ಬಿಜೆಪಿ ಸರಕಾರಕ್ಕೆ ಬಡವರ ಬಗ್ಗೆ ಯಾವುದೇ ಬದ್ಧತೆ ಇಲ್ಲ ವಿ.ಎಸ್. ಉಗ್ರಪ್ಪ ವಾಗ್ದಾಳಿ.ಜನರು ನರೇಂದ್ರ ಮೋದಿ ಮಾತಿಗೆ ಮರುಳಾಗಿ ಮತ ನೀಡಿದ್ದಾರೆ ಆಂಜನೇಯ
1 min readಬಿಜೆಪಿ ಸರಕಾರಕ್ಕೆ ಬಡವರ ಬಗ್ಗೆ ಯಾವುದೇ ಬದ್ಧತೆ ಇಲ್ಲ ವಿ.ಎಸ್. ಉಗ್ರಪ್ಪ ವಾಗ್ದಾಳಿ.
ಜನರು ನರೇಂದ್ರ ಮೋದಿ ಮಾತಿಗೆ ಮರುಳಾಗಿ ಮತ ನೀಡಿದ್ದಾರೆ ಆಂಜನೇಯ.
ಚಿತ್ರದುರ್ಗ/ ಹೊಳಲ್ಕೆರೆ :- ಬಿ.ವೈ. ವಿಜಯೇಂದ್ರ 25 ಕೋಟಿ ರೂ. ಆರ್ಟಿಜಿಎಸ್ ಮೂಲಕ ಲಂಚ ಪಡೆದಿದ್ದಾರೆ. ಈಗಲೆ ಸಿ.ಬಿ.ಐ ತನಿಖೆ ಆದರೆ ಮುಖ್ಯ ಮಂತ್ರಿ ಯಡಿಯೂರಪ್ಪ ಮತ್ತೊಂದು ಬಾರಿ ಜೈಲಿಗೆ ಹೋಗುವುದು ಖಚಿತ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರರು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಆರೋಪಿಸಿದ್ದರು.
ಹೊಳಲ್ಕೆರೆ ನಗದಲ್ಲಿ ಮಾಜಿ ಸಚಿವ ಎಚ್. ಆಂಜನೇಯ ನೇತೃತ್ವದಲ್ಲಿ ಅಗತ್ಯ ಹಾಗೂ ಇಂಧನ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಶನಿವಾರ ಸೈಕಲ್ ಜಾಥಾ ನಡೆಸಿ ನಂತರ ಹೊಳಲ್ಕೆರೆ ಯ ಒಂಟಿ ಕಂಬದಲ್ಲಿರುವ ಡಾ. ಬಿ. ಆರ್. ಅಂಬೇಡ್ಕರ್ ವೇದಿಕೆಯಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿರುವ ಬಿಜೆಪಿ ಸರಕಾರಕ್ಕೆ ಬಡವರ ಬಗ್ಗೆ ಯಾವುದೇ ಬದ್ಧತೆ ಇಲ್ಲ ಎಂದು ಉಗ್ರಪ್ಪ ಕೇಂದ್ರ ಮತ್ತು ರಾಜ್ಯ ಸರ್ಕಾರ ದ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸದ ಸರ್ಕಾರದಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಕಚ್ಚಾ ತೈಲ ದರ ಏರಿಕೆಯಾಗಿತ್ತು. ಆದರೂ ಸಹ ಕೇಂದ್ರ ಹಾಗೂ ರಾಜ್ಯ ಸರಕಾರಗಳು ತೆರಿಗೆ ಕಡಿಮೆ ಮಾಡಿ ಪೆಟ್ರೋಲ್ ಹಾಗೂ ಡೀಸೆಲ್ ದರ ಹೆಚ್ಚಳ ಆಗದಂತೆ ನೋಡಿಕೊಳ್ಳಲಾಗಿತ್ತು. ಆದರೆ ಈಗಿನ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಕಡಿಮೆ ಇದ್ದರೂ ಕೂಡ ಕೇಂದ್ರ ಮತ್ತು ರಾಜ್ಯ ಸರಕಾರ ಪ್ರತಿ ಲೀಟರ್ ಪೆಟ್ರೋಲ್ಗೆ 6೦ ರೂ. ತೆರಿಗೆ ಪಡೆಯುವ ಮೂಲಕ ದೇಶದ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ರಾಮನ ಭಕ್ತರು ಎಂದು ಹೇಳಿಕೊಳ್ಳುವ ಬಾ.ಜ.ಪ ನಾಯಕರು ರಾಮನ ಆದರ್ಶ ದಂತೆ ಆಡಳಿತ ನಡೆಸುತ್ತಿಲ್ಲ. ನಿಜವಾದ ರಾಮಭಕ್ತರು ಇರುವುದು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಎಂದು ಹೇಳಿದರು.
ಎಚ್. ಆಂಜನೇಯ ನವರು 2015ರಲ್ಲಿ ಅಪ್ಪರ್ ಭದ್ರಾ ಯೋಜನೆ ಚಿತ್ರದುರ್ಗ ಜಿಲ್ಲೆಗೆ ತಂದರು. ಇದೀಗ ಶಾಸಕ ಎಂ. ಚಂದ್ರಪ್ಪ ಹಾಗೂ ಜಿಲ್ಲೆಯ ಸಂಸದರು ಹಾಗೂ ಕೇಂದ್ರ ಸಚಿವರು ಆಗಿರುವ ನಾರಾಯಣಸ್ವಾಮಿಯವರು ಅಪ್ಪರ್ ಭದ್ರಾ ಯೋಜನೆಗೆ ಕೇಂದ್ರ ಸರಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸಿಕೊಂಡು ಒಂದೂವರೆ ವರ್ಷದಲ್ಲಿ ಜಿಲ್ಲೆಗೆ ನೀರು ಹರಿಸಲಿ ಎಂದು ಅವರು ಸವಾಲು ಹಾಕಿದರು.
ನಂತರ ಮಾಜಿ ಸಚಿವ ಹೆಚ್. ಆಂಜನೇಯ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬರುವ ಮುನ್ನ ಎಲ್ಲ ಅಗತ್ಯ ವಸ್ತುಗಳ ಬೆಲೆಗಳನ್ನು ಇಳಿಸುತ್ತೇವೆ ಎಂದು ಭರವಸೆ ನೀಡಿದ್ದರು. ಜನರು ನರೇಂದ್ರ ಮೋದಿ ಮಾತಿಗೆ ಮರುಳಾಗಿ ಮತ ನೀಡಿದರು. ಆದರೆ ಅಧಿಕಾರಕ್ಕೆ ಬಂದಾಗ ರೈತರು ಹಾಗೂ ಬಡ ಜನರ ಬಗೆಗಿನ ಕಾಳಜಿಯನ್ನೇ ಮರೆತ್ತಿದ್ದರೆ. ದೇಶದ ರಾಜ್ಯದ ಜನರು ಆಕ್ರೋಶ ಭರಿತರಾಗಿದ್ದಾರೆ. ಕೊರೊನಾ ಇರುವ ಕಾರಣಕ್ಕೆ ಬೀದಿಗೆ ಇಳಿದು ಪ್ರತಿಭಟನೆ ಮಾಡುತ್ತಿಲ್ಲವಷ್ಟೇ ಎಂದು ಹೇಳಿದರು.