ಎಲ್ಲಾ ಕ್ಷೇತ್ರದಲ್ಲಿ ಮಹಿಳೆಯ ಅಭಿವೃದ್ಧಿ ಹೊಂದುತ್ತಿದ್ದಾರೆ:ಎಂ.ಮನಗೂಳಿ ಪ್ರೇಮಾವತಿ
1 min readಚಿತ್ರದುರ್ಗ ಮಾ. ೦೮. ಮಹಿಳೆಯರು ಈಗ ಎಲ್ಲಾ ಕ್ಷೇತ್ರಗಳಲ್ಲೂ ಮುಂದುವರೆದು ಅಭಿವೃದ್ಧಿ ಹೊಂದುತ್ತಿದ್ದಾರೆ . ಶಿಕ್ಷಣದಿಂದ ಮಾತ್ರ ಸಾಮಾಜಿಕವಾಗಿ , ಆರ್ಥಿಕವಾಗಿ ಸಮನಾಗಿ ಮುಂದುವರೆಯಲು ಸಾಧ್ಯವಾಗುತ್ತದೆ ಎಂದು ಪ್ರಧಾನ ಜಿಲ್ಲಾ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಮತಿ ಮನಗೂಳಿ ಪ್ರೇಮಾವತಿ .ಎಂ. ತಿಳಿಸಿದರು.
ಚಿತ್ರದುರ್ಗ ತಾಲೂಕಿನ ಕಳ್ಳಿಹಟ್ಟಿಯ ಈಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಫಾಟಿಸಿ ಮಾತನಾಡುತ್ತಾ, ಹೆಣ್ಣು ಮಗು ಜನಿಸಿದರೆ, ಅದರಿಂದ ಜವಾಬ್ದಾರಿ ಜಾಸ್ತಿಯಾಗುತ್ತದೆ ಹಾಗೂ ಜೀವನ ನಿರ್ವಹಣೆ ಕಷ್ಟವಾಗುತ್ತದೆ ಎಂಬ ನಕರಾತ್ಮಕ ಚಿಂತನೆ ಬಿಡಬೇಕು. ಅನಿಷ್ಟ ಸಾಮಾಜಿಕ ಪಿಡುಗುಗಳಿಂದ ದೂರವಿರಬೇಕು ಎಂದು ಕರೆ ನೀಡಿದರು.
ಹೆಣ್ಣು ಇಲ್ಲದೇ ಜೀವನವಿಲ್ಲ ಹಾಗೆ ಗಂಡು ಇಲ್ಲದೇ ಜೀವನ ಕೂಡ ಇಲ್ಲ. ಇಬ್ಬರು ಸರಿ ಸಮನಾಗಿ ಹೊಂದಾಣಿಕೆಯಾಗಿ ಜೀವನ ಮಾಡಿದರೆ ಮಾತ್ರ ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ . ಹೆಣ್ಣಿಗೆ ಶಿಕ್ಷಣವನ್ನು ಕೊಡಿಸಿದರೆ, ಒಂದು ಸಂಸಾರ ಚೆನ್ನಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ . ಆ ಮೂಲಕ ಹೆಣ್ಣು ಕರುಣಾಮಯಿಯಾಗಿದ್ದಾಳೆ ಎಂದ ನ್ಯಾಯಾಧೀಶರು,ಸಮಾಜದಲ್ಲಿ ಮಹಿಳೆಯರಿಗಾಗಿ ಕೆಲವು ಸೌಲಭ್ಯಗಳನ್ನು ನೀಡುವುದಕ್ಕೋಸ್ಕರ ಕಾನೂನನ್ನು ರೂಪಿಸಲಾಗಿದೆ. ಅದರಲ್ಲಿ ಮುಖ್ಯವಾಗಿ ಶಿಕ್ಷಣದ ಅಭಿವೃದ್ಧಿಗೆ ಪ್ರಾಧ್ಯಾನ್ಯತೆ ನೀಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಗ್ರಾಮಪಂಚಾಯಿತಿಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಸ್ಥಾನಗಳನ್ನು ನೀಡಲಾಗುತ್ತಿದೆ. ಆದರೆ, ಮಹಿಳೆಯರಲ್ಲಿ ಹೆಚ್ಚಿನ ಜನರು ಅನಕ್ಷರಸ್ಥರಾಗಿದ್ದಾರೆ. ಆದ್ದರಿಂದ, ಅವರು ಇತರರನ್ನು ಕೆಲಸ ಕಾರ್ಯಗಳಿಗೆ ಅವಲಂಬಿಸಬೇಕಾಗುತ್ತದೆ. ಆದ್ದರಿಂದ, ಮಹಿಳೆಯರು ಶಿಕ್ಷಣವನ್ನು ಪಡೆಯಬೇಕು, ಆ ಮೂಲಕ ಸಮಾಜದಲ್ಲಿ ಉತ್ತಮವಾಗಿ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ ಎಂದು ತಿಳಿ ಹೇಳಿದರು.
ಮಹಿಳೆಯರು ಸಹ ಆರ್ಥಿಕವಾಗಿ ಸಬಲರಾಗಬೇಕು. ಭಾರತಿಯ ಸಂಸ್ಕೃತಿಯಲ್ಲಿ ನೆಮ್ಮದಿ ಕಾಣಬೇಕು ಎಂದರೆ ಮಹಿಳೆಗೆ ಪುರುಷರು ಪ್ರಾತಿನಿಧ್ಯತೆ ನೀಡಬೇಕು. ಈಗ ಒಂದು ಹೆಣ್ಣು , ಹತ್ತು ಗಂಡಿಗೆ ಸಮ ಎನ್ನುವ ಸಮಯ ಬಂದಿದೆ. ಇತ್ತೀಚಿನ ದಿನಗಳಲ್ಲಿ ವಯಸ್ಸಾದ ತಂದೆ ತಾಯಿಯನ್ನು ಗಂಡು ಮಕ್ಕಳಿಗಿಂತ ಹೆಚ್ಚಾಗಿ ಹೆಣ್ಣು ಮಕ್ಕಳು ಪೋಷಿಸುತ್ತಿದ್ದಾರೆ. ಹೆಣ್ಣು ಮಗುವಿಗೆ ಮದುವೆ ಮಾಡಬೇಕು ಎಂಬ ಉದ್ದೇಶದಿಂದ ಬಳಸದೇ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿ, ಅವರು ಸಹ ಆರ್ಥಿಕ ಸಬಲರಾದರೆ ಸಮಾಜಕ್ಕೆ ಒಳ್ಳೆಯ ಪ್ರಜೆಯಾಗಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ , ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗಿರೀಶ ಬಿ.ಕೆ., ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಪ್ರವೀಣ್ ಎ.ಜೆ., ಮಾತನಾಡಿದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಶಿವಲೀಲ, ಮತ್ತು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶ್ರೀನಿವಾಸ್ ವಂದಿಸಿದರು. ಕಾರ್ಯಕ್ರಮದಲ್ಲಿ ಮಹಿಳೆಯರುಗಳು ಹಾಗೂ ಇತರರು ಭಾಗವಹಿಸಿದ್ದರು