ಡಿಸಿ ಕಚೇರಿ ನಿರ್ಮಾಣಕ್ಕೆ ರೂ.25 ಕೋಟಿ ಅನುದಾನ ಮಂಜೂರು- ವಿಐಪಿ ಅತಿಥಿ ಗೃಹ ಉದ್ಘಾಟಿಸಿದ ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ
1 min read
ವಿಐಪಿ ಅತಿಥಿ ಗೃಹ ಉದ್ಘಾಟಿಸಿದ ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ
________________________________________
ಚಿತ್ರದುರ್ಗ,ಜುಲೈ31:
ಚಿತ್ರದುರ್ಗ ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ರೂ.2.5 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ವಿಐಪಿ ಅತಿಥಿ ಗೃಹವನ್ನು ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ ಶನಿವಾರ ಉದ್ಘಾಟಿಸಿದರು.
ನಂತರ ಮಾತನಾಡಿದ ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ, ಚಿತ್ರದುರ್ಗ ಕೇಂದ್ರ ಸ್ಥಾನವಾಗಿದ್ದು, ನಗರದಲ್ಲಿ ಮೂರು ರಾಷ್ಟ್ರೀಯ ಹೆದ್ದಾರಿಗಳು ಹಾದುಹೋಗಿವೆ ಜೊತೆಗೆ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಸೇರಿದಂತೆ ಅನೇಕರು ಸರ್ಕಾರಿ ಕೆಲಸಕ್ಕಾಗಿ ನಗರಕ್ಕೆ ಆಗಮಿಸಿ ಸರ್ಕಾರಿ ವಸತಿ ಗೃಹದಲ್ಲಿ ವಾಸ್ತವ್ಯ ಮಾಡುತ್ತಾರೆ. ಈ ಹಿನ್ನಲೆಯಲ್ಲಿ ಸಾಂಕೇತಿಕವಾಗಿ ವಿಐಪಿ ಅತಿಥಿ ಗೃಹ ಉದ್ಘಾಟಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿಗಳು, ಲೋಕೋಪಯೋಗಿ ಇಲಾಖೆ ಸಚಿವರಿಂದ ಉದ್ಘಾಟಿಸಲಾಗುವುದು ಎಂದರು.
ಪ್ರವಾಸಿ ಮಂದಿರದ ವಿಐಪಿ ಅತಿಥಿ ಗೃಹವನ್ನು ರೂ.2.5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಸರ್ಕಾರಿ ಅತಿಥಿ ಗೃಹದ ಅನಿವಾರ್ಯತೆ ಹೆಚ್ಚಾಗಿರುವುದರಿಂದ ಸಾಂಕೇತಿಕವಾಗಿ ಉದ್ಘಾಟಿಸಿ ಬಳಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಪ್ರವಾಸಿ ಮಂದಿರದ ಪಕ್ಕದಲ್ಲಿಯೇ ಸುಮಾರು 5 ಕೋಟಿ ವೆಚ್ಚದಲ್ಲಿ ವಿಐಪಿ ಅತಿಥಿ ಗೃಹ ನಿರ್ಮಿಸಲು ಉದ್ದೇಶಿಸಲಾಗಿದ್ದು, ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಮುಂದಿನ ವಾರದಲ್ಲಿ ಭೂಮಿಪೂಜೆ ನೆರವೇರಿಸಲಾಗುವುದು. ಇದರ ಜೊತೆಗೆ ಚಿತ್ರದುರ್ಗ ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ ವಿಭಾಗ ಮತ್ತು ಉಪವಿಭಾಗ ಕಚೇರಿಯ ಅವರಣದಲ್ಲಿ ಸಕ್ಯೂಟ್ ಹೌಸ್ ಅತಿಥಿ ಗೃಹ ನಿರ್ಮಾಣ ಕಾಮಗಾರಿಗಾಗಿ ರೂ.8 ಕೋಟಿ ಅನುದಾನ ಮಂಜೂರಾತಿ ಆಗಿದೆ. ಹಾಗೂ ಹಳೇ ಪ್ರವಾಸಿ ಮಂದಿರವನ್ನು ರೂ.3 ಕೋಟಿ ವೆಚ್ಚದಲ್ಲಿ ದುರಸ್ತಿ ಕಾರ್ಯ ಮಾಡಲಾಗಿದ್ದು, ಎಲ್ಲವೂ ಸೇರಿ ಪ್ರವಾಸಿ ಮಂದಿರದಲ್ಲಿ ಸುಮಾರು 25 ಸುಸಜ್ಜಿತವಾಗಿ ಕೊಠಡಿಗಳ ಸೌಲಭ್ಯ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಚಿತ್ರದುರ್ಗ ನಗರದಲ್ಲಿ ಡಿಸಿ ಕಚೇರಿ ನಿರ್ಮಾಣಕ್ಕೆ ರೂ.25 ಕೋಟಿ ಅನುದಾನ ಮಂಜೂರಾಗಿ ಒಂದು ವರ್ಷವಾಗಿದೆ. ಹಾಗಾಗಿ ಡಿಸಿ ಕಚೇರಿ ನಿರ್ಮಾಣ ಕಾಮಗಾರಿ ಕೆಲಸ ಪ್ರಾರಂಭ ಮಾಡಲಾಗುತ್ತಿದೆ. ನಂತರ ಮುಖ್ಯಮಂತ್ರಿಗಳು ನಗರಕ್ಕೆ ಬಂದಾಗ ಅವರಿಂದ ಶಂಕುಸ್ಥಾಪನೆ ಮಾಡಿಸಿ ಉತ್ತಮ ದರ್ಜೆಯ ಜಿಲ್ಲಾ ಕಚೇರಿ ನಿರ್ಮಾಣ ಮಾಡಲಾಗುವುದು ಎಂದು ಮಾಹಿತಿ ನಿಡಿದರು.
ಈ ಸಂದರ್ಭದಲ್ಲಿ ಲೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಸತೀಶ್ಬಾಬು, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.