ಡಾ.ಕೆ.ಜಿ.ಮೂಡಲಗಿರಿಯಪ್ಪ ಪೌಂಡೇಷನ್ ನಿಂದ ಗ್ರಾಮೀಣ ಸರ್ಕಾರಿ ಶಾಲೆ ದತ್ತು ಪಡೆಯಲು ಅರ್ಜಿ ಆಹ್ವಾನ
1 min read
ಹಿರಿಯೂರು :ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳು ಮೂಲ ಸೌಕರ್ಯಗಳಿಂದ ವಂಚಿತವಾಗಿದ್ದು ಅತಿ ಹಿಂದುಳಿದಿವೆ. ಈ ಸರ್ಕಾರಿ ಶಾಲೆ ಮಕ್ಕಳ ಶೈಕ್ಷಣಿಕ ಪ್ರಗತಿಗೋಸ್ಕರ ಶಾಲೆಗಳನ್ನು ದತ್ತು ತೆಗೆದುಕೊಳ್ಳಲಾಗುತ್ತಿದೆ ಎಂಬುದಾಗಿ ಡಾ .ಕೆ.ಜಿ.ಮೂಡಲಗಿರಿಯಪ್ಪ ಪೌಂಡೇಷನ್ ಅಧ್ಯಕ್ಷರಾದ ಹುಚ್ಚವ್ವನಹಳ್ಳಿ ಡಾ. ಪ್ರಸನ್ನ ಹೇಳಿದ್ದಾರೆ.
ನಗರದ ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಡಾ.ಕೆ.ಜಿ.ಮೂಡಲಗಿರಿಯಪ್ಪ ಪೌಂಡೇಷನ್ ವತಿಯಿಂದ 3 ಸರ್ಕಾರಿ ಶಾಲೆಗಳನ್ನು ದತ್ತು ಪಡೆಯಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ತಾಲ್ಲೂಕಿನ ಜಿ.ಎಲ್.ಪಿ.ಎಸ್ ತಿರುಮಲ ನಗರ, ಜಿ.ಎಲ್.ಪಿ.ಎಸ್ ಬೆಲ್ಲಹಳ್ಳಿ, ಅಂಬೇಡ್ಕರ್ ನಗರ, ಮತ್ತು ಜಿ.ಎಚ್.ಪಿ.ಎಸ್ ಕುನ್ನಿಕೆರೆ ಉರ್ದು ಶಾಲೆಗಳನ್ನು ದತ್ತು ಪಡೆದುಕೊಂಡು ಶಾಲಾ ಮಕ್ಕಳಿಗೆ ಲೇಖನ ಸಾಮಾಗ್ರಿ, ಕುಡಿಯುವ ನೀರಿನ ವ್ಯವಸ್ಥೆ, ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಮುಂತಾದ ವಿವಿಧ ಯೋಜನೆಗಳನ್ನು ಕಾರ್ಯಗತ ಮಾಡುವ ಯೋಜನೆ ಇರುವುದರಿಂದ ಈ ಮೇಲ್ಕಂಡ ಶಾಲೆಗಳನ್ನು ನಮ್ಮ ಪೌಂಡೇಷನ್ ದತ್ತು ನೀಡಿ, ಶಾಲಾ ಮಕ್ಕಳ ಶ್ರೇಯೋಭಿವೃದ್ಧಿಗೆ ಅನುವು ಮಾಡಿಕೊಡುವಂತೆ ಶಿಕ್ಷಣಾಧಿಕಾರಿಗಳನ್ನು ಕೋರಿದರು.
ಈ ಸಂದರ್ಭದಲ್ಲಿ ಡಾ.ಕೆ.ಜಿ.ಮೂಡಲಗಿರಿಯಪ್ಪ ಪೌಂಡೇಷನ್ ಅಧ್ಯಕ್ಷರಾದ ಡಾ.ಪ್ರಸನ್ನ ಹುಚ್ಚವ್ವನಹಳ್ಳಿ, ಕಾರ್ಯದರ್ಶಿ ಎಂ.ಮಂಜುನಾಥ್ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.