜನೆಗೆ ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿಗಳು ಅವಕಾಶ ನೀಡಿದ್ದಾರೆ ಎಂದರು.
ಕ್ರೀಡೆಗಳು ಕ್ರೀಡಾಪಟುಗಳಿಗೆ ಹಬ್ಬವಿದ್ದಂತೆ, ಕ್ರೀಡಾಪಟುಗಳು ತಮ್ಮ ವ್ಯಕ್ತಿತ್ವ ಮತ್ತು ಮೇರುಗನ್ನು ಕ್ರೀಡೆಯಲ್ಲಿ ತೋರಿಸಬೇಕು. ಕ್ರೀಡಾ ಮನೋಭಾವದಿಂದ ಪಂದ್ಯಾವಳಿಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿ ಎಂದು ಹೇಳಿದರು.
ಥ್ರೋಬಾಲ್ ಪಂದ್ಯಾವಳಿಯಲ್ಲಿ ಆರು ಪುರುಷ ತಂಡಗಳು ಮತ್ತು ಆರು ಮಹಿಳಾ ತಂಡಗಳು ಭಾಗವಹಿಸಿದ್ದವು.
ಕಾರ್ಯಕ್ರಮದಲ್ಲಿ ಸರ್ಕಾರಿ ಕಲಾ ಕಾಲೇಜಿನ(ಸ್ವಾಯತ್ತ) ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ.ಎಂ.ಜೆ ಸಾಧಿಕ್, ಸರ್ಕಾರಿ ಕಲಾ ಕಾಲೇಜಿನ ಅಧ್ಯಾಪಕ ಸಂಘದ ಕಾರ್ಯದರ್ಶಿ ಎಲ್. ನಾಗರಾಜಪ್ಪ, ಕಾಲೇಜಿನ ಕ್ರೀಡಾ ಸಮಿತಿಯ ಸಂಚಾಲಕ ಡಾ. ಹೆಚ್. ಗುಡ್ಡದೇಶ್ವರಪ್ಪ, ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಪ್ರೊ.ಆರ್.ಕೆ. ರಂಗಸ್ವಾಮಿ ಸೇರಿದಂತೆ ಕ್ರೀಡಾಪಟುಗಳು ಹಾಗೂ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.