ಇವತ್ತಾದರೂ ಹರಿಯುವುದೆ ಭದ್ರಾ ?
1 min readಕಳೆದ ದಿನಗಳಿಂದ ಭದ್ರಾ ನೀರನ್ನು ವಾಣಿ ವಿಲಾಸ ಸಾಗರಕ್ಕೆ ಹರಿಸಿದ್ದರೆ ಈ ವೇಳೆಗೆ ಸಾಕಷ್ಟು ನೀರು ಸಂಗ್ರಹವಾಗುತ್ತಿತ್ತು. ಆದರೆ ನೀರೆತ್ತುವ ಸಮಯಕ್ಕೆ ಸರಿಯಾಗಿ ವಿಘ್ನಗಳು ಎದುರಾಗುತ್ತಿವೆ.
ಭದ್ರಾ ನೀರನ್ನು ವಾಣಿ ವಿಲಾಸ ಸಾಗರಕ್ಕೆ ಹರಿಸಲು ರಾಜ್ಯ ಸರ್ಕಾರವೇ ನಿಗದಿ ಪಡಿಸಿದ್ದು ಹಲವು ದಿನಾಂಕಗಳು. ಉದಾಹರಣೆಗೆ ಆಗಸ್ಟ್-25, ಆ.27, ಸೆ.2, ಸೆ.4 ಇಂದು ಸೆ.5 ನೀರು ಹರಿಯುತ್ತೋ ಇಲ್ಲವೋ ಎನ್ನುವ ಆತಂಕ ಇಂದೂ ಇದೆ.
ರಾಜಕಾರಣಿಗಳ ಸ್ವಪ್ರತಿಷ್ಠೆಯೇ, ಅಧಿಕಾರಿಗಳ ವಿಳಂಬ ಧೋರಣೆಯೇ, ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯೇ ತಿಳಿಯುತ್ತಿಲ್ಲ. ಭದ್ರಾ ನೀರು ಹರಿಸಲು ನಿಗದಿಯಾದ ಒಂದೊಂದು ದಿನ ರದ್ದಾಗಿರುವುದನ್ನು ನೋಡಿದರೆ ಬಲವಾದ ಕಾರಣಗಳು ಇಲ್ಲದಿಲ್ಲ ಎನ್ನುವಂತಾಗಿದೆ. ಜನಪ್ರತಿನಿಧಿಗಳ ಮುಸಿಕಿನ ಗುದ್ದಾಟದಲ್ಲಿ ಕೂಸು(ಜನತೆ) ಬಡವಾಯ್ತು ಎನ್ನುವಂತಾಗಿದೆ.
ಸೆ.ರ4ಶುಕ್ರವಾರವೇ ಭದ್ರಾ ನೀರು ಗ್ಯಾರಂಟಿ ಹರಿಯಲಿದೆ ಎನ್ನುವ ವಿಶ್ವಾಸ ಜನರಲ್ಲಿತ್ತು. ಸಂಸದ ಎ.ನಾರಾಯಣಸ್ವಾಮಿ, ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಎಸ್.ನವೀನ್ ಮತ್ತಿತರರು ಬೆಟ್ಟದ ತಾವರೆಕೆರೆ ಪಂಪ್ ಹೌಸ್ ನಲ್ಲಿ ರಾತ್ರಿವರೆಗೂ ಅಧಿಕಾರಿಗಳೊಂದಿಗೆ ಕಾದು ಕೂತಿದ್ದು ನೀರೆತ್ತುವ ಕಾರ್ಯಕ್ಕೆ ಪ್ರಯತ್ನ ನಡೆಸಿದ್ದಾರೆ. ಆದರೆ ವಿದ್ಯುತ್ ತಾಂತ್ರಿಕ ಕಾರಣದಿಂದಾಗಿ ಶುಕ್ರವಾರ ನೀರೆತ್ತಲು ಸಾಧ್ಯವಾಗಿಲ್ಲ. ಸೆ.5ರ ಶನಿವಾರ ನೂರಕ್ಕೆ ನೂರಷ್ಟು ನೀರೆತ್ತಿ ವಾಣಿ ವಿಲಾಸ ಸಾಗರಕ್ಕೆ ಹರಿಸಲಾಗುತ್ತದೆ ಎನ್ನುವ ವಿಶ್ವಾಸದ ಮಾತುಗಳು ಅಧಿಕಾರಿಗಳಿಂದ ಬಂದಿವೆ. ಆದರೂ ಇಂದು ಏನಾಗುತ್ತೋ ಎನ್ನುವ ಆತಂಕ ರೈತರಲ್ಲಿದೆ.