ಸಿಟಿ ರೌಂಡ್ಸ್ ಹಾಕಿದ ಡಿಸಿ ಕವಿತಾ ಎಸ್ ಮನ್ನಿಕೇರಿ, ರಸ್ತೆ ಅಗಲೀಕರಣಕ್ಕೆ ಅಡೆತಡೆ ನಿವಾರಿಸಲು ಸೂಚನೆ.
1 min readಚಿತ್ರದುರ್ಗ, ಫೆಬ್ರವರಿ24:
ಚಿತ್ರದುರ್ಗ ನಗರದಲ್ಲಿ ರಸ್ತೆ ಅಗಲೀಕರಣ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಇವುಗಳು ವಿಳಂಬವಾಗದಂತೆ ಮುಂದಿನ ಆರು ತಿಂಗಳೊಳಗಾಗಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಫೆ.24 ಬುಧವಾರದಂದು ಮುಂಜಾನೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರು ಚಿತ್ರದುರ್ಗ ನಗರ ಸಂಚಾರ ನಡೆಸಿದರು. ನಗರದ ಬಿ.ಡಿ.ರಸ್ತೆಯ ಚಳ್ಳಕೆರೆ ಗೇಟ್, ಒನಕೆ ಓಬವ್ವ ಸ್ಟೇಡಿಯಂ ತಿರುವು, ಮೆಜೆಸ್ಟಿಕ್ ವೃತ್ತ, ಶಂಕರ್ ಟಾಕೀಸ್ ಎದುರು, ಗಾಂಧಿವೃತ್ತ, ಕೆಎಸ್ಆರ್ಟಿಸಿ ರಸ್ತೆ, ಅಂಚೆ ಕಚೇರಿ ರಸ್ತೆ, ಗಾಯತ್ರಿ ವೃತ್ತ, ಹೊಳಲ್ಕೆರೆ ರಸ್ತೆಯ ಕನಕವೃತ್ತ ಸೇರಿದಂತೆ ನಗರದ ವಿವಿಧೆಡೆಯ ನಡೆಯುತ್ತಿರುವ ರಸ್ತೆ ಅಗಲೀಕರಣ ಕಾಮಗಾರಿಗಳಿಗೆ ಭೇಟಿ ನೀಡಿ, ರಸ್ತೆ ಅಗಲೀಕರಣದ ಅಡೆತಡೆ ಪರಿಶೀಲಿಸಿದರು.
ಚಿತ್ರದುರ್ಗ ನಗರದ ಶಂಕರ್ ಟಾಕೀಸ್ ಸಮೀಪದಲ್ಲಿ ಮಳೆ ಬಂದಾಗ ಹೆಚ್ಚಿನ ಪ್ರಮಾಣದಲ್ಲಿ ರಸ್ತೆಯಲ್ಲಿ ನೀರು ನಿಂತು ಸಂಚಾರ ತೊಂದರೆಯಾಗುತ್ತಿರುವ ಸ್ಥಳ ಪರಿಶೀಲನೆ ನಡೆಸಿ, ರಸ್ತೆಯಲ್ಲಿ ನೀರು ನಿಲ್ಲದಂತೆ ಮಳೆಯ ನೀರು ಸರಾಗವಾಗಿ ಹೋಗುವಂತೆ ಕ್ರಮವಹಿಸಬೇಕು ಎಂದರು.
ಹೊಳಲ್ಕೆರೆ ರಸ್ತೆಯ ಮಾರ್ಗದಲ್ಲಿ ನಿರ್ಮಾಣ ಆಗುತ್ತಿರುವ ರಸ್ತೆ ಕಾಮಗಾರಿ ವೀಕ್ಷಿಸಿದ ಜಿಲ್ಲಾಧಿಕಾರಿಗಳು, ಆದಷ್ಟು ಶೀಘ್ರದಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಗುತ್ತಿಗೆದಾರರಿಗೆ ತಾಕೀತು ಮಾಡಿದ ಅವರು, ಪ್ರತಿನಿತ್ಯವೂ ನೀರು ಹಾಕಬೇಕು. ಜೊತೆಗೆ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಬೇಕು. ಇಲ್ಲವಾದರೆ ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆಯಾಗಲಿದೆ. ಹಾಗಾಗಿ ಗುತ್ತಿಗೆದಾರರು ಹೆಚ್ಚಿನ ಜವಾಬ್ದಾರಿ ವಹಿಸಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಒತ್ತುವರಿ ತೆರವಿಗೆ ತಾಕೀತು: ನ್ಯಾಯಾಲಯದ ತಡೆಯಾಜ್ಞೆ ಹೊರತುಪಡಿಸಿ ಚಿತ್ರದುರ್ಗ ನಗರದ ವಿವಿಧೆಡೆಯಲ್ಲಿ ಎಲ್ಲೆಲ್ಲಿ ರಸ್ತೆ ಒತ್ತುವರಿ ಹಾಗಿದಿಯೋ ಅಂತಹ ಕಡೆ ಒತ್ತುವರಿ ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅಧಿಕಾರಿಗಳಿಗೆ ಸೂಚಿಸಿದ ಅವರು, ಒತ್ತುವರಿಯನ್ನು ಶೀಘ್ರವಾಗಿ ತೆರವುಗೊಳಿಸಿ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಸತೀಶ್ಬಾಬು, ನಗರಾಭಿವೃದ್ಧಿ ಕೋಶದ ಯೋಜನಾನಿರ್ದೇಶಕ ಸತೀಶ್ರೆಡ್ಡಿ, ನಗರಸಭೆ ಆಯುಕ್ತ ಜೆ.ಟಿ.ಹನುಮಂತರಾಜು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.