ಕೃಷ್ಣಗೊಲ್ಲ ಸಮುದಾಯದ ಭಿಕ್ಷುಕರ ಪಾಡಂತೂ ಹೇಳತೀರದು.
1 min readಕೃಷ್ಣಗೊಲ್ಲ ಸಮುದಾಯದ ಭಿಕ್ಷುಕರ ಪಾಡಂತೂ ಹೇಳತೀರದು.
ಕೊರೋನಾ ಲಾಕ್ಡೌನ್, ಊರೂರು ಅಲೆಯುತ್ತಾ ಟೆಂಟುಗಳಲ್ಲಿ ವಾಸಿಸುತ್ತಾ ಭಿಕ್ಷಾಟನೆಯಿಂದಲೇ ಬದುಕುತ್ತಿರುವ ವಸತಿಹೀನ ಅಲೆಮಾರಿ ಭಿಕ್ಷುಕರನ್ನು ಬಲು ಬಾಧೆಗೀಡುಮಾಡಿದೆ. ಕೋಲೆ ಬಸವನವರು- ಕವಲೇ ಬಸವನವರು – ಗಂಗೆತ್ತಿನವರು ಎಂಬ ಹಲವಾರು ಹೆಸರುಗಳಿಂದ ಗುರುತಿಸಿಕೊಂಡಿರುವ ಕೃಷ್ಣಗೊಲ್ಲ ಸಮುದಾಯದ ಭಿಕ್ಷುಕರ ಪಾಡಂತೂ ಹೇಳತೀರದು.
ಹಸು ಕರು ಹೋರಿಗಳನ್ನು ಬಣ್ಣ ಬಣ್ಣದ ಬಟ್ಟೆಗಳಿಂದ ಶೃಂಗರಿಸಿಕೊಂಡು ಶಹನಾಯಿ ಮೇಳ ಮತ್ತು ಡೋಲು ನುಡಿಸುತ್ತಾ ಊರು ಕೇರಿಗಳ ಬೀದಿಗಳಲ್ಲಿ ಭಿಕ್ಷಾಟನೆ ಮಾಡಿ ಹೊಟ್ಟೆ ಹೊರೆದುಕೊಳ್ಳುತ್ತಿದ್ದ ಅವರೀಗ, ಕೊರೋನಾ ಲಾಕ್ ಡೌನಿನಿಂದಾಗಿ ಭಿಕ್ಷಾಟನೆಗೆ ಹೋಗುವಂತಿಲ್ಲ. ತಮಗೆ ಮತ್ತು ತಮ್ಮ ಕುಟುಂಬದ ಮಕ್ಕಳ ಹೊಟ್ಟೆಗಳಿಗೆ ಅನ್ನ ನೀರು ಕೊಡಲಾಗದ ಸಂಕಷ್ಡದ ಕಾಲದಲ್ಲಿ ಅವರ ಬದುಕಿಗೆ ಆಧಾರವಾಗಿರುವ ದನಗಳಿಗೆ ಮೇವು ನೀರು ಇನ್ನೆಲ್ಲಿಂದ ತಂದಾರು? ಹೀಗಿದ್ದೂ ಎರಡು ವರ್ಷಗಳ ಕಾಲ ಕೊರೋನಾ ದಿನಗಳಲ್ಲಿ ಬೆಂಗಳೂರು ಮಹಾನಗರದ ಹೆಣ್ಣೂರು ಬಂಡೆ ಸಮೀಪದಲ್ಲಿ ಜೀವಿಸಿದ್ದಾರೆಂದರೆ ಅವರಿಗೆ ಶಕ್ತಿ ತುಂಬಿದ ಜೀವದ್ರವ್ಯ ಯಾವುದು? ಕರ್ನಾಟಕದಲ್ಲಿ ಇಂತಹ ಲಕ್ಷಾಂತರ ಗತಿಗೇಡು ಭಿಕ್ಷುಕರಿದ್ದಾರೆ.
ಕೋಲೆ ಬಸವನವರ 54 ಅಲೆಮಾರಿ ಕುಟುಂಬಗಳು ಬೆಂಗಳೂರು ಮಹಾನಗರದ ಹೆಣ್ಣೂರು ಬಡಾವಣೆ ಸಮೀಪದ ಹೆಣ್ಣೂರು ಬಂಡೆ ಜಾಗದಲ್ಲಿ ಕಳೆದ 15 ವರ್ಷಗಳಿಂದ ನೆಲೆಸಿವೆ. ಈಗ್ಗೆ 15 ವರ್ಷಗಳಿಗೂ ಮೊದಲು ಹೆಣ್ಣೂರು ಬಂಡೆ ಸಮೀಪದಲ್ಲಿಯೇ ಮತ್ತೊಂದು ಕಡೆಯಲ್ಲಿ ಏಳೆಂಟು ವರ್ಷಗಳ ಕಾಲ ನೆಲೆಸಿದ್ದರು.
ಇವರು ನೆಲೆಸಿರುವ ಭೂಮಿ ಯಾರ ಮಾಲೀಕತ್ವದಲ್ಲಿದೆ ಎಂಬುದು ನಮಗೆ ತಿಳಿಯದು. ನಿವೇಷನದ ಮಾಲೀಕರು ಒಕ್ಕಲೆಬ್ಬಿಸಿದಾಗ ಇವರು ಬೇರೆ ನೆಲೆ ಹುಡುಕಿಕೊಳ್ಳುತ್ತಾ ಚಲಿಸುತ್ತಿರುತ್ತಾರೆ.
ಕಳೆದ ಕೊರೋನಾ ಮೊದಲನೇ ಅಲೆಯ ಕಾಲದಿಂದಲೂ ‘ಇಂಡಿಯನ್ ಫೋಕ್ ಬ್ಯಾಂಡ್’ ಯುವ ಕಲಾವಿದರ ತಂಡದ ಮೂಲಕ ಈ ಭಿಕ್ಷುಕರಿಗೆ ಆಹಾರ ವಿತರಿಸಲಾಗುತ್ತಿದೆ. ಜಂಬೆ ಸಂಗೀತ ವಾದ್ಯದ ಮೂಲಕ ಅಂತರಾಷ್ಟ್ರೀಯ ಕಲಾವಿದನಾಗಿ ಗುರುತಿಸಿಕೊಂಡಿರುವ ಉತ್ಸಾಹಿ ಯುವಕ ಬಾಲು ಜಂಬೆ ಈ ತಂಡದ ರೂವಾರಿ.
ನಿನ್ನೆ ದಿನ ಆಹಾರ ವಿತರಿಸಿದ ನಮ್ಮೊಂದಿಗೆ:
ಬಾಲು ಜಂಬೆ, ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗದ ಮಾಜಿ ಅಧ್ಯಕ್ಷರಾದ ವೈ.ಮರಿಸ್ವಾಮಿ, ದಲಿತ ಸಂರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷರಾದ ಲಯನ್ ಕೆ.ವಿ.ಬಾಲಕೃಷ್ಣ, ಚಲನಚಿತ್ರ ಕಲಾವಿದ – ಸಾಮಾಜಿಕ ಕಾರ್ಯಕರ್ತ ಚೇತನ್, ನಾಗೇಶ್, ಮಹೇಶ್, ನರಸಿಂಹಯ್ಯ ಮುಂತಾದವರು
ಬಾಲು ಜಂಬೆ : 9741293742 ,
ಡಾ.ವಡ್ಡಗೆರೆ ನಾಗರಾಜಯ್ಯ : 8722724174