ಕಾಂಗ್ರೆಸ್ ತ್ಯಜಿಸಿದವರಿಗೆ ಮರಳಿ ಗೂಡಿಗೆ ಮುಕ್ತ ಅವಕಾಶ: ಡಿಕೆಶಿ
1 min readಬೆಂಗಳೂರು, ಫೆಬ್ರವರಿ 22: ಕಾಂಗ್ರೆಸ್ ತೊರೆದು ಇತರೆ ಪಕ್ಷಗಳಿಗೆ ಸೇರ್ಪಡೆಯಾಗಿರುವ ಮುಖಂಡರನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತೆ ಪಕ್ಷಕ್ಕೆ ಆಹ್ವಾನಿಸಿದ್ದಾರೆ. ಪಕ್ಷದ ಸಿದ್ಧಾಂತಗಳನ್ನು ಒಪ್ಪಿಕೊಂಡು ಬರುವವರಿಗೆ ಕಾಂಗ್ರೆಸ್ನಲ್ಲಿ ಮುಕ್ತ ಅವಕಾಶವಿದೆ ಎಂದು ಅವರು ತಿಳಿಸಿದ್ದಾರೆ.
ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷರಾಗಿ ಧ್ರುವನಾರಾಯಣ ಮತ್ತು ರಾಮಲಿಂಗಾ ರೆಡ್ಡಿ ಅವರು ಪ್ರಮಾಣವಚನ ಸ್ವೀಕರಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಸೇರುವವರಿಗೆ ನಾನು ಮುಕ್ತ ಆಹ್ವಾನ ನೀಡುತ್ತಿದ್ದೇನೆ. ಷರತ್ತುಗಳಿಲ್ಲದೆ ಪಕ್ಷದ ತತ್ವ- ಸಿದ್ಧಾಂತ ಒಪ್ಪಿಕೊಂಡು ಯಾರೇ ಪಕ್ಷಕ್ಕೆ ಬಂದರೂ ಅವರನ್ನು ಸ್ವಾಗತಿಸುತ್ತೇವೆ ಎಂದಿದ್ದಾರೆ.
ಪಕ್ಷಕ್ಕೆ ಸೇರ್ಪಡೆ ಮಾಡಲು ಒಂದು ಸಮಿತಿ ರಚನೆ ಮಾಡಲಾಗುತ್ತದೆ. ಯಾರೆಲ್ಲ ಕಾಂಗ್ರೆಸ್ ಬಿಟ್ಟು ಹೋಗಿದ್ದೀರೋ ಅವರು ಮತ್ತೆ ಪಕ್ಷಕ್ಕೆ ವಾಪಸ್ ಬರಬಹುದು ಎಂದು ಡಿಕೆ ಶಿವಕುಮಾರ್, ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸರ್ಕಾರ ಸೇರಿಕೊಂಡ ಮುಖಂಡರಿಗೆ ಪರೋಕ್ಷ ಆಹ್ವಾನ ನೀಡಿದರು.
ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ತತ್ವ, ಸಿದ್ಧಾಂತ ಮರೆತ ವೇಳೆ ಪಕ್ಷ ಸೋಲು ಅನುಭವಿಸುತ್ತದೆ. ಅವುಗಳನ್ನು ನಂಬಿದಾಗ ಗೆಲುವು ಸಿಗುತ್ತದೆ. ನಾವು ಇಂದು ಹೋರಾಟ ರೂಪಿಸಬೇಕು. ಅದಕ್ಕೆ ಅವಕಾಶಗಳನ್ನು ಹುಡುಕಬೇಕಿಲ್ಲ. ಬಿಜೆಪಿ ಸರ್ಕಾರವೇ ಅವಕಾಶಗಳನ್ನು ನೀಡಿದೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದಿದ್ದಾರೆ.
‘ನಾನು ಮುಂದಿನ ಮುಖ್ಯಮಂತ್ರಿ ಎಂದು ಕಾರ್ಯಕರ್ತರು ಘೋಷಣೆ ಕೂಗುತ್ತಾರೆ. ಆದರೆ ನನಗೆ ಇದು ಬೇಕಿಲ್ಲ. ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದು ಮಾತ್ರವೇ ನನಗೆ ಮುಖ್ಯ’ ಎಂದು ಹೇಳಿದ್ದಾರೆ.